ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಶಾಲೆ ನಿಜವಾದ ದೇವಾಲಯವಿದ್ದಂತೆ. ಇಲ್ಲಿರುವ ಪ್ರತಿಯೊಬ್ಬ ಗುರುಗಳು ಪ್ರಾಮಾಣಿಕವಾಗಿ ತಮ್ಮ ಶಾಲೆಗಾಗಿ ಶ್ರದ್ಧೆ, ನಿಷ್ಠೆಯಿಂದ ದುಡಿದಿದ್ದಾರೆ. ಅವರ ನಿಸ್ವಾರ್ಥ ಸೇವೆ ಸ್ಮರಣೀಯವಾದದ್ದು. ಹಾಗಾಗಿ ಗುರುಗಳು ಕಲಿಸುವ ಪಾಠ ಪ್ರತಿಯೊಬ್ಬರ ಬಾಳು ಬೆಳಗುತ್ತದೆ ಎಂದು ಶಿಕ್ಷಣ ಪ್ರೇಮಿ ರವೀಂದ್ರನಾಥ ದೊಡ್ಡಮೇಟಿ ಹೇಳಿದರು.
ಸಮೀಪದ ಜಕ್ಕಲಿ ಗ್ರಾಮದ ಅಂದಾನಪ್ಪ ಜ್ಞಾನಪ್ಪ ದೊಡ್ಡಮೇಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ಜರುಗಿದ 1998-99ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಜ್ಞಾನ ತಂತ್ರಜ್ಞಾನ ಮುಂದುವರಿದ ಈ ಕಾಲದಲ್ಲಿ ವಿಶ್ವವೇ ಒಂದು ಗ್ರಾಮದಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಅನೇಕ ವರ್ಷಗಳ ನಂತರ ಹಿರಿಯ ವಿದ್ಯಾರ್ಥಿಗಳು ಮತ್ತು ಗುರುಗಳನ್ನು ಒಟ್ಟುಗೂಡಿಸುವ, ತಮ್ಮ ಹಳೆಯ ದಿನಗಳನ್ನು ಮೆಲಕು ಹಾಕುವ ಸುಂದರ ಕ್ಷಣಗಳಿಗೆ ಸಾಕ್ಷಿಯಾದ ಇಂತಹ ಕಾರ್ಯಕ್ರಮ ಇದೀಗ ಅಗತ್ಯವಿದೆ. ಆ ಮೂಲಕ ಈಗಿರುವ ವಿದ್ಯಾರ್ಥಿಗಳಿಗೂ ಸಾಧಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ನರೇಗಲ್ಲ ಪೊಲೀಸ್ ಠಾಣೆಯ ಪಿಎಸ್ಐ ಐಶ್ವರ್ಯ ವಿಶ್ವನಾಥ ನಾಗರಾಳ, ಗುರು-ಶಿಷ್ಯರ ಸಂಬಂಧ ಒಂದು ಬಾಂಧವ್ಯದಂತೆ. ಗುರುವಿಗೆ ಶಿಷ್ಯರು ವಂದನೆ ಸಲ್ಲಿಸುವ ಪರಂಪರೆ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಿಕ್ಷಕ ವಿ.ವಿ. ಅಣ್ಣಿಗೇರಿ ಕಾರ್ಯಕ್ರಮದ ಔಚಿತ್ಯತೆ, ಗುರು ಭಕ್ತಿ, ಗುರು-ಶಿಷ್ಯರ ಪರಂಪರೆ ಕುರಿತು ಮಾರ್ಮಿಕವಾಗಿ ಮಾತನಾಡಿದರು. ನಿವೃತ್ತ ಶಿಕ್ಷಕರಾದ ಎಸ್.ಟಿ. ಗುಳಗಣ್ಣವರ, ಎಂ.ವೈ. ಹಳೆಮನೆ, ಡಿ.ಬಿ. ತಳವಾರ, ಸಿ.ವಿ. ಗುತ್ತೆಪ್ಪನವರ, ಎಸ್.ಟಿ. ಕಳಸಾಪುರ, ಎಸ್.ಆರ್. ಬಾಗಲಿ, ಎಸ್.ಬಿ. ಬಳಿಗೇರ, ನಿವೃತ್ತ ದ್ವಿತೀಯ ದರ್ಜೆ ಸಹಾಯಕ ಎನ್.ಬಿ. ಹಿರೇಮನಿ, ಅಯ್ಯಪ್ಪ ತಿಲಗರ, ಎಚ್.ವೈ. ಮಣ್ಣೊಡ್ಡರ ಇವರನ್ನು ಸನ್ಮಾನಿಸಲಾಯಿತು.
ಶಿಕ್ಷಕರಾದ ನೆಹರು ಮನೋಳಿ, ಆರ್.ಡಿ. ಬಡಿಗೇರ, ಗೌರಮ್ಮ, ಸಾವಿತ್ರಿ, ಮಂಜುನಾಥ ಹೂಗಾರ ಇದ್ದರು. 1998-99 ನೇ ಸಾಲಿನ ವಿದ್ಯಾರ್ಥಿಗಳಾದ ಪ್ರಮೋದ್ ಯಾವಗಲ್ಲ, ಬಸವರಾಜ ಶಿವಶಿಂಪರ, ಶ್ರೀನಿವಾಸ ಹುಲ್ಲೂರ, ಶಿವರಾಜ ಮುಗಳಿ, ನಜೀರ್ ಗಡಾದ, ಸಂಗಪ್ಪ ತಮ್ಮಿನಾಳ, ಗುರು ಭಜಂತ್ರಿ, ರಾಜಸಾಬ್ ಓಲೆಕಾರ, ಮಹೇಶ್ ಶಿವಶಿಂಪರ, ಶಂಕ್ರಪ್ಪ ಅರಮನಿ, ಸಿದ್ದಪ್ಪ ಮಾದರ, ಪರಮೇಶ ಕುಂಬಾರ, ಪ್ರೇಮಾ ಹುಲ್ಲೂರ, ರೇಣುಕಾ ಉಮಚಗಿ, ಬಸವಣ್ಣೆವ್ವ ತಳವಾರ, ಸುಮಂಗಲಾ ಪಾಟೀಲ, ಸಾವಿತ್ರಿ ಪಟ್ಟಣಶೆಟ್ಟಿ, ಶರಣಮ್ಮ ಶಿವಶಿಂಪರ, ಮಮತಾಜ ನದಾಫ್, ಅಂಬಿಕಾ ಬಲ್ಕಿ, ಜುಲೇಖ ಗಡಾದ, ಸಪೂರ ಗಡಾದ ಪಾಲ್ಗೊಂಡಿದ್ದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಶಿಕ್ಷಕ, ಆಕಾಶವಾಣಿ ಕಲಾವಿದ ಸಿ.ಎಂ. ವಡಗೇರಿ, ಶಿಕ್ಷಕ ವೃತ್ತಿ ಎಲ್ಲಾ ವೃತ್ತಿಗಳಲ್ಲಿಯೇ ಶ್ರೇಷ್ಠ ವೃತ್ತಿ. ಶಿಕ್ಷಕರು ಸಮಾಜದ ಬಹುದೊಡ್ಡ ಆಸ್ತಿ. ಶಿಕ್ಷಕರೆಂದರೆ ಕೇವಲ ವ್ಯಕ್ತಿಯಲ್ಲ, ಅವರು ಸಮಾಜದ ಬಹುದೊಡ್ಡ ಶಕ್ತಿ ಎಂದರು.