ಬೆಂಗಳೂರು:- ಇಂದಿನಿಂದ ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಫಲಪುಷ್ಪ ಪ್ರದರ್ಶನ ನಡೆಯಲಿದೆ.
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಬೆಳಗ್ಗೆ ಉದ್ಘಾಟಿಸಲಿದ್ದಾರೆ. ಆಗಸ್ಟ್ 8ರಿಂದ 19ರವರೆಗೆ ಫಲಪುಷ್ಪ ಪ್ರದರ್ಶನ ನಡೆಯಲಿದೆ.
ಈ ಬಾರಿಯ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ ಸಂವಿಧಾನ ಶಿಲ್ಪಿ ಭಾರತರತ್ನ ಡಾ.ಬಿ.ಆರ್. ಅಂಬೇಡ್ಕರ್ ಥೀಮ್ ಆಧರಿಸಿದೆ. ಜೊತೆಗೆ ನವದೆಹಲಿಯ ಸಂಸತ್ ಭವನದ ಕಲಾಕೃತಿ ಇರಲಿದೆ.
ಸಂಸತ್ ಭವನದ ಪ್ರತಿಕೃತಿಯು 3.6 ಲಕ್ಷ ಗುಲಾಬಿ ಹಾಗೂ 2.4 ಲಕ್ಷ ಸೇವಂತಿಗೆ ಹೂಗಳಲ್ಲಿ ಅನಾವರಣಗೊಂಡಿದೆ. ಸಂಸತ್ ಭವನದ ಮುಂಭಾಗದಲ್ಲಿ 12 ಅಡಿ ಎತ್ತರದ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ರಾರಾಜಿಸಲಿದೆ. ಅಂಬೇಡ್ಕರ್ ಅವರ ಚೈತ್ಯಭೂಮಿ ಸ್ಮಾರಕ ಸ್ತೂಪವನ್ನು 3.4 ಲಕ್ಷ ಹೂಗಳಿಂದ ನಿರ್ಮಿಸಲಾಗಿದೆ.
ಮಹಾಡ್ ಸತ್ಯಾಗ್ರಹ, ಕಲಾ ರಾಮ್ ದೇವಸ್ಥಾನದ ಪ್ರವೇಶ, ಕೋರೆಗಾಂವ್ ವಿಜಯೋತ್ಸವ ಮುಂತಾದ ಅಂಬೇಡ್ಕರ್ ಜೀವನದ ಮಹತ್ವದ ಸನ್ನಿವೇಶಗಳ ಕಲಾಕೃತಿಗಳ ಪ್ರದರ್ಶನವಿದೆ. ಹೊರರಾಜ್ಯಗಳಿಂದ 8.6 ಲಕ್ಷ ಹೂವುಗಳನ್ನು ರಾಜಧಾನಿಗೆ ತರಲಾಗಿದೆ. 12 ದಿನಗಳ ಕಾಲ ನಡೆಯಲಿರುವ ಕಲರ್ಫುಲ್ ಪುಷ್ಪ ಪ್ರದರ್ಶನಕ್ಕೆ ಈ ಬಾರಿ 2.80 ಕೋಟಿ ವೆಚ್ಚ ಮಾಡಲಾಗಿದೆ.