ಗದಗ: ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಾಳೆಯಿಂದ ಪೂರ್ಣ ಪ್ರಮಾಣದ ಉತ್ಖನನ ಕಾರ್ಯ ಆರಂಭವಾಗಲಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ಗದಗ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
“ಉತ್ಖನನಕ್ಕೆ ಬಿಸಿಲು ಅಗತ್ಯ. ಮಳೆಯಿದ್ದರೆ ಕಾರ್ಯಕ್ಕೆ ಅಡಚಣೆ ಆಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ಆದ್ದರಿಂದ ನಾಳೆಯಿಂದ ಪೂರ್ಣ ಪ್ರಮಾಣದ ಉತ್ಖನನ ಆರಂಭ ಮಾಡುತ್ತೇವೆ” ಎಂದು ಹೇಳಿದ್ದಾರೆ.
ಉತ್ಖನನಕ್ಕಾಗಿ ವಿಶೇಷ ತಜ್ಞರನ್ನು ನೇಮಕ ಮಾಡಲಾಗಿದ್ದು, ಲಕ್ಕುಂಡಿ ಜಿಲ್ಲೆಗೆ ಮಾತ್ರವಲ್ಲ ರಾಜ್ಯಕ್ಕೆ ವಿಶೇಷ ಐತಿಹಾಸಿಕ ಸ್ಥಳ ಎಂದು ಸಚಿವರು ಹೇಳಿದರು.
ಲಕ್ಕುಂಡಿಯಲ್ಲಿ 101 ದೇವಸ್ಥಾನಗಳು ಮತ್ತು 101 ಬಾವಿಗಳು ಇದ್ದು, ಇದು ಅಪಾರ ಸಂಸ್ಕೃತಿ, ಕಲಾಕೃತಿ ಮತ್ತು ಪರಂಪರೆಯ ಸಂಪತ್ತನ್ನು ಹೊಂದಿದೆ ಎಂದರು.
“ಮಳೆ ಬಂದಾಗ ಕೆಲ ಸಂದರ್ಭಗಳಲ್ಲಿ ಬಂಗಾರ, ಮುತ್ತು, ಹವಳ, ರತ್ನಗಳು ಸಿಗುತ್ತಿದ್ದವೆಂಬ ನಂಬಿಕೆ ಇದೆ. ಆದರೆ ಲಕ್ಕುಂಡಿಯ ನಿಜವಾದ ಸಂಪತ್ತು ನಿಧಿ ಅಲ್ಲ – ಅದರ ಇತಿಹಾಸ, ಸಂಸ್ಕೃತಿ ಮತ್ತು ಕಲಾ ಪರಂಪರೆ” ಎಂದು ಪಾಟೀಲ್ ಸ್ಪಷ್ಟಪಡಿಸಿದರು.
ಹಂಪಿ, ಬದಾಮಿ, ಪಟ್ಟದಕಲ್ಲು, ಸಹ್ಯಾದ್ರಿ ಬೆಟ್ಟಗಳಂತೆ ಲಕ್ಕುಂಡಿಯನ್ನು ಸಹ ವಿಶ್ವ ಪಾರಂಪರಿಕ ತಾಣ ಆಗಿ ಘೋಷಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಲಕ್ಕುಂಡಿ ಗ್ರಾಮದ ಸ್ಥಳಾಂತರ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದ್ದು,
16 ಹೊಸ ದೇವಾಲಯ ಮತ್ತು ಬಾವಿಗಳನ್ನು ರಕ್ಷಿತ ಸ್ಮಾರಕಗಳಾಗಿ ಘೋಷಿಸಲಾಗಿದೆ.
ಬಯಲು ಮಂದಿರ (ಮ್ಯೂಸಿಯಂ) ನಿರ್ಮಾಣಕ್ಕೆ ₹1 ಕೋಟಿ 65 ಲಕ್ಷ ಅನುದಾನ ನೀಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.



