ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಧರ್ಮಸ್ಥಳ ಕ್ಷೇತ್ರದ ಶ್ರೀ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ರಾಜ್ಯಾದ್ಯಂತ ಗ್ರಾಮಾಭಿವೃದ್ಧಿ ಯೋಜನೆ ಜಾರಿಯಲ್ಲಿದ್ದು, ಇದು ಸಾಕಷ್ಟು ಜನರಿಗೆ ಪ್ರಯೋಜನ ತಂದಿದೆ ಎಂದು ಗ್ರಾಮಾಭಿವೃದ್ಧಿ ಸಂಸ್ಥೆಯ ಜಿಲ್ಲಾ ನಿರ್ದೇಶಕ ಯೋಗೇಶ ಅಭಿಮತ ವ್ಯಕ್ತಪಡಿಸಿದರು.
ಪಟ್ಟಣದ ಶಿಗ್ಲಿ ನಾಕಾ ಬಳಿ ಜೀರ್ಣೋದ್ಧಾರಗೊಳ್ಳುತ್ತಿರುವ ಪುರಾತನ ಇತಿಹಾಸ ಹೊಂದಿರುವ ಮಾರುತಿ ದೇವಸ್ಥಾನದ ಕಾಮಗಾರಿ ಭರದಿಂದ ಸಾಗಿದ್ದು, ಈ ನಿಟ್ಟಿನಲ್ಲಿ ಧರ್ಮಸ್ಥಳದಿಂದ ಮಾರುತಿ ದೇವಸ್ಥಾನದ ಕಟ್ಟಡ ಕಾಮಗಾರಿಗೆ 1.50 ಲಕ್ಷ ರೂಗಳ ಧನಸಹಾಯಧನದ ಚೆಕ್ನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಮಾರುತಿ ದೇವಸ್ಥಾನ ಸಮಿತಿಯವರಿಗೆ ಸಮರ್ಪಿಸಿ ಅವರು ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯನ್ನು ಹೆಗ್ಗಡೆಯವರು 42 ವರ್ಷಗಳ ಹಿಂದೆ ಪ್ರಾರಂಭಿಸಿದ್ದು, ಇದೀಗ ಹಳ್ಳಿ ಹಳ್ಳಿಗಳಲ್ಲಿ ಚಾಲ್ತಿಯಲ್ಲಿದೆ. ಇದರಿಂದ ಮಹಿಳೆಯರಿಗೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಶಕ್ತಿ ತುಂಬುವ ಕಾರ್ಯವಾಗಿದೆ. ರಾಜ್ಯಾದ್ಯಂತ ಅನೇಕ ಗುಡಿ ಗುಂಡಾರಗಳ ಜೀರ್ಣೋದ್ಧಾರ ಕಾರ್ಯಗಳಿಗೆ ಧನಸಹಾಯ ಮಾಡುತ್ತಿದ್ದು, ಇದು ಮಂಜುನಾಥ ಸ್ವಾಮಿಯ ಪ್ರಸಾದ ರೂಪದಲ್ಲಿ ಇಂತಹ ಕಾರ್ಯಗಳಿಗೆ ತಲುಪುತ್ತಿದೆ. ಈ ಮೊತ್ತ ಸದ್ವಿನಿಯೋಗವಾಗಬೇಕು ಎನ್ನುವದು ಖಾವಂದರ ಇಚ್ಛೆಯಾಗಿದೆ ಎಂದರು.
ಪೂರ್ಣಾಜಿ ಖರಾಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಳೆಮಲ್ಲಿಕಾರ್ಜುನ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಸಮಿತಿ ಅಧ್ಯಕ್ಷ ತಿಪ್ಪಣ್ಣ ಸಂಶಿ, ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರ್ಗಣ್ಣವರ, ರಾಜಣ್ಣ ಕುಂಬಿ, ಚಂಬಣ್ಣ ಬಾಳಿಕಾಯಿ, ಪ್ರೊ. ಆರ್.ಎನ್. ಪಾಟೀಲ, ಶಿವಯೋಗಿ ಅಂಕಲಕೋಟಿ, ನವೀನ ಬೆಳ್ಳಟ್ಟಿ, ಫಕ್ಕೀರೇಶ ಮ್ಯಾಟಣ್ಣವರ, ಫಕ್ಕೀರೇಶ ರಟ್ಟಿಹಳ್ಳಿ, ಯೋಜನಾಧಿಕಾರಿ ಪುನೀತ್, ದುರ್ಗೆಶ ನಾಯಕ, ಓಂಕಾರಪ್ಪ ಗಜಾಕೋಶ, ಸೋಮಣ್ಣ ಬಸಾಪೂರ, ಶೃತಿ, ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಚಂದ್ರಶೇಖರ ಹುಣಸಿಕಟ್ಟಿ ಸೇರಿದಂತೆ ಅನೇಕರಿದ್ದರು.
ಶಾಸಕ ಡಾ.ಚಂದ್ರು ಲಮಾಣಿ, ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಮಾತನಾಡಿ, ಧರ್ಮಸ್ಥಳ ಕ್ಷೇತ್ರದ ಮಹಿಮೆ ಅಪಾರವಾಗಿದ್ದು, ಹತ್ತು ಹಲವಾರು ಯೋಜನೆಗಳ ಮೂಲಕ ಜನರನ್ನು ಮೇಲಕ್ಕೆತ್ತುವ ಕಾರ್ಯವನ್ನು ಸಂಸ್ಥೆ ಮಾಡುತ್ತಿದೆ. ಇಲ್ಲಿನ ದೇವಸ್ಥಾನಕ್ಕೆ ಹೆಗ್ಗಡೆಯವರು ಧನಸಹಾಯ ಒದಗಿಸಿರುವದು ನಮ್ಮ ಭಾಗ್ಯವಾಗಿದ್ದು, ಇಲ್ಲಿನ ಎಲ್ಲ ಸಮಿತಿಯವರು ಉತ್ತಮ ವಿಚಾರಧಾರೆಯೊಂದಿಗೆ ಇಂತಹ ಕಾರ್ಯಕ್ಕೆ ಮುಂದಾಗಿದ್ದಾರೆ. ಅನೇಕ ದಾನಿಗಳು ಸಹಾಯ ಮಾಡುವದಕ್ಕೆ ಮುಂದಾಗುತ್ತಿದ್ದಾರೆ. ಇಲ್ಲಿ ನೀಡಿದ ದಾನ ಸತ್ಪಾತ್ರಕ್ಕೆ ತಲುಪುತ್ತದೆ ಎನ್ನುವದರಲ್ಲಿ ಎರಡು ಮಾತಿಲ್ಲ ಎಂದು ಹೇಳಿದರು.