ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಬೇಸಿಗೆಯ ರಜಾ ದಿನಗಳಲ್ಲಿ ಮಕ್ಕಳು ಟಿ.ವಿ ಮತ್ತು ಮೊಬೈಲ್ ನೋಡುತ್ತ ವಿನಾಕಾರಣ ಕಾಲ ಕಳೆಯುವುದನ್ನು ತಪ್ಪಿಸಲು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯವು ನೈತಿಕ ಶಿಕ್ಷಣದೊಂದಿಗೆ ಆಧ್ಯಾತ್ಮಿಕ ಲೋಕದ ಅದ್ಭುತ ರಹಸ್ಯವನ್ನು ತಿಳಿಸಿಕೊಡಲು ಬೇಸಿಗೆ ಶಿಬಿರವನ್ನು ಹಮ್ಮಿಕೊಂಡಿದೆ ಎಂದು ಸಂಚಾಲಕಿ ಬಿ.ಕೆ. ಸರೋಜಕ್ಕ ಹೇಳಿದರು.
ಇಲ್ಲಿಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಶಾಖೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಮಕ್ಕಳಿಗೆ ಹಮ್ಮಿಕೊಂಡಿರುವ ಬೇಸಿಗೆ ಶಿಬಿರದಲ್ಲಿ ಅವರು ಮಾತನಾಡಿದರು.
ಇಂದು ಮಕ್ಕಳು ಅತಿಯಾಗಿ ಟಿ.ವಿ ಮತ್ತು ಮೊಬೈಲ್ನ ಗೀಳು ಹಚ್ಚಿಕೊಂಡು ಸಂಸ್ಕೃತಿ ಮತ್ತು ಸಂಪ್ರದಾಯದಿAದ ವಿಮುಖರಾಗುತ್ತಿದ್ದಾರೆ. ಇದು ಶಾಲಾ ರಜಾ ದಿನಗಳಲ್ಲಿ ಅತಿಯಾಗುತ್ತಿದೆ. ಆದ್ದರಿಂದ 11 ದಿನಗಳ ಕಾಲ ನಡೆಯುವ ಬೇಸಿಗೆ ಶಿಬಿರದಲ್ಲಿ ತಮ್ಮ ಮಕ್ಕಳನ್ನು ಕಳಿಸಬೇಕು. ಶಿಬಿರದಲ್ಲಿ ಮಕ್ಕಳ ದುಷ್ಟ ವರ್ತನೆಯನ್ನು ಪರಿವರ್ತನೆ ಮಾಡಲಾಗುವುದು. ಆರೋಗ್ಯದ ಬಗ್ಗೆ ಜ್ಞಾನವನ್ನು ತುಂಬಿ ಅವರಲ್ಲಿ ಜ್ಞಾಪಕ ಶಕ್ತಿಯನ್ನು ವೃದ್ಧಿಸುವಂತೆ ಮಾಡಲಾಗವುದು. ಈ ಶಿಬಿರದಲ್ಲಿ 5ರಿಂದ 9ನೇ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದ್ದು, ಈ ಶಿಬಿರ ಸಂಪೂರ್ಣ ಉಚಿತವಾಗಿರುತ್ತದೆ ಎಂದು ತಿಳಿಸಿದರು.
ಗ್ರಾ.ಪಂ ಮಾಜಿ ಉಪಾಧ್ಯಕ್ಷೆ ಪ್ರೇಮಾ ಮಟ್ಟಿ, ನಿವೃತ್ತ ಉಪನ್ಯಾಸಕ ಆರ್.ಎನ್. ಗೌಡರ ಉಪಸ್ಥಿತರಿದ್ದರು.