ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಈಚೆಗೆ ರೋಣ ತಾಲೂಕಿನ ಬೆಳವಣಿಕಿ ಬಳಿಯ ಇರುವೆ ಹಳ್ಳದಲ್ಲಿ ಕೊಚ್ಚಿಹೋಗಿ ಮರಣ ಹೊಂದಿದ ಆರೋಗ್ಯ ಇಲಾಖೆಯ ಬಸಮ್ಮ ಗುರಿಕಾರರ ನರೇಗಲ್ಲದ ಮನೆಗೆ ಶಾಸಕ ಜಿ.ಎಸ್. ಪಾಟೀಲ ಭೇಟಿ ನೀಡಿ ಅವರ ಪಾಲಕರಿಗೆ ಸಾಂತ್ವನ ಹೇಳಿದರು.
ಭಗವಂತನ ಇಚ್ಛೆಗೆ ವಿರುದ್ಧವಾಗಿ ನಾವು ಏನೂ ಮಾಡುವಂತಿಲ್ಲ. ಮೂವರು ಹೊರಟಿದ್ದ ಗಾಡಿಯಲ್ಲಿ ಇಬ್ಬರು ಬದುಕಿ ಬಂದರೆ, ಇವಳಿಗೆ ಆ ಅವಕಾಶವನ್ನು ಭಗವಂತ ನೀಡಲಿಲ್ಲ. ಬದುಕಿನಲ್ಲಿ ಬಂದದ್ದನ್ನು ಎದುರಿಸಲೇಬೇಕು. ನೀವು ಧೈರ್ಯವಾಗಿರಿ, ನಿಮ್ಮೊಂದಿಗೆ ನಾವಿದ್ದೇವೆ ಎಂದು ಶಾಸಕರು ಪಾಲಕರಿಗೆ ಧೈರ್ಯ ತುಂಬಿದರು.
ತಮ್ಮೊಂದಿಗೆ ಬಂದಿದ್ದ ರೋಣ ತಹಶೀಲ್ದಾರ ನಾಗರಾಜ ಮತ್ತು ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ ಬಳಿ ಮೃತರ ಕುಟುಂಬಕ್ಕೆ ಯಾವ ರೀತಿ ಸಹಾಯ ಮಾಡಬಹುದು ಎಂಬುದನ್ನು ಕೇಳಿ ತಿಳಿದರಲ್ಲದೆ, ಆದಷ್ಟು ಬೇಗ ಈ ಕುಟುಂಬಕ್ಕೆ ಎಲ್ಲ ಆರ್ಥಿಕ ಮತ್ತು ಇತರೆ ಸೌಲಭ್ಯಗಳನ್ನು ಒದಗಿಸಿ ಅನುಕೂಲ ಮಾಡಿಕೊಡಬೇಕೆಂದು ಶಾಸಕರು ಅಧಿಕಾರಿಗಳಿಗೆ ತಿಳಿಸಿದರು.
ಮೃತ ಪುತ್ರಿಯನ್ನು ನೆನೆದ ತಂದೆ-ತಾಯಿಯರ ಕಣ್ಣಾಲಿಗಳಲ್ಲಿ ನೀರು ಮಡುಗಟ್ಟಿತ್ತು. ನಮ್ಮ ಮನೆತನ ನಡೆಯಲು ಅವಳ ತಮ್ಮನಿಗೆ ಸರಕಾರಿ ನೌಕರಿಯನ್ನು ಒದಗಿಸಿಕೊಡಬೇಕೆಂದು ಬಸಮ್ಮಳ ಪಾಲಕರು ಶಾಸಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಡಾ. ಕೆ.ಬಿ. ಧನ್ನೂರ, ಶಹರ ಕಾಂಗ್ರೆಸ್ ಅಧ್ಯಕ್ಷ ಶಿವನಗೌಡ ಪಾಟೀಲ, ವಿ.ಬಿ. ಸೋಮನಕಟ್ಟಿಮಠ, ಪ.ಪಂ ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣಪ್ಪ ಬೆಟಗೇರಿ, ಹಿರಿಯ ನ್ಯಾಯವಾದಿ ಎಂ.ಎನ್. ಹುಲಕೋಟಿ, ಪ.ಪಂ ಮುಖ್ಯಾಧಿಕಾರಿ ಮಹೇಶ್ ನಿದಶೇಶಿ, ಕಳಕನಗೌಡ ಪೊಲೀಸ್ ಪಾಟೀಲ, ಎಂ.ಎಸ್. ದಢೇಸೂರಮಠ, ಶೇಕಪ್ಪ ಕೆಂಗಾರ, ರಾಜಾಬಕ್ಷಿ ನದಾಫ್, ಪ.ಪಂ ಸದಸ್ಯರು ಸೇರಿದಂತೆ ಮುಖಂಡರಿದ್ದರು.


