ಅಂಜುಮನ್ ಚುನಾವಣೆ ಫಲಿತಾಂಶ ಭಾನುವಾರ ರಾತ್ರಿ ಪ್ರಕಟವಾಗಿದ್ದು, ಗ್ಯಾಸ್ ಸಿಲಿಂಡರ್ ಚಿನ್ಹೆ ಅಡಿ ಸ್ಪರ್ಧಿಸಿದ್ದ ಇಂಕ್ವಿಲಾಬ್ ಗ್ರೂಪ್ ಸದಸ್ಯರು ಮೇಲುಗೈ ಸಾಧಿಸಿದ್ದಾರೆ.
ಗದಗ: ತೀವ್ರ ಕುತೂಹಲ ಕೆರಳಿಸಿದ್ದ ಸ್ಥಳೀಯ ಅಂಜುಮನ್ ಇಸ್ಲಾಂ ಸಂಸ್ಥೆಯ ಚುನಾವಣೆ ಫಲಿತಾಂಶ ಭಾನುವಾರ ರಾತ್ರಿ ಪ್ರಕಟಗೊಂಡಿದ್ದು, ಗ್ಯಾಸ್ ಸಿಲಿಂಡರ್ ಚಿನ್ಹೆ ಅಡಿಯಲ್ಲಿ ಸ್ಪರ್ಧಿಸಿದ್ದ ಇಂಕ್ವಿಲಾಬ್ ಗ್ರೂಪ್ನ ಸದಸ್ಯರು ಅತಿ ಹೆಚ್ಚು ಮತಗಳನ್ನು ಪಡೆದು ಅಚ್ಚರಿ ಮೂಡಿಸಿದ್ದು, ಬಹುಮತಕ್ಕೆ ಅವಶ್ಯವಿದ್ದ ಸ್ಥಾನಗಳಲ್ಲಿ ಮೇಲುಗೈ ಸಾಧಿಸಿದ್ದಾರೆ.

ಅಂಜುಮನ್ ಇಸ್ಲಾಂ ಸಂಸ್ಥೆಯ ಆಡಳಿತ ಮಂಡಳಿಯ ಹನ್ನೊಂದು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಇಂಕ್ವಿಲಾಬ್ ಗ್ರೂಪ್ನ ಎಂಟು ಜನರು ಆಯ್ಕೆಯಾಗುವ ಮೂಲಕ ಅವಳಿ ನಗರದ ಸಮುದಾಯದ ಅಚ್ಚರಿಗೆ ಕಾರಣವಾಗಿದೆ.

ಸಿಲಿಂಡರ್ ಚಿನ್ಹೆಯ ಗುರುತಿನ ಬ್ಯಾನರ್ನಲ್ಲಿ ಚುನಾವಣಾ ಅಖಾಡಕ್ಕೆ ದುಮುಕಿದ್ದ ಹನ್ನೊಂದು ಜನರಲ್ಲಿ ಎಂಟು ಜನರು ಅತಿ ಹೆಚ್ಚು ಮತಗಳಿಸಿ ಆಯ್ಕೆಯಾದರೆ, ಮೂವರು ಬ್ಯಾಟ್ ಚಿನ್ಹೆ ಅಡಿಯಲ್ಲಿ ಸ್ಪರ್ಧಿಸಿದ್ದ ಮದೀನಾ ಗ್ರೂಪ್ನ ಮೂವರು ಆಯ್ಕೆಯಾಗಿದ್ದಾರೆ.

ಅನ್ವರ್ ಬಾಗೇವಾಡಿ, ಎ ಆರ್ ಕೊಪ್ಪಳ, ಎ.ಕೆ ಮುಲ್ಲಾ, ದಾವಲಸಾಬ್ (ಬಾಷಾಸಾಬ್) ಮಲ್ಲಸಮುದ್ರ, ಎಮ್. ಎಮ್ ಬಿಜಾಪುರ, ಎಮ್ ಆರ್ ನಾರಾಯಣಕೇರಿ, ಎಮ್ ಆರ್ ಸೋಂಪೂರ, ಎಮ್ ಜೆ ಕದಡಿ, ಎಚ್ ಜಿ ಕಾಗದಗಾರ, ಅಸೀಫ್ ದಂಡಿನ ಹಾಗೂ ಸುಲೇಮಾನ್ ಮಾಳೆಕೊಪ್ಪ ಚಲಾವಣೆ ಆದ ಮತಗಳಲ್ಲಿ ಅತಿ ಹೆಚ್ಚು ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ.

ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ಗೆದ್ದವರ ಬೆಂಬಲಿತರ ಸಂಭ್ರಮ ಮುಗಿಲು ಮುಟ್ಟಿದ್ದು, ಗೆಲುವಿನ ರೂವಾರಿಗಳನ್ನು ಹೆಗಲ ಮೇಲೆ ಹೊತ್ತು ಇಂಕ್ವಿಲಾಬ್ ಜಿಂದಾಬಾದ್ ಘೋಷಣೆ ಮೊಳಗಿಸಿದರು.
ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವಿನ ಭರವಸೆ ಮೂಡಿಸಿದ್ದ ದಾವಲ್ ಇರಕಲ್ಲ ಹಾಗೂ ಇಮಾಮ್ ಮೊರಬದ ಕೆಲವು ಮತಗಳ ಅಂತರದಿಂದ ಹಿನ್ನಡೆ ಅನುಭವಿಸಿದ್ದಾರೆ.
ಇಂಕ್ವಿಲಾಬ್ ಗ್ರೂಪ್ ಅತಿ ಹೆಚ್ಚಿನ ಸದಸ್ಯರು ಗೆಲುವು ಸಾಧಿಸಲು ನ್ಯಾಯವಾದಿ ಮುಕ್ತಾರ್ ಮೌಲ್ವಿ ಹಾಗೂ ಸಂಗಡಿಗರು ಯುವಕರನ್ನು ಒಗ್ಗೂಡಿಸಿದ್ದು. ಅದರಲ್ಲೂ ಕೇಂದ್ರ ಸರ್ಕಾರದ ವಕ್ಫ್ ಕಾಯ್ದೆ ವಿಚಾರವೂ ಗೆಲುವಿಗೆ ಪ್ರಮುಖ ಕಾರಣ ಎನ್ನಲಾಗುತ್ತದೆ. ಅಷ್ಟೇ ಅಲ್ಲದೇ ಚುನಾವಣಾ ಪ್ರಚಾರದ ವೇಳೆಯಲ್ಲಿ ಇಂಕ್ವಿಲಾಬ್ ಗ್ರೂಪ್ನ ಸದಸ್ಯರು, ಮುಸ್ಲಿಂ ಸಮುದಾಯದ ಅಭಿವೃದ್ಧಿ, ಆಸ್ಪತ್ರೆ, ಶಾಲಾ-ಕಾಲೇಜ್ ಹಾಗೂ ಶಾದಿಮಹಲ್ ಸೇರಿದಂತೆ ಮೂಲಭೂತ ಸೌಕರ್ಯಗಳು, ಹಕ್ಕುಗಳ ಬಗ್ಗೆ ಸಮುದಾಯದ ಜನರಲ್ಲಿ ಭರವಸೆ ನೀಡಿದ್ದು ಕೂಡ ಗೆಲುವಿಗೆ ಕಾರಣವಾಗಿದೆ ಎನ್ನಲಾಗಿದೆ.
ಚುನಾವಣಾ ಅಧಿಕಾರಿಗಳಾಗಿ ತೌಸಿಫ್ ಅಹ್ಮದ ಮಕಾನದಾರ್ ಕಾರ್ಯ ನಿರ್ವಹಿಸಿದರು.


