ಗದಗ:- ಇಂದು ಶ್ರೀ ರಾಮಸೇನೆ ಮುಖಂಡರು ಸೇರಿ ಹಲವು ಸಂಘಟನೆಗಳು ಕೊಟ್ಟಿರುವ ಗದಗ ಬಂದ್ ಗೆ ಜಿಲ್ಲಾಡಳಿತ ನಿಷೇಧಾಜ್ಞೆ ಏರಿದೆ. ಹೀಗಾಗಿ ನಿಷೇಧಾಜ್ಞೆ ನಡುವೆಯೂ ಬೆಳ್ಳಂ ಬೆಳಗ್ಗೆ ಪ್ರತಿಭಟನೆಗೆ ಮುಂದಾಗಿದ್ದ ಶ್ರೀರಾಮ ಸೇನೆ ಮುಖಂಡರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಎಸ್, ಸುಮಾರು 40 ದಿನಗಳ ಕಾಲ ನಡೆಯುವ ಶ್ರೀ ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವದಲ್ಲಿ ಅನ್ಯ ರಾಜ್ಯದ ವ್ಯಾಪಾರಸ್ಥರನ್ನು ಕೈ ಬಿಟ್ಟು ಕನ್ನಡಿಗರಿಗೆ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡುವಂತೆ ಒತ್ತಾಯಿಸಿ ಶ್ರೀರಾಮ ಸೇನೆಯ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳು ಇಂದು ಗದಗ ಬಂದ್ಗೆ ಕರೆ ನೀಡಿವೆ.
ಆದರೆ ಬಂದ್ ಗೆ ಜಿಲ್ಲಾಡಳಿತ ಅನುಮತಿ ಕೊಟ್ಟಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಬಂಧ್ ಗೆ ನಿಷೇಧಾಜ್ಞೆ ಹೇರಲಾಗಿದೆ ಎಂದು ಗದಗ ಎಸ್ಪಿ ಬಿ ಎಸ್ ನೇಮಗೌಡ ಮಾಹಿತಿ ಕೊಟ್ಟಿದ್ದಾರೆ. ಅದರಂತೆ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಜಾತ್ರೆಯಲ್ಲಿ ಅನ್ಯ ರಾಜ್ಯದ, ಅನ್ಯ ಧರ್ಮದ ವ್ಯಾಪಾರಿಗಳಿಂದ ಸ್ಥಳೀಯ ವ್ಯಾಪಾರಕ್ಕೆ ಹೊಡೆತ ಬೀಳಲಿದೆ. ಹೀಗಾಗಿ ಸ್ಥಳೀಯ ವ್ಯಾಪಾರಸ್ಥರಿಗೆ ವ್ಯಾಪಾರ ಮಾಡಲು ಅವಕಾಶ ಕೊಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಹೀಗಾಗಿ ಜಿಲ್ಲಾಡಳಿತದ ಆದೇಶಕ್ಕೂ ಕ್ಯಾರೇ ಎನ್ನದೆ ಪ್ರತಿಭಟನೆಗೆ ಮುಂದಾಗಿದ್ದ ಶ್ರೀರಾಮಸೇನೆ ಮುಖಂಡರನ್ನು ಬೆಳ್ಳಂ ಬೆಳಗ್ಗೆ ರಸ್ತೆಗೆ ಇಳಿಯುವ ಮುನ್ನವೇ ಹಲವರನ್ನು ಪೊಲೀಸರು ಬಂಧಿಸಿದ್ದಾರೆ.
ಬಂದ್ ಗೆ ಅವಕಾಶ ಇಲ್ಲ: ಗದಗ ಎಸ್ ಪಿ ಬಿಎಸ್ ನೇಮಗೌಡ!
ಇತ್ತ ಗದಗ ಬಂದ್ ಗೆ ಯಾವುದೇ ಅವಕಾಶ ಇಲ್ಲ ಅಂತ ಗದಗ ಎಸ್ ಪಿ ಬಿಎಸ್ ನೇಮಗೌಡ ಅವರು ಈಗಾಗಲೇ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ಕೊಟ್ಟಿದ್ದಾರೆ. ಗದಗ ತೋಂಟದಾರ್ಯ ಮಠದ ಜಾತ್ರೆಯಲ್ಲಿ ಹೊರರಾಜ್ಯದ ಅನ್ಯ ಧರ್ಮದ ವ್ಯಾಪಾರಿಗಳಿಗೆ ಅವವಾಶ ನೀಡಿದ್ದಕ್ಕೆ ಶ್ರೀರಾಮ ಸೇನೆ ಮುಖಂಡರು ಸೇರಿ ಹಲವು ಸಂಘಟನೆಗಳು ಹೋರಾಟಕ್ಕೆ ಕರೆ ಕೊಟ್ಟಿದೆ. ಆದರೆ ಕಾನೂನು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪ್ರತಿಬಂಧಕಾಜ್ಜೆ ಜಾರಿ ಮಾಡಲಾಗಿದೆ. ಒಂದು ವೇಳೆ ಆದೇಶ ಉಲ್ಲಂಘನೆ ಮಾಡಿದ್ರೆ ಕ್ರಮ ಗ್ಯಾರಂಟಿ ಎಂದು ಎಸ್ಪಿ ಹೇಳಿದ್ದಾರೆ.
ಎಂದಿನಂತೆ ಜನ ಜೀವನ ನಡೆಸಲು ಅವಕಾಶ ಮಾಡಿಕೊಡಬೇಕು. ಒಂದು ವೇಳೆ ಒತ್ತಾಯ ಪೂರ್ವಕ ಬಂದ್ ಮಾಡಿದ್ರೆ ಕಠಿಣ ಕ್ರಮ ಎದುರಿಸಿ ಎಂದು ಎಸ್ಪಿ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಅಲ್ಲದೇ ಎಸ್ ಪಿ, ಎಎಸ್ ಪಿ, ನಾಲ್ವರು ಡಿವೈಎಸ್ ಪಿ ಸೇರಿದಂತೆ 10 ಇನ್ಸಪೆಕ್ಟರ್ ನೇತೃತ್ವದಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಎರಡು ಕೆಎಸ್ ಆರ್ ಪಿ ತುಕಡಿ, ಆರು ಡಿಆರ್ ಪಾರ್ಟಿ ಸೇರಿದಂತೆ 200 ಸಿಬ್ಬಂದಿಯಿಂದ ಬಂದೋಬಸ್ತ್ ಮಾಡಲಾಗಿದೆ ಎಂದು ಗದಗ ಎಸ್ ಪಿ ಬಿಎಸ್ ನೇಮಗೌಡ ಮಾಹಿತಿ ಕೊಟ್ಟಿದ್ದಾರೆ.
ಜಿಟಿಜಿಜಿ ಮಳೆ ನಡುವೆ ಖಾಕಿ ಬಂದೋಬಸ್ತ್:
ಗದಗನಲ್ಲಿ ಬೆಳಿಗ್ಗೆಯಿಂದ ಜಿಟಿ ಜಿಟಿ ಮಳೆ ಶುರುವಾಗಿದೆ. ಭಾರೀ ಮಳೆ ಹಿನ್ನೆಲೆ ಮನೆಯಿಂದ ಹೊರ ಬರಲು ಜನತೆ ಹಿಂದೇಟು ಹಾಕುತ್ತಿದ್ದಾರೆ. ಅಂಗಡಿ ಮುಗ್ಗಟ್ಟು ತೆರೆಯೋಕು ಮಳೆರಾಯ ಅಡ್ಡಿ ಮಾಡಿದ್ದಾನೆ. ಇನ್ನೊಂದೆಡೆ ಮಳೆಯಲ್ಲೇ ಮಠದ ಸುತ್ತಲೂ ಬಂದೋಬಸ್ತ್ ಕೈಗೊಳ್ಳಲಾಗಿದೆ. ಗದಗ ತೋಂಟದಾರ್ಯ ಮಠದ ಸುತ್ತ ಬಿಗಿ ಪೊಲೀಸ್ ಬಂದೊಬಸ್ತ್ ಕೈಗೊಳ್ಳಲಾಗಿದ್ದು, ಕೊಡೆ ಹಿಡಿದು ಬಂದೋಬಸ್ತ್ ನಲ್ಲಿ ಪೊಲೀಸ್ ಸಿಬ್ಬಂದಿ ಕಾರ್ಯನಿರತರಾಗಿದ್ದಾರೆ.