ಗದಗ:- ಜಿಲ್ಲೆಯಾದ್ಯಂತ ರಸಗೊಬ್ಬರದ ಅಭಾವ ಮುಂದುವರಿದಿದೆ.
ಇಲ್ಲಿನ ರೈತರು ಗೊಬ್ಬರಕ್ಕಾಗಿ ಪರದಾಟ ನಡೆಸುತ್ತಿದ್ದು, ರಾತ್ರಿ- ಹಗಲು ಎನ್ನದೇ ರಸಗೊಬ್ಬರಕ್ಕಾಗಿ ಕ್ಯೂ ನಿಲ್ಲುತ್ತಿದ್ದಾರೆ. ಹೀಗಾಗಿ ಪೊಲೀಸರ ಕಾವಲಿನೊಂದಿಗೆ ರಣತೂರ ಗ್ರಾಮದಲ್ಲಿ ರೈತರಿಗೆ ಯೂರಿಯಾ ಗೊಬ್ಬರ ವಿತರಣೆ ಮಾಡಲಾಗುತ್ತಿದೆ. ಸ್ವತಃ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಅವರು, ರಣತೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಬಳಿಕ ಕೌಂಟರ್ ನಲ್ಲಿ ಕುಳಿತು ಆಧಾರ್ ಕಾರ್ಡ್ ಪರಿಶೀಲನೆ ಮಾಡಿ ಗೊಬ್ಬರ ವಿತರಣೆ ಮಾಡಿದ್ದಾರೆ.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ರಣತೂರ ಗ್ರಾಮದಲ್ಲಿ ನೂರಾರು ಸಂಖ್ಯೆಯಲ್ಲಿ ಗೊಬ್ಬರಕ್ಕಾಗಿ ರೈತರು ಜಮಾಯಿಸಿದ್ರಿಂದ ಯಾವುದೇ ಅಹಿತಕರ ಘಟನೆ ಸಂಭವಿಸಿದಂತೆ ಪೊಲೀಸ್ ಕಾವಲಿನಲ್ಲಿ ವಿತರಣೆ ಮಾಡಲಾಗಿದೆ. ಈ ಹಿಂದೆ ಗಲಾಟೆ ಆದ ಹಿನ್ನಲೆಯಲ್ಲಿ ಇದೀಗ ಪೊಲೀಸ್ ಭದ್ರತೆಯಲ್ಲಿ ವಿತರಣೆ ಮಾಡಲಾಗುತ್ತದೆ.
ಒಟ್ಟಾರೆ ರಾಜ್ಯದಲ್ಲಿ ರೈತರಿಗೆ ನಿಗದಿತ ಸಮಯದಲ್ಲಿ ಯೂರಿಯಾ ಗೊಬ್ಬರ ವಿತರಣೆ ಮಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದ್ದು, ರೈತರು ಆತಂಕದಲ್ಲಿದ್ದಾರೆ. ಶಿರಹಟ್ಟಿ ಮತಕ್ಷೇತ್ರದಲ್ಲಿಯೂ ಗೊಬ್ಬರದ ಅಭಾವ ಸಾಕಷ್ಟಿದೆ ಎಂದು ಶಾಸಕರು ಮಾಹಿತಿ ನೀಡಿದ್ದಾರೆ.