ಮಂಗಳವಾರ ನಾಪತ್ತೆಯಾಗಿದ್ದ ಯುವಕ-ಶನಿವಾರ ಸುಟ್ಟ ಸ್ಥಿತಿಯಲ್ಲಿ ಪತ್ತೆ!
ಗದಗ: ಜಿಲ್ಲೆಯ ಗದಗ ತಾಲೂಕಿನ ಹುಯಿಲಗೋಳ ಗ್ರಾಮದಲ್ಲಿ ಯುವಕನೊಬ್ಬನ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
27 ವರ್ಷದ ಚಂದ್ರು ಕುರಿ ಎಂಬ ಯುವಕ ಮಂಗಳವಾರ ರಾತ್ರಿ ಮನೆಯಿಂದ ಹೊರಟಿದ್ದಾನೆ. ಆದರೆ, ಮುಂದಿನ ದಿನ ಗ್ರಾಮ ಹೊರವಲಯದ ಬ್ರಿಡ್ಜ್ ಕೆಳಗೆ ಅವನ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಘಟನೆಯು ಕುಟುಂಬಸ್ಥರನ್ನು ದುಃಖದ ಸಾಗರಕ್ಕೆ ತಳ್ಳಿದೆ.
ಕುಟುಂಬಸ್ಥರ ಆರೋಪ – ಕೊಲೆ ಮಾಡಿ ಸುಟ್ಟಿದ್ದಾರೆ
ಮೃತನ ಕುಟುಂಬದವರು ಇದೊಂದು ಪೂರ್ವ ಯೋಜಿತ ಕೊಲೆ ಎಂದು ಆರೋಪಿಸಿದ್ದಾರೆ. ಎದುರು ಮನೆಯ ಕುಟುಂಬದವರ ಮೇಲೆ ಗಂಭೀರ ಅನುಮಾನ ವ್ಯಕ್ತಪಡಿಸಿದ್ದಾರೆ.
ಚಂದ್ರು ಎದುರು ಮನೆಯ ಹೆಣ್ಣುಮಕ್ಕಳನ್ನು ನೋಡುತ್ತಿದ್ದನೆಂಬ ಅನುಮಾನದಿಂದಾಗಿ ಹಿಂದಿನಿಂದಲೂ ಜಗಳಗಳು ನಡೆದಿದ್ದವು ಎಂದು ಕುಟುಂಬಸ್ಥರು ಹೇಳಿದ್ದಾರೆ. ಕೆಲವೊಮ್ಮೆ ಬೈಕ್ ಹತ್ತಿಸಲು ಪ್ರಯತ್ನಿಸಿದ ಘಟನೆಗಳೂ ನಡೆದಿದ್ದವು ಎಂದು ಆರೋಪಿಸಲಾಗಿದೆ. ಇದೇ ಕಾರಣಕ್ಕೆ ಆ ಕುಟುಂಬದವರೇ ಕೊಲೆ ಮಾಡಿ ನಂತರ ಶವವನ್ನು ಸುಟ್ಟಿದ್ದಾರೆ ಎಂದು ಮೃತನ ಕುಟುಂಬದವರು ದೂರಿದ್ದಾರೆ.
ತಂದೆಯ ಆಕ್ರೋಶ – “ಕೊಲೆ ಮಾಡಿದವರನ್ನು ಬಿಡಲ್ಲ”
ಮೃತ ಚಂದ್ರುವಿನ ತಂದೆ ಬಸವರಾಜ್ ದುಃಖ ಮತ್ತು ಆಕ್ರೋಶದಲ್ಲಿ ಮಾತನಾಡಿ, “ನನ್ನ ಮಗ ಒಳ್ಳೆಯ ಹುಡುಗ. ಯಾರ ಜೊತೆಗೂ ತಕರಾರು ಮಾಡಲಿಲ್ಲ. ದಿನವೂ ಕೆಲಸಕ್ಕೆ ಹೋಗುವಾಗ 100 ರೂಪಾಯಿ ಕೇಳುತ್ತಿದ್ದ. ಅಂತಹ ಮಗನನ್ನು ಕಳೆದುಕೊಂಡಿದ್ದೇನೆ. ಕೊಲೆ ಮಾಡಿದವರನ್ನು ಬಿಡುವುದಿಲ್ಲ, ಸೇಡು ತೀರಿಸಿಕೊಳ್ಳುತ್ತೇನೆ” ಎಂದು ಕಣ್ಣೀರಿನಲ್ಲಿ ಪ್ರತಿಜ್ಞೆ ಮಾಡಿದ್ದಾರೆ.
ಇನ್ನೂ ಅವರು, “ನನ್ನ ಬಳಿ ಮೂರು ಎಕರೆ ಹೊಲ ಇದೆ. ಅದು ಹೋದರೂ ಪರವಾಗಿಲ್ಲ, ಆದರೆ ನನ್ನ ಮಗನ ಸಾವಿಗೆ ನ್ಯಾಯ ತರುತ್ತೇನೆ” ಎಂದು ಹೇಳಿದ್ದಾರೆ.
ಮದುವೆ ಕನಸು ನುಚ್ಚುನೂರು!
ಚಂದ್ರು ಮನೆಯ ಹಿರಿಯ ಮಗನಾಗಿದ್ದು, ಅವನ ಮದುವೆಗೆ ಕುಟುಂಬಸ್ಥರು ಸಿದ್ಧತೆ ನಡೆಸುತ್ತಿದ್ದರು. ಬೀಳಲಿಂಗೇಶ್ವರ ಜಾತ್ರೆಯ ಬಳಿಕ ಹುಡುಗಿ ನೋಡಿ ಮದುವೆ ಮಾಡಲು ಯೋಜನೆ ಹಾಕಿಕೊಂಡಿದ್ದರು. ಆದರೆ ಈ ದುರ್ಘಟನೆ ಅವರ ಕನಸುಗಳನ್ನು ಭಗ್ನಗೊಳಿಸಿದೆ.
ಪೊಲೀಸರ ತನಿಖೆ ಆರಂಭ
ಈ ಘಟನೆ ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಶಂಕಿತ ವ್ಯಕ್ತಿಗಳ ವಿಚಾರಣೆ ನಡೆಯುತ್ತಿದೆ.
ಸಮಗ್ರ ತನಿಖೆಯ ಬಳಿಕವೇ ನಿಜಾಂಶ ಹೊರಬರುವ ನಿರೀಕ್ಷೆ ಇದೆ.



