ಗದಗ: ಆಕಸ್ಮಿಕವಾಗಿ ಜೋಡೆತ್ತುಗಳು ಸಾವನ್ನಪ್ಪಿದ ದುರ್ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ರಾಮೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ರಾಮೇನಹಳ್ಳಿ ಗ್ರಾಮದ ವೆಂಕಟೇಶ ಬಾಗಲಿ ಅವರಿಗೆ ಸೇರಿದ ಎರಡು ಎತ್ತುಗಳನ್ನು ಮನೆಯ ಪಕ್ಕದಲ್ಲೇ ಕಟ್ಟಲಾಗಿತ್ತು. ಸುಮಾರು ₹1 ಲಕ್ಷ 20 ಸಾವಿರ ಖರ್ಚು ಮಾಡಿ ಇತ್ತೀಚೆಗೆ ಎತ್ತುಗಳನ್ನು ಖರೀದಿಸಿದ್ದರು.
ಏಕಾಏಕಿ ಎರಡು ಎತ್ತುಗಳು ಸಾವನ್ನಪ್ಪಿರುವುದು ಗ್ರಾಮದಲ್ಲಿ ಆತಂಕಕ್ಕೆ ಕಾರಣವಾಗಿದೆ. ಮನೆಯ ಮಕ್ಕಳಂತೆ ಸಾಕಿದ್ದ ಎತ್ತುಗಳ ಸಾವು ಕಂಡು ವೆಂಕಟೇಶ ಹಾಗೂ ಕುಟುಂಬದವರು ಗೋಳಾಡುತ್ತಿದ್ದಾರೆ. ಜೀವನೋಪಾಯಕ್ಕೆ ಅವಲಂಬನೆಯಾಗಿದ್ದ ಜೋಡೆತ್ತುಗಳ ಸಾವು ರೈತನಿಗೆ ಭಾರೀ ಆರ್ಥಿಕ ನಷ್ಟ ಉಂಟುಮಾಡಿದೆ.
ಸರ್ಕಾರ ತಕ್ಷಣ ಪರಿಹಾರ ನೀಡಿ ನೆರವಿಗೆ ಬರಬೇಕು ಎಂದು ರೈತ ವೆಂಕಟೇಶ ಒತ್ತಾಯಿಸಿದ್ದಾರೆ. ಘಟನೆಯ ಕುರಿತು ಸ್ಥಳೀಯ ಅಧಿಕಾರಿಗಳು ಪರಿಶೀಲನೆ ನಡೆಸುವ ನಿರೀಕ್ಷೆಯಿದೆ.



