ಗದಗ:- ಗದಗದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳದ ಜೊತೆಗೆ ಮೀಟರ್ ಬಡ್ಡಿದಂಧೆಕೋರರ ಹಾವಳಿ ಮಿತಿ ಮೀರಿದ್ದು, ಈ ಮೀಟರ್ ಬಡ್ಡಿ ದಂಧೆಕೋರರ ವಿರುದ್ಧ ಪೊಲೀಸರು, ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಹೌದು, ಗದಗನಲ್ಲಿ ಅಕ್ರಮ ಬಡ್ಡಿ ದಂಧೆಕೋರರ ಹಾವಳಿ ಹೆಚ್ಚಾಗಿದ್ದು, ಇವರ ಹಾವಳಿಗೆ ಬ್ರೇಕ್ ಹಾಕೋಕೆ ಪೊಲೀಸ್ ಇಲಾಖೆ ಟೊಂಕಕಟ್ಟಿ ನಿಂತುಕೊಂಡಿದೆ. ಎರಡು ದಿನಗಳ ಹಿಂದೆ ಸುಮಾರು 12 ಜನರಿಗೆ ಬಿಸಿ ಮುಟ್ಟಿಸಿದ್ದರು.
ಈಗ ಮಂಗಳವಾರ ಗದಗನ ದೊಡ್ಡ ಬಡ್ಡಿ ಕುಳಕ್ಕೆ ಸೇರಿದ 12 ಕಡೆ ದಾಳಿ ಮಾಡಿ ಕಂತೆ ಕಂತೆ ಹಣ ಜಪ್ತಿ ಮಾಡಿ ಇಡೀ ನಾಡಿನ ಜನ ನಿಬ್ಬೆರಗಾಗುವಂತೆ ಮಾಡಿದ್ದಾರೆ. ಬಡ್ಡಿ ಕಿರುಕುಳ ಅನುಭವಿಸ್ತಿದ್ದ ಬಡಪಾಯಿಗಳಿಗೆ ನಿಟ್ಟುಸಿರು ಬಿಡುವಂತೆ ಪೊಲೀಸರು ಮಾಡಿದ್ದಾರೆ.
ಬೆಟಗೇರಿಯ ಯಲ್ಲಪ್ಪ ಮಿಸ್ಕಿನ್ ಗೆ ಸೇರಿದ ಮತ್ತು ಅವನ ಸಂಬಂಧಿಕರ ಮನೆ ಮೇಲೆ ಪೊಲೀಸರು ದಾಳಿ ಮಾಡಿದ್ದು, ಸುಮಾರು 12 ಕಡೆ ದಾಳಿ ಮಾಡಿ 1.50 ಕೋಟಿ ಅಧಿಕ ಹಣ ಜಪ್ತಿ ಮಾಡಿದ್ದಾರೆ ಜೊತೆಗೆ ಸಾಕಷ್ಟು ಚಿನ್ನಾಭರಣ ಹಾಗೂ ಅಡಮಾನದ ದಾಖಲೆಗಳನ್ನ ವಶಕ್ಕೆ ಪಡೆದಿದ್ದಾರೆ.
ಇನ್ನು ಮುಖ್ಯವಾಗಿ ಈತನ ಮೇಲೆ ದಾಳಿ ಮಾಡೋಕೆ ಕಾರಣ ಆತ ಸಾಲಗಾರರಿಗೆ ಕೊಡ್ತಿದ್ದ ಕಿರುಕುಳ. ಹೌದು ಯಲ್ಲಪ್ಪ ಮಿಸ್ಕಿನ್ ಗದಗ ಬೆಟಗೇರಿಯ ಹಲವಾರು ಜನರಿಗೆ ಅಕ್ರಮವಾಗಿ ಬಡ್ಡಿ ಹಣ ನೀಡಿ ಬಡ್ಡಿಗೆ ಬಡ್ಡಿ ಹಾಕಿ ಸಾಕಷ್ಟು ಕಿರುಕುಳ ನೀಡ್ತಿದ್ದ ಎಂಬ ಆರೋಪ ಇದೆ.
ಅದರಂತೆ ಅಶೋಕ ಗಣಾಚಾರಿ ಎಂಬುವರು ಈತ ಕೊಡ್ತಿದ್ದ ಕಿರಕುಳದ ಬಗ್ಗೆ ಬೆಟಗೇರಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇವರು ನೀಡಿರೋ ದೂರಿನ ಆದಾರದ ಮೇಲೆ ಪೊಲೀಸರು ಸುಮಾರು 12 ತಂಡಗಳನ್ನ ರಚನೆ ಮಾಡಿಕೊಂಡು ಖಚಿತ ಮಾಹಿತಿ ಪಡೆದು ಯಲ್ಲಪ್ಪ ಮಿಸ್ಕಿನ್ ಮಾಡಿರೋ ಬೇನಾಮಿ ಆಸ್ತಿಗಳನ್ನೂ ಒಳಗೊಂಡಂತೆ ದಾಳಿ ಮಾಡಿದ್ದಾರೆ. ಸದ್ಯ ಪರಿಶೀಲನೆ ಮುಂದುವರೆದಿದ್ದು ಇನ್ನಷ್ಟು ಮಾಹಿತಿ ಹೊರಬರುವ ಸಾಧ್ಯತೆ ಇದೆ.
ಇನ್ನು ಈ ಆಸಾಮಿಯ ಮೈತುಂಬ ಬರೀ ಬಡ್ಡಿಗೆ ಬಂದಿದ್ದ ಚಿನ್ನಾಭರಣಗಳನ್ನೇ ಹಾಕಿಕೊಂಡು ಮೆರದಾಡ್ತಿದ್ದನಂತೆ…! ಈತನನ್ನ ನೋಡಿ ಅದೆಷ್ಟೋ ರೌಡಿಗಳು ಬಡ್ಡಿದಂಧೆಗೆ ಇಳಿದು ಅಕ್ರಮ ದಂಧೆ ನಡೆಸುತ್ತಿದ್ದರು ಅನ್ನೋ ಮಾತುಗಳು ಸಹ ಕೇಳಿಬರ್ತಿವೆ. ಸದ್ಯ ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂಬಂತೆ ಅಸಾಮಿ ಪೊಲೀಸರ ಕಾರ್ಯಾಚರಣೆಯಲ್ಲಿ ತಗಲಾಕ್ಕೊಂಡಿದ್ದಾನೆ.
ಈ ಬಗ್ಗೆ ಗದಗ ಎಸ್ಪಿ ಬಿ ಎಸ್ ನೇಮಗೌಡ ಮಾತನಾಡಿ ಬೆಟಗೇರಿಯ ಬಡ್ಡಿದಂದೆಕೋರನ ಮೇಲೆ ದಾಳಿ ನಡೆಸಲಾಗಿದ್ದು, ದಾಳಿ ವೇಳೆ 1ಕೋಟಿ 50 ಲಕ್ಷ ನಗದು, ಚಿನ್ನಾಭರಣ ಸೇರಿ ಅಪಾರ ದಾಖಲೆ ಪತ್ತೆಯಾಗಿದೆ.
ಗದಗನ ಬೆಟಗೇರಿಯ ಬಡ್ಡಿ ದಂಧೆಕೋರರ ಯಲ್ಲಪ್ಪ ಮಿಸ್ಕಿನ್ ಹಾಗೂ ಆತನ ಸಂಬಂಧಿಕರ ಮನೆಗಳ ಮೇಲೆ ದಾಳಿ ಏಕಕಾಲಕ್ಕೆ 12 ಕಡೆ ದಾಳಿ ಮಾಡಿದ್ದಾರೆ.
ದಾಳಿ ವೇಳೆ ಕಂತೆ ಕಂತೆ ಹಣ, ಚಿನ್ನ, ಖಾಲಿ ಬಾಂಡ್ ಜಪ್ತಿ ಮಾಡಲಾಗಿದೆ. ಈ ಬಗ್ಗೆ ಅಶೋಕ ಗಣಾಚಾರಿ ಎನ್ನುವವರು ದೂರು ನೀಡಿದ್ರು.
ದೂರಿನ ಅನ್ವಯ ದಾಳಿ ಮಾಡಿದ್ದೇವೆ. ಯಲ್ಲಪ್ಪ ಮಿಸ್ಕಿನ್, ವಿಕಾಸ್ ಮಿಸ್ಕಿನ್, ಮಂಜು ಸಾವಿ, ಈರಣ್ಣ, ಮೋಹನ್ ಎನ್ನುವವರ ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ದಾಳಿ ವೇಳೆ ಅಂದಾಜು 1 ಕೋಟಿ, 50 ಲಕ್ಷ ಹಣ, ಹಾಗೂ ಚಿನ್ನ, ಖಾಲಿ ಬಾಂಡ್ ಚೆಕ್ ಜಪ್ತಿ ಮಾಡಲಾಗಿದೆ. 2016 ರಲ್ಲಿ ಯಲ್ಲಪ್ಪ ಮಿಸ್ಕಿನ್ ಅವರ ಹತ್ತಿರ ಅಶೋಕ ಗಣಾಚಾರಿ ಎನ್ನುವವರು 1 ಕೋಟಿ 93 ಲಕ್ಷ ಕೈಸಾಲ ಪಡೆದಿದ್ದರು. ಅದರಲ್ಲಿ ಅಶೋಕ್, 1 ಕೋಟಿ, 40 ಲಕ್ಷ ರೂಪಾಯಿ ಮರುಪಾವತಿ ಮಾಡಿದ್ದರು.
ಕಲ್ಯಾಣ ಮಂಟಪ, ಸೇರಿದಂತೆ ಅನೇಕ ಆಸ್ತಿ ತನ್ನ ಹೆಸರಿಗೆ ಯಲ್ಲಪ್ಪ ಮಿಸ್ಕಿನ್ ಬರೆದುಕೊಂಡಿದ್ದ. ಇಷ್ಟಾದರೂ ಬಡ್ಡಿ ಹಣ ನೀಡುವಂತೆ ಕಿರುಕುಳ ನೀಡ್ತಾಯಿದ್ದ. ಹೀಗಾಗಿ ಬೆಟಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರು ದಾಖಲಿಸಿಕೊಂಡು ದಾಳಿ ಮಾಡಲಾಗಿದೆ ಎಂದು ಗದಗ ಎಸ್ಪಿ ಬಿ ಎಸ್ ನೇಮಗೌಡ ಹೇಳಿಕೆ ನೀಡಿದ್ದಾರೆ.