ಗದಗ: ಗದಗ ಜಿಲ್ಲೆ ಕಲೆ, ಸಾಹಿತ್ಯ ಹಾಗೂ ಪತ್ರಿಕೋದ್ಯಮ ಕ್ಷೇತ್ರದಲ್ಲಿ ವಿಶಿಷ್ಟ ಗುರುತನ್ನು ಹೊಂದಿದ್ದು, ಪತ್ರಿಕೋದ್ಯಮಕ್ಕೆ ಜಿಲ್ಲೆಯ ಕೊಡುಗೆ ಅಪಾರವಾಗಿದೆ ಎಂದು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ. ವಿ. ಪ್ರಭಾಕರ್ ಅಭಿಪ್ರಾಯಪಟ್ಟರು.
ನಗರದ ಹಾತಲಗೇರಿ ರಸ್ತೆಯಲ್ಲಿರುವ ರತ್ನಾಕರವಾಣಿ ಕನ್ನಡ ದಿನಪತ್ರಿಕೆ ಕಾರ್ಯಾಲಯಕ್ಕೆ ಗುರುವಾರ ಭೇಟಿ ನೀಡಿ ಮಾತನಾಡಿದ ಅವರು, ಅವ್ವ ದತ್ತಿ ನಿಧಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದ ಅಂಗವಾಗಿ ಗದಗ ನಗರಕ್ಕೆ ಆಗಮಿಸಿರುವುದಾಗಿ ತಿಳಿಸಿದರು. ಗದಗ ಐತಿಹಾಸಿಕ ತಾಣವಾಗಿದ್ದು, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಜಿಲ್ಲೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪತ್ರಕರ್ತರ ಸಮಸ್ಯೆಗಳ ಪರಿಹಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಸಮಾಜ ಸುಧಾರಣೆಯಲ್ಲಿ ಮಾಧ್ಯಮದ ಪಾತ್ರವನ್ನು ಅವರು ಸಮಗ್ರವಾಗಿ ಅರಿತುಕೊಂಡಿದ್ದು, ಆ ನಿಟ್ಟಿನಲ್ಲಿ ಪತ್ರಕರ್ತರಿಗೆ ಅಗತ್ಯ ಗೌರವ ನೀಡುತ್ತಿದ್ದಾರೆ ಎಂದು ಹೇಳಿದರು.
ಮಾಧ್ಯಮ ಸಲಹೆಗಾರನಾಗಿ ಪತ್ರಕರ್ತರ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಜಿಲ್ಲಾ ಮಟ್ಟದ ಪತ್ರಿಕೆಗಳಿಗೆ ಸರ್ಕಾರ ಹೆಚ್ಚಿನ ಮಹತ್ವ ನೀಡಿದ್ದು, ಯಾವುದೇ ಕಾರಣಕ್ಕೂ ಜಿಲ್ಲಾ ಪತ್ರಿಕೆಗಳ ಜಾಹೀರಾತು ಕಡಿತವಾಗಬಾರದೆಂದು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಯೋಜನೆ ಜಾರಿಗೆ ತಂದಿದ್ದು, ವಿಶೇಷ ಆರೋಗ್ಯ ಯೋಜನೆ ಕುರಿತು ಚರ್ಚೆ ನಡೆಯುತ್ತಿದೆ. ಸರ್ಕಾರ ಸದಾ ಪತ್ರಿಕೆಗಳ ಬೆಂಬಲಕ್ಕೆ ಬದ್ಧವಾಗಿದೆ ಎಂದು ಭರವಸೆ ನೀಡಿದರು.
ಹಿರಿಯರಿಂದ ಅಭಿನಂದನೆ
ಹಿರಿಯ ವರದಿಗಾರ ಅನಂತ್ ಕಾರ್ಕಳ ಮಾತನಾಡಿ, “ಕೆ. ವಿ. ಪ್ರಭಾಕರ್ ಅವರು ಮಾಧ್ಯಮ ಸಲಹೆಗಾರರಾದ ಬಳಿಕ ಮಾಧ್ಯಮ ಹಾಗೂ ಪತ್ರಿಕೆಗಳ ಸಮಸ್ಯೆಗಳ ಕುರಿತು ಸಮಗ್ರ ಅಧ್ಯಯನ ನಡೆಸಿ, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಪರಿಹಾರಕ್ಕೆ ಸ್ಪಂದಿಸುವಂತೆ ಮಾಡಿದ್ದಾರೆ. ಅವರ ಕಾರ್ಯ ಶ್ಲಾಘನೀಯ,” ಎಂದು ಹೇಳಿದರು.
ಈ ಸಂದರ್ಭದಲ್ಲಿ ನಿಂಗಪ್ಪ ಚವಡಿ, ಎಚ್. ಎಂ. ಶರೀಫನವರ್, ರಾಮಕೃಷ್ಣ ರೊಳ್ಳಿ, ಶರಣು ದೊಡ್ಡೂರ, ಪ್ರಕಾಶ್ ಕರಿ, ಸಂಜೀವ್ ಪಾಂಡ್ರೆ, ಗಣೇಶ್ ಪೈ, ರಮೇಶ್ ಭಜಂತ್ರಿ, ದೇವಪ್ಪ ಲಿಂಗದಾಳ, ಗಿರೀಶ್ ಕಮ್ಮಾರ್, ವಿನಯ್ ಪೂಜಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
“ಕೆ. ವಿ. ಪ್ರಭಾಕರ್ ಅವರು ಮಾಧ್ಯಮ ಸಲಹೆಗಾರರಾದ ನಂತರ ಸರ್ಕಾರ ಮತ್ತು ಮಾಧ್ಯಮದ ನಡುವೆ ಸಮನ್ವಯ ಹೆಚ್ಚಾಗಿದೆ. ಮಾಧ್ಯಮ ಕ್ಷೇತ್ರಕ್ಕೆ ಅವರದೇ ಆದ ವಿಶೇಷ ಕೊಡುಗೆ ಇದೆ. ರತ್ನಾಕರವಾಣಿ ಕನ್ನಡ ದಿನಪತ್ರಿಕೆ ಕಾರ್ಯಾಲಯಕ್ಕೆ ಆಗಮಿಸಿ ಶುಭ ಹಾರೈಸಿರುವುದು ಸಂತಸ ತಂದಿದೆ.”
— ಜಗದೀಶ್ ಎಸ್. ಪಿ.
ಸಂಪಾದಕರು, ರತ್ನಾಕರವಾಣಿ ಕನ್ನಡ ದಿನಪತ್ರಿಕೆ



