ಗದಗ: ಜಿಲ್ಲೆಯಲ್ಲಿ ಶಾಕಿಂಗ್ ಎಕ್ಸ್ಕ್ಲೂಸಿವ್ ವರದಿ ಹೊರಬಿದ್ದಿದೆ. ಶಿರಹಟ್ಟಿ ತಾಲೂಕಿನ ಜಲ್ಲಿಗೇರಿ ಹಾಗೂ ಮಹಾಲಿಂಗಪುರ ಗ್ರಾಮದ ನಡುವಿನ ಕಪ್ಪತಗುಡ್ಡದ ಒಳಗಿನ ಗುಹೆಗಳಲ್ಲಿ ಮತ್ತಷ್ಟು ಚಿನ್ನದ ನಿಕ್ಷೇಪಗಳು ಕ್ಯಾಮೆರಾದಲ್ಲಿ ಸೆರೆಗೊಂಡಿವೆ.
ಭಯಂಕರ ನಿಕ್ಷೇಪ ಹೊಂದಿರುವ ಈ ಗುಹೆಗಳೊಳಗೆ ರಿಯಾಲಿಟಿ ಚೆಕ್ ನಡೆಸಲಾಗಿದ್ದು, ಪ್ರಾಣದ ಹಂಗು ತೊರೆದು ರಿಯಲ್ ಚಿನ್ನದ ಹುಡುಕಾಟ ಮಾಡಲಾಗಿದೆ. ಗುಹೆಯೊಳಗೆ ಪ್ರವೇಶಿಸಿದಂತೆ ನಾಲ್ಕೈದು ದಿಕ್ಕುಗಳಲ್ಲಿ ಕವಲೊಡೆಯುವ ಸುರಂಗಗಳಿದ್ದು, ಅಲ್ಲಲ್ಲಿ ಕಲ್ಲಿನ ಮಧ್ಯೆ ಫಳಫಳ ಹೊಳೆಯುವ ಚಿನ್ನದ ನಿಕ್ಷೇಪಗಳು ಸ್ಪಷ್ಟವಾಗಿ ಕಾಣುತ್ತವೆ.
ಸ್ಥಳೀಯ ಮೂಲಗಳ ಮಾಹಿತಿ ಪ್ರಕಾರ, ಭ್ರಿಟಿಷರ ಕಾಲದಲ್ಲೇ ಈ ಪ್ರದೇಶದಲ್ಲಿ ಚಿನ್ನ ತೆಗೆದಿರುವ ದಾಖಲೆಗಳಿವೆ. ಚಿನ್ನ ಇರುವುದನ್ನು ಗುರುತಿಸಿದ ಫಿರಂಗಿಗಳು ಎರಡು–ಮೂರು ಕಿಲೋಮೀಟರ್ ಒಳಗೆ ಗುಹೆಗಳನ್ನು ನಿರ್ಮಿಸಿ ಚಿನ್ನ ದೋಚಿದರಂತೆ.
ಇಂದಿಗೂ ಕಪ್ಪತಗುಡ್ಡದ ಮೇಲೆ ಹಲವು ಕಂಪನಿಗಳ ಕಣ್ಣು ಬಿದ್ದಿದೆ. ಆದರೆ ಪರಿಸರವಾದಿಗಳ ತೀವ್ರ ವಿರೋಧದಿಂದಾಗಿ ಈ ಚಿನ್ನದ ಗಣಿಗಳು ರಕ್ಷಣೆಗೊಳಗಾಗಿವೆ. ಸದ್ಯ ಗುಹೆಗಳೊಳಗೆ ಪ್ರವೇಶಿಸಿ ಚಿನ್ನ ವೀಕ್ಷಿಸುವುದಕ್ಕೂ ಸಂಪೂರ್ಣ ನಿಷೇಧ ವಿಧಿಸಲಾಗಿದೆ.
ಕ್ಯಾಮೆರಾದಲ್ಲಿ ಸೆರೆಗೊಂಡ ಈ ದೃಶ್ಯಗಳು, ಗದಗ ಜಿಲ್ಲೆಯೊಳಗೆ ಅಡಗಿರುವ ಅಮೂಲ್ಯ ಸಂಪತ್ತಿನ ಮತ್ತೊಂದು ಭಯಾನಕ ಸತ್ಯವನ್ನು ಬಿಚ್ಚಿಟ್ಟಿವೆ.



