ಗದಗ: ಟೋಲ್ ನಾಕಾದ ಬಳಿ ಪ್ರಯಾಣಿಕರನ್ನು ಹತ್ತಿಸಲು ನಿಯಮಾತ್ಮಕ ನಿರ್ಬಂಧವಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯೊಬ್ಬಳನ್ನು ಕೆಳಗಿಳಿಸಿದ್ದಕ್ಕೆ NWKRTC ಬಸ್ ಕಂಡಕ್ಟರ್ ಮೇಲೆ ಆಕೆಯ ತಂದೆ ಹಾಗೂ ಮತ್ತೊಬ್ಬ ವ್ಯಕ್ತಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಕಪಾಳ ಮೋಕ್ಷ ಮಾಡಿದ ಗಂಭೀರ ಘಟನೆ ಗದಗನಲ್ಲಿ ನಡೆದಿದೆ.
NWKRTCಗೆ ಸೇರಿದ ಬಸ್ ಸಂಖ್ಯೆ KA-26/F-0852ರಲ್ಲಿ ಕಂಡಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ನೇತ್ರಾವತಿ ಕೋಂ ಮಾಂತೇಶ ಪತ್ರಿಮಠ ಅವರು ಮಂಗಳವಾರ 06-01-2025ರಂದು ಬೆಳಿಗ್ಗೆ ಸುಮಾರು 9.30ಕ್ಕೆ ಶಿಂಗಟರಾಯನಕೇರಿ ತಾಂಡಾದಿಂದ ಕದಾಂಪೂರ ಮಾರ್ಗವಾಗಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಗದಗ ಕಡೆಗೆ ಬರುತ್ತಿದ್ದರು. ಈ ವೇಳೆ ಪಾಪನಾಶಿ ಟೋಲ್ ನಾಕಾದ ಬಳಿ ಬಸ್ ಓಪನ್ ಡೋರ್ ಇರುವುದನ್ನು ಬಳಸಿಕೊಂಡು ವಿದ್ಯಾರ್ಥಿನಿ ಬಸ್ ಹತ್ತಿದ್ದಾಳೆ. ಆದರೆ ಟೋಲ್ ನಾಕಾದಲ್ಲಿ ಪ್ರಯಾಣಿಕರನ್ನು ಹತ್ತಿಸುವುದಕ್ಕೆ ಅವಕಾಶವಿಲ್ಲ ಎಂಬ ನಿಯಮದಂತೆ ಮಹಿಳಾ ಕಂಡಕ್ಟರ್ ಬಸ್ ನಿಲ್ಲಿಸಿ ಬಾಲಕಿಯನ್ನು ಕೆಳಗಿಳಿಸಿದ್ದಾರೆ.
ಇದರಿಂದ ಸಿಟ್ಟಾದ ಕದಾಂಪೂರ ಗ್ರಾಮದ ವಿದ್ಯಾರ್ಥಿನಿಯ ತಂದೆ ಪ್ರಕಾಶ್ ತಂದೆ ಲಕ್ಷ್ಮಣ್ಣ ಸಂಕಣ್ಣವರ್ ಬಸ್ ಬೆನ್ನತ್ತಿ ಗದಗ–ಕೊಪ್ಪಳ ರಾಷ್ಟ್ರೀಯ ಹೆದ್ದಾರಿಯ ಚಿಕ್ಕಟ್ಟಿ ಸ್ಕೂಲ್ ಹತ್ತಿರ ಬೈಕ್ ಅಡ್ಡಗಟ್ಟಿ ಬಸ್ ನಿಲ್ಲಿಸಿ ಬಸ್ ಒಳಗೆ ನುಗ್ಗಿ ಕಂಡಕ್ಟರ್ ನೇತ್ರಾವತಿ ಪತ್ರಿಮಠ ಅವರ ಮೊಬೈಲ್ ಕಸಿದುಕೊಂಡು, ಅವಾಚ್ಯ ಶಬ್ದಗಳಿಂದ ನಿಂದಿಸಿದಾಗ ನಮ್ಮ ಮನೆಯಲ್ಲೂ ಪೊಲೀಸರು ಇದ್ದಾರೆ ಎಂದಾಗ…ಆರೋಪಿ ಪ್ರಕಾಶ್ ಸಂಕಣ್ಣವರ್, ಯಾರಿಗೆ ಹೇಳ್ತೀ ಹೇಳ್ಕೋ….ಎಸ್ಪಿಗೆ ಹೇಳ್ತಿಯೋ ಡಿಸಿಗೆ ಹೇಳ್ತೀಯೋ ಅಂತ ವಾದಿಸುತ್ತಿದ್ದಾಗ, ಆಗ ಮತ್ತೊಬ್ಬ ಆರೋಪಿ ಶಿಂಗಟಾರಾಯನಕೇರಿಯ ನೀಲಪ್ಪ ಅಲಿಯಾಸ್ ಮುತ್ತಣ್ಣ ತಂದೆ ಹುಚ್ಚಪ್ಪ ಜಂತ್ಲಿ, ಏಕಾಏಕಿ ಬಸ್ ಹತ್ತಿದವನೇ ಕಂಡಕ್ಟರ್ ನೇತ್ರಾವತಿ ಅವರಿಗೆ ಕಪಾಳಕ್ಕೆ ಹೊಡೆದುಬಿಟ್ಟ. ಇದರಿಂದ ವಿಚಲಿತರಾದ ಕಂಡಕ್ಟರ್ ನೇತ್ರಾವತಿ ಚೀರಿ….ಕೆಳಗೆ ಕುಸಿದುಬಿದ್ದರು. ಆಗ ಇತರ ಪ್ರಯಾಣಿಕರು ಕುಸಿದುಬಿದ್ದ ಕಂಡಕ್ಟರ್ ನೇತ್ರಾವತಿ ಅವರಿಗೆ ಸಮಾಧಾನ ಮಾಡಿದರು.
ಇಡೀ ಈ ಗಲಾಟೆಯ ದೃಶ್ಯ ಚಾಲಕನ ಮೊಬೈಲ್ನಲ್ಲಿ ಸೆರೆಯಾಗಿದ್ದ ಅದೀಗ ವೈರಲ್ ಆಗಿದೆ.
ಈ ಸಂಬಂಧ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣ ಸಂಖ್ಯೆ 05/2026ರಡಿ IPC ಕಲಂಗಳು 115(2), 132, 76, 352, 6/2, 3(5) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ತನಿಖೆಯನ್ನು PSI ವಿ.ಜಿ. ಪವಾರ ಅವರು ಕೈಗೊಂಡಿದ್ದಾರೆ.
ಘಟನೆಯು ಸಾರ್ವಜನಿಕ ಸಾರಿಗೆ ಸಿಬ್ಬಂದಿಯ ಸುರಕ್ಷತೆ ಕುರಿತಾಗಿ ತೀವ್ರ ಚರ್ಚೆಗೆ ಕಾರಣವಾಗಿದ್ದು, NWKRTC ಸಿಬ್ಬಂದಿ ಸುರಕ್ಷಿತವಾಗಿ ಕರ್ತವ್ಯ ನಿರ್ವಹಿಸಲು ಕಠಿಣ ರಕ್ಷಣಾತ್ಮಕ ಕ್ರಮಗಳು ಅಗತ್ಯವೆಂಬ ಒತ್ತಾಯ ವಿವಿಧ ವಲಯಗಳಿಂದ ಕೇಳಿ ಬಂದಿದೆ.



