ವಿಜಯಸಾಕ್ಷಿ ಸುದ್ದಿ, ಗದಗ:

ಗದಗ- ಬೆಟಗೇರಿ ನಗರಸಭೆಯ ಚುನಾವಣಾ ಕಾವು ರಂಗೇರಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದಲ್ಲಿ ಟಿಕೆಟ್ ಪಡೆಯಲು ಸಾಕಷ್ಟು ಅಭ್ಯರ್ಥಿಗಳು ಪೈಪೋಟಿ ನಡೆಸಿದ್ದರು. ಆದರೆ ಎರಡೂ ಪಕ್ಷದಲ್ಲಿ ಅಳಿದು, ತೂಗಿ ಟಿಕೆಟ್ ಹಂಚಿಕೆ ಮಾಡಿದ್ದರು. ಇದರಿಂದಾಗಿ ಟಿಕೆಟ್ ಪಡೆಯಲು ಕೊನೆಯವರೆಗೂ ತೀವ್ರ ಪೈಪೋಟಿ ನಡೆಸಿದ್ದ ಆಕಾಂಕ್ಷೆಗಳಲ್ಲಿ ತೀವ್ರ ಆಕ್ರೋಶ ತರಿಸಿತ್ತು. ಹೀಗಾಗಿಯೇ ಕೆಲವು ಟಿಕೆಟ್ ಆಕಾಂಕ್ಷೆಗಳು ಬಂಡಾಯ ಎದ್ದಿದ್ದಾರೆ.
5 ನೇ ವಾರ್ಡ್ ಗೆ ಈ ಮೊದಲು ಬಿಜೆಪಿ ಶಶಿಕಲಾ ಶ್ಯಾವಿ ಅನ್ನೋವರಿಗೆ ಟಿಕೆಟ ನೀಡಿ ಅಭ್ಯರ್ಥಿ ಎಂದು ಘೋಷಣೆ ಮಾಡಿತ್ತು. ಆದರೆ ಇದು ಸ್ಥಳೀಯ ಕಾರ್ಯಕರ್ತರಲ್ಲಿ ತೀವ್ರ ಆಕ್ರೋಶ ತಂದಿತ್ತು. ಕಾಂಗ್ರೆಸ್ ಪಕ್ಷದಲ್ಲಿ ಇದ್ದವರಿಗೆ ಕರೆ ತಂದು ಟಿಕೆಟ್ ನೀಡಲಾಗಿದೆ ಎಂದು ಕಾರ್ಯಕರ್ತರು ಬಿಜೆಪಿ ಮುಖಂಡರ ವಿರುದ್ಧ ಹರಿಹಾಯ್ದಿದ್ದರು. ಇದರಿಂದಾಗಿ ನಿನ್ನೆ ರಾತ್ರಿ ಲಕ್ಷ್ಮಿ ಖಾಕಿ ಎಂಬುವರಿಗೆ ಟಿಕೆಟ ಘೋಷಣೆ ಮಾಡಿ ಕಾರ್ಯಕರ್ತರ ಆಕ್ರೋಶ ತಣ್ಣಾಗಾಗಿಸಿದೆ.

ಕಾಂಗ್ರೆಸ್ ಪಕ್ಷಕ್ಕೆ ಆರಂಭದಲ್ಲಿಯೇ ಆಘಾತ ಎದುರಾಗಿದೆ. 14 ವಾರ್ಡ್ ಗೆ ಅಭ್ಯರ್ಥಿಗಳ ಆಯ್ಕೆಯಲ್ಲಿ ತಡವರಿಸಿದ್ದ ಮುಖಂಡರು, ನಿನ್ನೆ ಅಷ್ಟೇ 14 ವಾರ್ಡ್ ಗೆ ಪರಶುರಾಮ ನಾಯ್ಕರ್ ಅವರಿಗೆ ಟಿಕೆಟ್ ಘೋಷಣೆ ಮಾಡಿದ್ದರು. ಆದರೆ ಸಂಜೆಯವರೆಗೂ ಕಾಯ್ದು ಪರಿಸ್ಥಿತಿ ಅವಲೋಕಿಸಿದ ಪರಶುರಾಮ, ನಾಮಪತ್ರ ಸಲ್ಲಿಸಲು ಒಲ್ಲೆ ಎಂದು ಮುಖಂಡರಿಗೆ ಆಘಾತ ನೀಡಿದರು.
ಈ ಬಾರಿ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಸ್ಪರ್ಧೆ ಮಾಡಲ್ಲ ಎಂದು ಮೊದಲೇ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಹೇಳಿದ್ದ ಮಾಜಿ ಸದಸ್ಯ ಶ್ರೀನಿವಾಸ್ ಹುಯಿಲಗೋಳ ಗೆ ಮತ್ತೇ ಸ್ಪರ್ಧೆ ಮಾಡಲು ಒತ್ತಡ ಹಾಕಿ ಅವರಿಂದಲೇ ನಾಮಪತ್ರ ಸಲ್ಲಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಈ ಕುರಿತು ವಿಜಯಸಾಕ್ಷಿ ಗೆ ಪ್ರತಿಕ್ರಿಯೆ ನೀಡಿದ ಪರಶುರಾಮ ನಾಯ್ಕರ್, ನಾವು ಕೇಳಿದ ವಾರ್ಡ್ ಗೆ ಟಿಕೆಟ್ ಕೊಡಲಿಲ್ಲ. ಮತ್ತೊಂದು ವಾರ್ಡ್ ಗೆ ಹೋಗಿ ನಿಲ್ಲುವ ಮನಸ್ಸು ಒಪ್ಪಲಿಲ್ಲ ಎಂದರು.