ಗದಗ: ಎಡಿಜಿಪಿ ಚಂದಶೇಖರ್ ಪರೋಕ್ಷವಾಗಿ ಕುಮಾರಸ್ವಾಮಿಯವರನ್ನ ಹಂದಿಗೆ ಹೋಲಿಸಿ ತಮ್ಮ ಸಿಬ್ಬಂದಿ, ಅಧಿಕಾರಿ ವರ್ಗಕ್ಕೆ ಪತ್ರ ಬರೆದು ಆಕ್ರೋಶ ಹೊರಹಾಕಿದ್ದರು. ಈ ವಿಚಾರವಾಗಿ ಗದಗ ತಹಸೀಲ್ದಾರ ಕಚೇರಿ ಎದುರು ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ರಾಷ್ಟ್ರಪತಿ, ಕೇಂದ್ರ ಗೃಹ ಸಚಿವರಿಗೆ ಮನವಿ ಸಲ್ಲಿಸಿದ ಜೆಡಿಎಸ್ ಕಾರ್ಯಕರ್ತರು, ಎಡಿಜಿಪಿ ಚಂದ್ರಶೇಖರ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.
ಈ ವೇಳೆ ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಗೋವಿಂದಗೌಡರ್ ಮಾತನಾಡಿ, ವಿಷ್ಣುವಿನ ಅವತಾರ ಹಂದಿ. ಅವ್ನು ಕುಮಾರಣ್ಣನನ್ನ ವಿಷ್ಣುವಿಗೆ ಹೋಲಿಸಿರಬೇಕು. ಯಾಕಂದ್ರೆ ಭೂಮಿಗೆ ಆಪತ್ತು ಬಂದಾಗ ವಿಷ್ಣು ಹಂದಿಯ ಅವತಾರ ಎತ್ತಿ ಭೂಮಿ ರಕ್ಷಿಸಿದ್ದ, ಈಗ ಭ್ರಷ್ಟರನ್ನ ಸಂಹಾರ ಮಾಡಲಿಕ್ಕೆ ಕುಮಾರಸ್ವಾಮಿ ಇದ್ದಾರೆ. ಚಂದ್ರಶೇಖರ್ ಅವರೇ.. ನಿಮ್ಮ ಇತಿಮಿತಿಯಲ್ಲಿರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚಂದ್ರಶೇಖರ ಅವರೇ ನಿಮ್ಮ ಹೇಳಿಕೆಯನ್ನು ರಾಜ್ಯದ ಜನ, ಕಾರ್ಯಕರ್ತರು ಸಹಿಸಲ್ಲ ಆದ್ದರಿಂದ ಅಸಂವಿಧಾನಿಕ ಪದ ಬಳಸಿದ ಎಡಿಜಿಪಿ ಚಂದ್ರಶೇಖರ್ ವಾಪಾಸ್ ಕರೆಸಿಕೊಳ್ಳಬೇಕು. ಭ್ರಷಾಚಾರದ ಆರೋಪದ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದರು.