ಜನಸ್ಪಂದನದಲ್ಲಿ ಅಹವಾಲುಗಳ ಸುರಿಮಳೆ

0
Gadag Taluk Level Population Programme
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಎಲ್ಲಾ ಇಲಾಖೆಯ ಅಧಿಕಾರಿಗಳು ತಮಗೆ ಬಂದ ಅಹವಾಲುಗಳನ್ನು ನಿಷ್ಕಕಾಳಜಿ ತೋರದೆ ಶೀಘ್ರವೇ ವಿಲೇವಾರಿ ಮಾಡಬೇಕು ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಸೂಚಿಸಿದರು.

Advertisement

ನಗರದ ಜಿಲ್ಲಾಡಳಿತ ಭವನದ ಮುಖ್ಯ ಸಭಾಂಗಣದಲ್ಲಿ ಗದಗ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಗದಗ ತಾಲೂಕಿನ ಸಾರ್ವಜನಿಕರಿಂದ ಅಹವಾಲು-ಕುಂದುಕೊರತೆ, ದೂರು ವಿಚಾರಣೆ ಹಾಗೂ ಪ್ರಕರಣ ವಿಲೇವಾರಿಯ ಗದಗ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಅಸುಂಡಿ ಗ್ರಾಮದ ವೀರಯ್ಯ ಶಿವಯ್ಯ ಗುರಬಶೆಟ್ಟೆಮಠ ಅವರು ನಿವೇಶನ ಖರಿದಿಸಿ ಮನೆಯನ್ನು ಕಟ್ಟಿ 3-4 ವರ್ಷವಾದರೂ ಯಾವುದೇ ರೀತಿಯ ಮೂಲಭೂತ ಸೌಲಭ್ಯಗಳು ಇಲ್ಲದ ಕಾರಣ ತೊಂದರೆಯಾಗುತ್ತಿದ್ದು, ಮನೆಗೆ ವಿದ್ಯುತ್ ಸಂಪರ್ಕವನ್ನು ಸಹ ತಾತ್ಕಾಲಿಕವಾಗಿ ತೆಗೆದುಕೊಂಡಿದ್ದರಿಂದ ತಿಂಗಳಿಗೆ 1ರಿಂದ 2 ಸಾವಿರ ರೂ ವಿದ್ಯುತ್ ಬಿಲ್ ಬರುತ್ತಿದೆ ಎಂದು ಹೇಳಿದರು. ಅಹವಾಲು ಸ್ವೀಕರಿಸಿದ ಜಿಲ್ಲಾಧಿಕಾರಿಗಳು, ಸಂಬಂಧಿಸಿದ ಅಧಿಕಾರಿಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸೂಚಿಸಿದರು.

ನರಸಾಪೂರ ಗ್ರಾಮದ ಈರಪ್ಪ ಕಾಳಪ್ಪ ಬಡಿಗೇರ ತಮ್ಮ ಕಾರ್ಮಿಕ ಕಾರ್ಡ್ ರದ್ದಾಗಿದ್ದು, ಹಲವು ಬಾರಿ ಕಾರ್ಮಿಕ ಇಲಾಖೆಗೆ ಹೋದರೂ ಪ್ರಯೋಜನವಾಗಿಲ್ಲ ಎಂದು ಅಹವಾಲು ಸಲ್ಲಿಸಿದರು. ನಗರದ ಗಂಗಾಪೂರ ಪೇಟೆಯ ರೇಣುಕಾ ಹಾತಲಗೇರಿ ತಮಗೆ ಮನೆಯಿಲ್ಲದ ಕಾರಣ, ಮನೆ ಕೊಡಲು ಕೇಳಿದಾಗ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ನಿಯಮಾನುಸಾರ ಪರಿಶೀಲನೆ ನಡೆಸಿ ಮನೆ ನೀಡಲು ಸೂಚಿಸಿದರು.

ನಗರದ 1ನೇ ಕ್ರಾಸ್‌ನ ಹುಡ್ಕೊ ಕಾಲೋನಿಯ ಜಾಗೃತ ಗಜಾನನ ಸೇವಾ ಸಮಿತಿಯವರು, ಉದ್ಯಾನವನದಲ್ಲಿ ದೀಪಗಳು ಕೆಟ್ಟಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಅಹವಾಲು ನೀಡಿದರು.

Gadag Taluk Level Population Programme

ಅದನ್ನು ಸ್ವೀಕರಿಸಿದ ಜಿಲ್ಲಾಧಿಕಾರಿಗಳು, ನಗರ ಸಭೆಯ ಪೌರಾಯುಕ್ತರಿಗೆ ಕೂಡಲೇ ಉದ್ಯಾನವನಕ್ಕೆ ಬೀದಿ ದೀಪ ಅಳವಡಿಸಲು ಸೂಚನೆ ನೀಡಿದರು.

ನಗರದ ನಿವಾಸಿ ರಮೇಶ ಮೇರೆವಾಡೆ ಹಿರಿಯ ನಾಗರಿಕರಿಗೆ ನಗರ ಸಂಚಾರಿ ಬಸ್‌ಗಳು ಸರಿಯಾಗಿ ಲಭ್ಯವಿಲ್ಲದ ಕಾರಣ ಹಾಗೂ ರಸ್ತೆಯಲ್ಲಿರುವ ಗುಂಡಿ ಸೇರಿದಂತೆ ಸಾರ್ವಜನಿಕ ಉದ್ಯಾನವನದ ಅವ್ಯವಸ್ಥೆ ಸರಿಪಡಿಸುವಂತೆ ಅಹವಾಲು ನೀಡಿದರು. ಅದನ್ನು ಸ್ವೀಕರಿಸಿದ ಜಿಲ್ಲಾಧಿಕಾರಿಗಳು, ಬಸ್‌ಗಳು ಸರಿಯಾದ ಸಮಯಕ್ಕೆ ಹೋಗುವಂತೆ ನೋಡಿಕೊಳ್ಳಬೇಕೆಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದರು.

ಹುಲಕೋಟಿ ಹದ್ದಿನ ಅಸುಂಡಿ ಗ್ರಾಮದ ರಿಸ್.ನಂ.339/1ರಿಂದ 34ರ ವರೆಗಿನ 50 ಎಕರೆಗೂ ಹೆಚ್ಚು ಹೊಲಗಳಿಗೆ ದಾರಿಯಿಲ್ಲದ ಕಾರಣ ಬೆಳೆ ಬೆಳೆಯಲು ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ಅಹವಾಲು ನೀಡಿದರು. ಅದನ್ನು ಸ್ವೀಕರಿಸಿದ ಜಿಲ್ಲಾಧಿಕಾರಿಗಳು, ಸಂಬಂಧಿಸಿದ ತಹಸೀಲ್ದಾರಿಗೆ ನಿಯಮಾನುಸರ ಪರಿಶೀಲನೆ ಮಾಡಿ ಎಂದು ಸೂಚಿಸಿದರು.

ರಾಜೀವಗಾಂಧೀ ನಗರದ ನಿವಾಸಿಯಾದ ರಮೇಶ ಕೋಳೂರ ಪ್ರತಿ ತಾಲೂಕು ಮಟ್ಟದಲ್ಲಿ ನಡೆಯಬೇಕಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕುಂದು-ಕೊರತೆ ಸಭೆಗಳು ಸರಿಯಾದ ಸಮಯಕ್ಕೆ ನಿಯಮಿತವಾಗಿ ಜರುಗುತ್ತಿಲ್ಲ ಎಂದು ಅಹವಾಲು ನೀಡಿದರು. ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ನಿಯಮಿತವಾಗಿ ಸಭೆಗಳನ್ನು ಜರುಗಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಕಾರ್ಯಕ್ರಮದಲ್ಲಿ ಜಿ.ಪಂ ಕಾರ್ಯನಿರ್ವಾಹಣಾಧಿಕಾರಿ ಭರತ್ ಎಸ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ಸಂಕದ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಮತ್ತು ಸಾರ್ವಜನಿಕರು ಹಾಜರಿದ್ದರು.

ಜನಸ್ಪಂದನ ಕಾರ್ಯಕ್ರಮದಲ್ಲಿ 57 ಅರ್ಜಿಗಳು ಸ್ವೀಕೃತವಾದವು. ತಹಸೀಲ್ದಾರ ಶ್ರೀನಿವಾಸ ಕುಲಕರ್ಣಿ ಸ್ವಾಗತಿಸಿದರು. ವಿಭಾಗಾಧಿಕಾರಿ ಡಾ. ವೆಂಕಟೇಶ ನಾಯ್ಕ ನಿರೂಪಿಸಿದರು.

ಲಕ್ಕುಂಡಿ ಗ್ರಾಮದ ಉಮೇಶಗೌಡ ಯಲ್ಲಪ್ಪಗೌಡ ಪಾಟೀಲ್ ಅವರಿಗೆ ಬಂದ ಬೆಳೆ ಪರಿಹಾರ ಮತ್ತು ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಹಣವನ್ನು ಬ್ಯಾಂಕ್‌ನವರು ತಮ್ಮ ಸಾಲದ ಖಾತೆಗೆ ಜಮಾ ಮಾಡಿಕೊಂಡಿದ್ದಾರೆ ಎಂದು ದೂರು ನೀಡಿದರು. ಈ ಬಗ್ಗೆ ಕೂಡಲೇ ಬೆಳೆ ಪರಿಹಾರದ ಹಣವನ್ನು ಹಿಂತಿರುಗಿಸುವಂತೆ ಸಂಬಂಧಿಸಿದ ಬ್ಯಾಂಕ್ ಮ್ಯಾನೇಜರ್‌ಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

 


Spread the love

LEAVE A REPLY

Please enter your comment!
Please enter your name here