ಗದಗ: ತಂತ್ರಜ್ಞಾನ ಚಂದ್ರನ ಮೇಲೆ ಕಾಲಿಡುವ ಮಟ್ಟಕ್ಕೆ ಬೆಳೆದಿದ್ದರೂ ಕೂಡ ಜನ ಮಾತ್ರ ಇನ್ನೂ ಮಾಟ ಮಂತ್ರಗಳ ಮೂಲಕ ಜನರ ಜನರನ್ನ ಹೆದರಿಸುತ್ತಲೇ ಕಾಲ ಕಳೆಯುತ್ತಿದ್ದಾರೆ.
ಇದೀಗ ಜಿಲ್ಲೆಯ ಮುಂಡರಗಿ ಪಟ್ಟಣದ ಹುಡ್ಕೋ ಕಾಲೋನಿಯ ಬಸ್ ನಿಲ್ದಾಣದಲ್ಲಿ ವಾಮಾಚಾರ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಸಾರ್ವಜನಿಕ ಸ್ಥಳದಲ್ಲೇ ಈ ಕೃತ್ಯ ನಡೆದಿರುವುದರಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ.
ಹುಡ್ಕೋ ಕಾಲೋನಿಯ ಬಸ್ ನಿಲ್ದಾಣದ ಮಧ್ಯ ಭಾಗದಲ್ಲಿ ನಕ್ಷತ್ರ ಆಕಾರದಲ್ಲಿ ಚಿಹ್ನೆಗಳು ಹಾಕಿರುವುದು ಕಂಡುಬಂದಿದೆ. ಅಲ್ಲದೆ ಕಪ್ಪು ಬಣ್ಣದ ಗೊಂಬೆ, ಮೊಟ್ಟೆ, ಎಲೆ-ಅಡಿಕೆ, ನಿಂಬೆಹಣ್ಣು ಇತ್ಯಾದಿ ವಸ್ತುಗಳನ್ನು ಇಟ್ಟು ಅಸಾಮಾನ್ಯ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ.
“ಹೋದ ವರ್ಷ ನಾನು ಬಯಸಿದ್ದು ಸಿಕ್ಕಿಲ್ಲ… ಆದರೆ ಈ ವರ್ಷ ತೊಗೊಳದೆ ಬಿಡಲ್ಲ..” ಎಂಬ ರೀತಿಯ ಬರಹವೂ ಸ್ಥಳದಲ್ಲಿ ಕಾಣಿಸಿಕೊಂಡಿದ್ದು, ಇದರಿಂದ ಸ್ಥಳೀಯರು ಮತ್ತಷ್ಟು ಭಯಭೀತರಾಗಿದ್ದಾರೆ.
ಘಟನೆ ತಿಳಿದ ಬಳಿಕ ಹುಡ್ಕೋ ಕಾಲೋನಿ ನಿವಾಸಿಗಳು ಬಸ್ ನಿಲ್ದಾಣದ ಕಡೆಗೆ ಹೋಗಲು ಸಹ ಹಿಂಜರಿಯುತ್ತಿದ್ದಾರೆ. ಸಾರ್ವಜನಿಕ ಸ್ಥಳದಲ್ಲೇ ಇಂತಹ ಕೃತ್ಯ ನಡೆದಿರುವುದರಿಂದ ಜನರಲ್ಲಿ ಅಸಮಾಧಾನ ವ್ಯಕ್ತವಾಗಿದೆ. ದುಷ್ಕರ್ಮಿಗಳನ್ನು ಶೀಘ್ರ ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ.



