ವಿಜಯಸಾಕ್ಷಿ ಸುದ್ದಿ, ಗದಗ
ಟ್ರ್ಯಾಕರ್ ಓವರ್ ಟೇಕ್ ಮಾಡಿ ಎದುರಿಗೆ ಬಂದ ಬೈಕ್ ಗೆ ಸಾರಿಗೆ ಸಂಸ್ಥೆಯ ಬಸ್ ಹಾಯ್ದು ಬೈಕ್ ಹಿಂಬದಿ ಸವಾರ ಸ್ಥಳದಲ್ಲಿಯೇ ಮೃತಪಟ್ಟು, ಸವಾರ ಬಚಾವ್ ಆದ ಘಟನೆ ಹೊಂಬಳ ರಸ್ತೆಯಲ್ಲಿ ಜರುಗಿದೆ.
ಗದಗ ಸಮೀಪದ ಹೊಂಬಳ ರಸ್ತೆಯ ಪಶು ವಿಶ್ವವಿದ್ಯಾಲಯದ ಹತ್ತಿರ ಈ ಘಟನೆ ನಡೆದಿದ್ದು, ಅಪಘಾತ ತಪ್ಪಿಸಲು ಹೋದ ಬಸ್, ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಬಸ್ ನಲ್ಲಿದ್ದ ಸುಮಾರು 15 ಜನರಿಗೆ ಗಾಯವಾಗಿದೆ ಎನ್ನಲಾಗಿದೆ.
ಗದಗದಿಂದ ನರಗುಂದ ಕಡೆ ಹೊರಟಿದ್ದ ಸಾರಿಗೆ ಸಂಸ್ಥೆಯ ಬಸ್, ಹೊಂಬಳ ಕಡೆಯಿಂದ ಗದಗನತ್ತ ಬರುತ್ತಿದ್ದ ಟ್ರ್ಯಾಕರ್ ಓವರ್ ಟೇಕ್ ಮಾಡಿ ಬೈಕ್ ಸವಾರ ಬಂದಾಗ ಬಸ್ ಚಾಲಕ ಅಪಘಾತ ತಪ್ಪಿಸಲು ಹೋಗಿದ್ದಾನೆ. ಆದರೂ ಹಿಂದಿನ ಗಾಲಿ ಹಾಯ್ದು ಬೈಕ್ ನ ಹಿಂಬದಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಮೃತನನ್ನು ಲಿಂಗದಾಳ ಗ್ರಾಮದ ಹನಮಂತಪ್ಪ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಪಘಾತ ಸಂಭವಿಸಿ ಅರ್ಧ ಗಂಟೆಯಾದರೂ ಯಾವುದೇ ಆ್ಯಂಬುಲೆನ್ಸ್ ಬರಲಿಲ್ಲ ಎಂದು ಗಾಯಗೊಂಡವರು ಆರೋಪಿಸಿದರು. ಸಾರ್ವಜನಿಕರ ಸಹಾಯದಿಂದ ಗಾಯಗೊಂಡವರು ಆಸ್ಪತ್ರೆಗೆ ದಾಖಲಾದ ಬಗ್ಗೆ ತಿಳಿದು ಬಂದಿದೆ.