ವಿಜಯಸಾಕ್ಷಿ ಸುದ್ದಿ, ಧಾರವಾಡ : ಉತ್ತರದ ಸಂಗೀತವನ್ನು ದಕ್ಷಿಣಕ್ಕೆ ತಂದ ಪ್ರಮುಖರಲ್ಲಿ ಒಬ್ಬರಾದ, ಶಿಷ್ಯ ಪರಂಪರೆಯ ಮೂಲಕ ಧಾರವಾಡಕ್ಕೆ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದತವರು ಎನ್ನುವ ಖ್ಯಾತಿ ತಂದುಕೊಟ್ಟ, ವಚನಗಳಿಗೆ ಸಂಗೀತ ಸಂಯೋಜಿಸಿ ಹಾಡಿ, ವಚನ ಗಾಯನ ಪರಂಪರೆಗೆ ನಾಂದಿ ಹಾಡಿದ, ಮಾತ್ರವಲ್ಲದೇ ಭಾರತರತ್ನ ಭೀಮಸೇನಜೋಷಿಯವರಂತಹ ಮಹಾನ್ ಸಂಗೀತ ದಿಗ್ಗಜರನ್ನು ಕೊಡುಗೆಯಾಗಿ ನೀಡಿದ ಶ್ರೇಯಸ್ಸು ಗಾನಯೋಗಿ ಪಂಚಾಕ್ಷರ ಗವಾಯಿಗಳವರಿಗೆ ಸಲ್ಲುತ್ತದೆ. ಇಂತಹ ಮಹಾನ್ ವಿಭೂತಿ ಪುರುಷ, ಗಾನಯೋಗಿ ಪಂ. ಪಂಚಾಕ್ಷರ ಗವಾಯಿಗಳವರ ಸ್ಮಾರಕ ಧಾರವಾಡದಲ್ಲಿ ಆಗಬೇಕು ಎಂದು, ಡಾ. ಪಂ.ಪುಟ್ಟರಾಜ ಸೇವಾ ಸಮಿತಿ ಸಂಸ್ಥಾಪಕರಾದ ವೇ. ಚನ್ನವೀರಸ್ವಾಮಿ ಹಿರೇಮಠ (ಕಡಣಿ) ಹೇಳಿದರು.
ಅವರು ಧಾರವಾಡದ ರಂಗಾಯಣದಲ್ಲಿ, ಗದುಗಿನ ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಆಯೋಜಿಸಿದ್ದ ಗಾನಯೋಗಿ ಪಂ. ಪಂಚಾಕ್ಷರ ಗವಾಯಿಗಳವರ 80ನೇ ಪುಣ್ಯಸ್ಮರಣೆ ‘ಗುರುಗುಣಗಾನ’ ಕವಿಗೋಷ್ಠಿ, ಕಾವ್ಯಗಾಯನ ಮತ್ತು ನೃತ್ಯ ನಮನವನ್ನು ಒಳಗೊಂಡ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಡಾ. ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ನ ವ್ಯವಸ್ಥಾಪಕರಾದ ಪ್ರಕಾಶ ಬಾಳಿಕಾಯಿ, ಕ.ವಿ.ವಿ. ಲಲಿತ ಕಲಾ ಹಾಗೂ ಸಂಗೀತ ಮಹಾವಿದ್ಯಾಲಯದ ಸಹಾಯಕ ಉಪನ್ಯಾಸಕರಾದ ಡಾ. ಎ.ಎಲ್.ದೇಸಾಯಿ, ಮಾತನಾಡಿ, ಪಂಚಾಕ್ಷರ ಗುರುಗಳ ಹೆಸರು ಉಳಿಸುವ ನಿಟ್ಟಿನಲ್ಲಿ, ಕಂಚಿನ ಪ್ರತಿಮೆ ಸ್ಥಾಪನೆ ಮತ್ತು ಧಾರವಾಡದಲ್ಲಿ ಮಾದರಿಯ ಆಶ್ರಮ ಸ್ಥಾಪಸಲು ಪ್ರಯತ್ನಿಸುತ್ತಿರುವ ಬಗ್ಗೆ ತಿಳಿಸಿದರು. ಡಾ. ಸುಮಾ ಬಸವರಾಜ ಹಡಪದ, ಹಳಿಯಾಳ ದೇವಿಕಾ ಜೋಗಿ ಹೊಸಪೇಟೆ, ಡಾ. ಸುರೇಶ ಕಳಸಣ್ಣವರ ಕಲಘಟಗಿ ವೇದಿಕೆಯಲ್ಲಿ ಇದ್ದರು.
ಧಾರವಾಡದ ಶ್ರೀಗುರು ಪುಟ್ಟರಾಜ ಸಂಗೀತ ಶಾಲೆ, ವೀರಶೈವ ಜಾಗೃತಿ ಮಹಿಳಾ ಸಮಿತಿ, ‘ಮಾಸ್ಟರ್’ ಸಾತ್ವಿಕ್ ಜಿ.ಮಹಾಮನೆ ಇವರುಗಳು ಸಂಗೀತ ನಮನ ಸಲ್ಲಿಸಿದರು. ಹುಬ್ಬಳಿಯ ಪ್ರೇರಣಾ ಸ್ಕೂಲ್ ಆಫ್ ಡ್ಯಾನ್ಸ್, ಧಾರವಾಡದ ಉಪಾಧ್ಯ ನೃತ್ಯ ವಿಹಾರ, ತಾಳಿಕೊಟೆಯ ಶ್ರೀ ವಿರಕ್ತೇಶ್ವರ ಭರತನಾಟ್ಯ ತರಬೇತಿ ಸಂಸ್ಥೆ, ಮುಂಡರಗಿಯ ನಾಟ್ಯಬಿಂದು ಡ್ಯಾನ್ಸ್ ಅಕಾಡೆಮಿ ಸಂಸ್ಥೆಯ ಶಿಷ್ಯರು ನೃತ್ಯ ನಮನ ಸಲ್ಲಿಸಿದರು.
ಡಾ. ಸುರೇಶ ಕಳಸಣ್ಣವರ ಕಲಘಟಗಿ ಇವರ ಅಧ್ಯಕ್ಷತೆಯಲ್ಲಿ, ಪಂಚಾಕ್ಷರ ಗವಾಯಿಗಳವರ ಕುರಿತು ಬರೆದ ಕವಿಗೋಷ್ಠಿಯಲ್ಲಿ ಮೃತ್ಯುಂಜಯ ಹಿರೇಮಠ, ಪ್ರೊ ಜಯಶ್ರೀ ಹಿರೇಮಠ, ಪದ್ಮಾ ಜೆ.ಕಬಾಡಿ, ವೀರಯ್ಯ ಸಂಕಿನಮಠ, ಬಸವರಾಜ ಹಡಪದ, ವಿಮಲಾ ಹುಬ್ಬಳ್ಳಿ, ಸಂಧ್ಯಾ ದೀಕ್ಷಿತ, ಸುಲೋಚನ ಮಾಲಿಪಾಟೀಲ್, ರೇಖಾ ಜೋಶಿ, ವೀರೇಶರಡ್ಡಿ ಟಿ.ಕಾಮರಡ್ಡಿ, ದಾನಮ್ಮ ವೀ.ಅಂಗಡಿ, ಮಧುಮತಿ ಸಣಕಲ್, ಸೀತಾ ಛಪ್ಪರ, ಧಾರವಾಡ ಶಾರದಾ ಕೆಲಸಂಗದ, ಶಾಂತಕ್ಕ ಹೊಂಬಳ, ಇಂದಿರಾ ಮೋಟೆಬೆನ್ನೂರ, ಇವರುಗಳು ತಮ್ಮ ಕವನದ ಮೂಲಕ ಗುರುಗುಣಗಾನ ಮಾಡಿದರು. ಶಶಿಕಲಾ ಅಕ್ಕಿ ಹಾವೇರಿ ಸ್ವಾಗತಿಸಿದರು. ಸುಧಾ ಕಬ್ಬೂರ ಕಾರ್ಯಕ್ರಮದ ನಿರೂಪಿಸಿ ವಂದಿಸಿದರು.