ದಾವಣಗೆರೆ: ಕಳೆದ ವರ್ಷ ನಡೆದಿದ್ದ ಜಿಲ್ಲೆಯ ನ್ಯಾಮತಿ ಬ್ಯಾಂಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಜಯಕುಮಾರ್(30), ಅಜಯ್ ಕುಮಾರ್(28,) ಅಭಿಷೇಕ(23) ಚಂದ್ರು (23)ಮಂಜುನಾಥ್( 32) ಪರಮಾನಂದ (30) ಬಂಧಿತ ಆರೋಪಿಗಳಾಗಿದ್ದು,ಕಬ್ಬಿಣದ ಕಡಲೆಯಾಗಿದ್ದ ಪ್ರಕರಣವನ್ನ ಭೇದಿಸಿದ ರೋಚಕತೆಯನ್ನು ಐಜಿಪಿ ರವೀಕಾಂತೆಗೌಡ್ ಬಿಚ್ಚಿಟ್ಟಿದ್ದಾರೆ.
ದರೋಡೆ ಪ್ರಕರಣದ ಮಾಸ್ಟರ್ ಮೈಂಡ್ ವಿಜಯ್ ಕುಮಾರ್ ನ್ಯಾಮತಿಯಲ್ಲಿ ಬೇಕರಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದ. ಬ್ಯಾಂಕ್ನಲ್ಲಿ ಲೋನ್ ಪಡೆಯಲು ಎರಡು ಬಾರಿ ಅರ್ಜಿ ಹಾಕಿದ್ದ, ಸಿವಿಲ್ ಸ್ಕೋರ್ ಕಡಿಮೆ ಇದ್ದ ಹಿನ್ನೆಲೆಯಲ್ಲಿ
ಈ ಅರ್ಜಿ ತಿರಸ್ಕಾರವಾಗಿತ್ತು. ಇದರಿಂದ ವಿಜಯಕುಮಾರ್ ರೋಸಿ ಹೋಗಿದ್ದ. ಇದೇ ಕಾರಣಕ್ಕೆ ಬ್ಯಾಂಕ್ ದರೋಡೆಗೆ ಹಲವಾರು ಸಿನಿಮಾ, ಧಾರಾವಾಹಿ, ಯುಟ್ಯೂಬ್, ಹಿಂದಿ ವೆಬ್ ಸೀರಿಸ್ ನೋಡಿ ದರೋಡೆಗೆ ಸಂಚು ರೂಪಿಸಿದ್ದನು.
ಆರೋಪಿಗಳು ಮೊಬೈಲ್, ವಾಹನ ಬಳಸದೇ, ಯಾವ ಸಾಕ್ಷಿಯನ್ನೂ ಬಿಡದೆ ದರೋಡೆ ಮಾಡಿದ್ದರು. ದರೋಡೆ ಮಾಡಿದ 17 ಕೆಜಿ ಚಿನ್ನವನ್ನು ತಮಿಳುನಾಡಿನ ಮಧುರೈನಲ್ಲಿರುವ ತೋಟದ ಮನೆಯ ಪಾಳು ಬಿದ್ದ ಬಾವಿಯಲ್ಲಿ ಲಾಕರ್ನಲ್ಲಿ ಇಟ್ಟಿದ್ದರು.
ದರೋಡೆಗೆ ಮೊದಲು, ದರೋಡೆಯ ನಂತರ ದರೋಡೆಕೋರರು ಗಡಿ ಚೌಡಮ್ಮನ ಅಷ್ಟ ಧಿಗ್ಬಂಧನ ಪೂಜೆ ಮಾಡಿದ್ದರು. ಅಲ್ಲದೇ ದರೋಡೆಯ ಮಾಹಿತಿಯನ್ನು ಕುಟುಂಭಸ್ಥರ ಜೊತೆಯೂ ಹಂಚಿಕೊಂಡಿರಲಿಲ್ಲ ಎಂದು ಐಜಿಪಿ ರವೀಕಾಂತೆಗೌಡ್ ಹೇಳಿದ್ದಾರೆ.
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಟೆಕ್ನಿಕಲ್ ಎವಿಡೆನ್ಸ್ ಮೂಲಕ ತಮಿಳುನಾಡಿನ ಮೂವರು, ನ್ಯಾಮತಿ ಮೂವರು ಸೇರಿ ಒಟ್ಟು ಆರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದರು.