ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸಿನಿಮಾವನ್ನೇ ಮೀರಿಸುವ ದರೋಡೆ ಪ್ರಕರಣ ಬೆಳಕಿಗೆ ಬಂದಿದೆ. ದೇವನಹಳ್ಳಿ ಹೊರವಲಯದ ಪ್ರಸನ್ನಹಳ್ಳಿ ರಸ್ತೆಯಲ್ಲಿ ಮಾನವ ಹಕ್ಕುಗಳ ಮತ್ತು ಭ್ರಷ್ಟಾಚಾರ ನಿಗ್ರಹ ದಳದ ಹೆಸರಿನಲ್ಲಿ ಅಧಿಕಾರಿಗಳಂತೆ ನಟಿಸಿ 24 ಲಕ್ಷ ರೂ. ಹಣ ದೋಚಲಾಗಿದೆ.
ಈ ಪ್ರಕರಣದಲ್ಲಿ ಕೃಷ್ಣಕುಮಾರ್ ನೇತೃತ್ವದ 12 ಮಂದಿಯ ಗ್ಯಾಂಗ್ ಭಾಗಿಯಾಗಿದ್ದು, ಇದುವರೆಗೆ 9 ಆರೋಪಿಗಳನ್ನು ದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ದೋಚಿದ ಹಣ ವಶಪಡಿಸಿಕೊಳ್ಳಲಾಗಿದೆ.
ಶಂಕರಪ್ಪ ಎಂಬುವರಿಗೆ ಹಣವನ್ನು ಮೂರರಷ್ಟು ಮಾಡಿಕೊಡುವುದಾಗಿ ಹೇಳಿ ಕರೆಸಿಕೊಂಡ ಆರೋಪಿಗಳು, ಖಾಸಗಿ ಕಾರಿನಲ್ಲಿ ಅಧಿಕಾರಿಗಳ ಸೋಗಿನಲ್ಲಿ ಎಂಟ್ರಿಕೊಟ್ಟು ಹಣ ಕಸಿದುಕೊಂಡಿದ್ದಾರೆ.
ಆಘಾತಕಾರಿ ಸಂಗತಿ ಏನೆಂದರೆ, ದರೋಡೆ ಬಳಿಕ ಎ1 ಆರೋಪಿ ಕೃಷ್ಣಕುಮಾರ್ ತಾನೇ ಠಾಣೆಗೆ ಬಂದು ದೂರು ದಾಖಲಿಸಿದ್ದಾನೆ. ಆದರೆ ಪೊಲೀಸರ ಕಠಿಣ ವಿಚಾರಣೆಯಲ್ಲಿ ಅವನೇ ಸಂಚಿನ ಸೂತ್ರಧಾರ ಎಂಬುದು ಬಹಿರಂಗವಾಗಿದೆ.



