ವಿಜಯಸಾಕ್ಷಿ ಸುದ್ದಿ, ಇಲಕಲ್: ತಾಲೂಕಿನ ನಿರಂತರ ಅನ್ನ ದಾಸೋಹ ಹಾಗೂ ಕಲಾ ಪೋಷಕರ ಮಠ, ಸುಕ್ಷೇತ್ರ ಸಿದ್ದನಕೊಳ್ಳದ ಸಿದ್ದಪ್ಪಜ್ಜನ ಮಠದಲ್ಲಿ ದಸರಾ ಮಹೋತ್ಸವ ಅಂಗವಾಗಿ ಕಲಾಪೋಷಕ ಮಠ ಸಿದ್ದನಕೊಳ್ಳ ಅರ್ಪಿಸುವ `ಗೀತ ಕುಸುಮ-ಕುಂದದ ಸುಮಧುರ ಮನಸುಗಳು’ ಎಂಬ ಭಾವಗೀತೆಗಳ ವಿಡಿಯೋ ಆಲ್ಬಂ ಬಿಡುಗಡೆ ಮಾಡಲಾಯಿತು.
ಮುಖ್ಯ ಅತಿಥಿಗಳಾಗಿ ಕಸಾಪ ಗೋವಾ ರಾಜ್ಯಾಧ್ಯಕ್ಷ ಸಿದ್ದಣ್ಣ ಮೇಟಿ, ಲಿಂಗಸೂರಿನ ಅಯ್ಯಣ್ಣಸ್ವಾಮಿ ಗಣಾಚಾರಿ, ಸಿನಿಮಾ ಪತ್ರಕರ್ತ ಡಾ. ಪ್ರಭು ಗಂಜಿಹಾಳ ಆಗಮಿಸಿದ್ದರು. ಅಧ್ಯಕ್ಷತೆಯನ್ನು ಅಮೀನಗಡದ ಸಾಹಿತಿಗಳು ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾದ ಮಹದೇವ ಬಸರಕೋಡ ವಹಿಸಿದ್ದರು. ಸಿದ್ಧನಕೊಳ್ಳ ಶ್ರೀಮಠದ ಧರ್ಮಾಧಿಕಾರಿಗಳಾದ ಡಾ. ಶಿವಕುಮಾರ ಮಹಾಸ್ವಾಮಿಗಳು ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿ, ಸಿದ್ದನಕೊಳ್ಳ ಮಠ ಕಲಾವಿದರನ್ನು ಬೆಳೆಸಿದ ಮತ್ತು ಬೆಳೆಸುವ ಕಲಾ ಪೋಷಕಮಠವಾಗಿದೆ. ಕಲಾಪ್ರತಿಭೆಗಳಿಗೆ ಇಲ್ಲಿ ಪ್ರೋತ್ಸಾಹ ಸದಾ ಇದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಬಸರಕೋಡ ಮಾತನಾಡಿ, ಕಲಾವಿದರು ಗೀತೆಗಳಿಗೆ ಭಾವಪೂರ್ಣ ಅಭಿನಯವನ್ನು ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಾಹಿತ್ಯವನ್ನು ಮಹದೇವ ಬಸರಕೋಡ ರಚಿಸಿದ್ದು, ಸಂಗೀತವನ್ನು ರಾಜೂ ಎಮ್ಮಿಗನೂರ ನೀಡಿದ್ದಾರೆ. ಮಾಲಾಶ್ರೀ ಕಣವಿ ಮತ್ತು ರವೀಂದ್ರ ಸೊರೆಗಾವಿ ಸುಮಧುರವಾಗಿ ಹಾಡಿದ್ದಾರೆ. ರಾಜೇಶ್ ಪವಾರ ಛಾಯಾಗ್ರಹಣ, ವಿನಾಯಕ ಬಸವಾ ನೃತ್ಯ ನಿರ್ದೇಶನ, ಸಿದ್ಧಾರ್ಥ್ ಜಾಲಿಹಾಳ ಸಂಕಲನ, ದೇವು ಕಮ್ಮಾರ ಪ್ರಸಾಧನ, ನಟರಾಜ ಪತ್ತಾರ ಡಿಸೈನ್, ಡಾ. ಪ್ರಭು ಗಂಜಿಹಾಳ, ಡಾ. ವೀರೇಶ ಹಂಡಿಗಿ ಪತ್ರಿಕಾ ಸಂಪರ್ಕ, ನಿಖಿಲ್ ಬೇಲೂರು ಮಠ, ದುರ್ಗಾದೇವಿ ಜಿ.ಎಚ್, ಗಣೇಶ ಜಾಧವ್, ರಾಜಪ್ಪ ಗಜೇಂದ್ರಗಡ ಸಹಕಾರವಿದೆ.
ಧಾರವಾಡ ಸಮೀಪದ ಮುಗದಕೆರೆ ಸುತ್ತ-ಮುತ್ತ, ಡೋರಿಕೆರೆ, ಹುಲಿಕೇರಿ ಸುಂದರ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಮಹಾಮಹಿಮ ಲಡ್ಡುಮುತ್ಯಾ ಚಲನಚಿತ್ರ ಖ್ಯಾತಿಯ ಅರವಿಂದ ಮುಳಗುಂದ ನಿರ್ದೇಶನವನ್ನು ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಭಕ್ತಿಗೀತೆಗಳ ರಸಮಂಜರಿ ಜರುಗಿತು. ಚಿತ್ರನಟ, ಜ್ಯೂ. ಉಪೇಂದ್ರ ವೀರೇಶ ಪುರವಂತ, ಸೌಮ್ಯ ಬಿಜಾಪುರ, ಸುಮಾ ಹಿರೇಮಠ, ಮಲ್ಲು ಅಮೀನಗಡ, ಸಂಗನಗೌಡ ಕುರುಡಗಿ ಹಾಡುಗಳನ್ನು ಹಾಡಿದರು. ಕಾರ್ಯಕ್ರಮದಲ್ಲಿ ಶ್ರೀಮಠದ ಸಂಗಮೇಶ ಹುದ್ದಾರ ಸೇರಿದಂತೆ ಕಲಾವಿದರು, ತಂತ್ರಜ್ಞರು, ಶ್ರೀಮಠದ ಸದ್ಭಕ್ತರು ಪಾಲ್ಗೊಂಡಿದ್ದರು.
`ಮೂರು ದಿನದ ಬಾಳಿಗೆ’ ಎಂಬ ಭಾವಗೀತೆಗೆ ಶ್ರೀಗಳು ಭಾವಪೂರ್ಣ ಅಭಿನಯ ನೀಡಿದ್ದು, ಅಯ್ಯಣ್ಣಸ್ವಾಮಿ, ಪಾರ್ವತಿ ಗಣಾಚಾರಿ, ಭಾವನಾ, ಬೇಬಿ ಸಹನಾ, ಬೇಬಿ ಶ್ರೇಯಾ, ಮಾಸ್ಟರ್ ವೀರೇಶ್ ಅಭಿನಯಿಸಿದ್ದಾರೆ. ಇನ್ನೊಂದು ಭಾವಗೀತೆಗೆ ಚಿತ್ರನಟಿ ಅಪ್ಪು ಮಂಜು, ಮೂರನೇ ಗೀತೆಗೆ ಎಚ್.ವಿಜಯಲಕ್ಷ್ಮೀ (ಖುಷಿ) ಮತ್ತು ಗುರು ರಾಠೋಡ ನಟಿಸಿದ್ದಾರೆ.


