ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಪರಿವರ್ತನಾ ಸೇವಾ ಸಂಸ್ಥೆಯ ಸಂಸ್ಕಾರ ವ್ಯಸನಮುಕ್ತಿ ಕೇಂದ್ರ ಹಾಗೂ ಪುನರ್ವಸತಿ ಕೇಂದ್ರದಲ್ಲಿ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನವನ್ನು ಆಚರಿಸಲಾಯಿತು.
ಗದಗ ನಗರ ಠಾಣೆಯ ಪಿ.ಎಸ್.ಐ ವಿಜಯ ಪವಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪರಿವರ್ತನಾ ಸಂಸ್ಥೆಯವರು ಪುನರ್ವಸತಿ ಕೇಂದ್ರದಿಂದ ವ್ಯಸನಿಗಳನ್ನು ಚಿಕಿತ್ಸೆ ಮೂಲಕ ಗುಣಪಡಿಸಿ ನಿಮ್ಮ ಆರೋಗ್ಯಕರವಾದ ವ್ಯಕ್ತಿತ್ವ ನಿರ್ಮಾಣ ಮಾಡುತ್ತಿರುವುದು ಸಮಾಜಮುಖಿ ಕಾರ್ಯವಾಗಿದೆ. ವ್ಯಸನಮುಕ್ತಿ ಕೇಂದ್ರದಿಂದ ಗುಣಮುಖರಾಗಿ ಹೊರಗೆ ಹೋದ ಮೇಲೆ ಗೌರವಯುತವಾಗಿ ಬಾಳುವಂತಾಗಲಿ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೆ.ಎಸ್.ಎಸ್ ಕಾನೂನು ಮಹಾವಿದ್ಯಾಲಯದ ಆಡಳಿತ ಅಧಿಕಾರಿ ನಾಗರಾಜ್ ಕುಲಕರ್ಣಿ ಮಾತನಾಡಿ, ಸಮಾಜದಲ್ಲಿ ಆರೋಗ್ಯಕರ ಆಹಾರ ಸೇವನೆ, ಆರೋಗ್ಯವಾದ ಮನಸ್ಸು, ಆರೋಗ್ಯವಾದ ದೇಹಗಳ ಸಮತೋಲನ ಕಾಯ್ದುಕೊಳ್ಳಬೇಕು. ದುಶ್ಚಟಗಳಿಂದ ದೂರವಿದ್ದು, ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡು ಸಮಾಜದ ಮಾದರಿ ವ್ಯಕ್ತಿಗಳನ್ನು ಅನುಕರಣೆ ಮಾಡಿ, ಕುಟುಂಬದ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ನಾವೆಲ್ಲರೂ ಮಾದಕ ವಸ್ತುಗಳಿಂದ ದೂರವಿರಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಉಪಾಧ್ಯಕ್ಷರಾದ ಪ್ರತಿಭಾ ತಂಗಡಿ ಮಾತನಾಡಿ, ಸಂಸ್ಥೆಯಲ್ಲಿ ಗುಣಮುಖರಾಗಲು ಬಂದಿರುವ ವ್ಯಸನಿಗಳು ನಮ್ಮ ಕುಟುಂಬದ ಸದಸ್ಯರಿದ್ದಂತೆ. ಅವರನ್ನು ಗುಣಮುಖ ಮಾಡಲು ನಮ್ಮ ಸಂಸ್ಥೆಯ ವೈದ್ಯರು ಹಾಗೂ ಎಲ್ಲ ಸಿಬ್ಬಂದಿಗಳು ಶ್ರಮವಹಿಸುತ್ತಿದ್ದಾರೆ ಎಂದರು.
ವ್ಯಸನಮುಕ್ತಿ ಕೇಂದ್ರದ ಆಪ್ತ ಸಮಾಲೋಚಕಿ ಭಾರತಿ ಕೆಂಚಣ್ಣವರ ಮಾತನಾಡಿ, ಸಂಸ್ಥೆಯ ಗುರಿ ಮತ್ತು ಉದ್ದೇಶಗಳನ್ನು ಹಾಗೂ ಸಂಸ್ಕಾರ, ಸಮಗ್ರ ವ್ಯಸನಮುಕ್ತಿ ಹಾಗೂ ಪುನರ್ವಸತಿ ಕೇಂದ್ರದ ಹಲವಾರು ಕಾರ್ಯಗಳನ್ನು ಪ್ರಸ್ತಾವನೆಯಲ್ಲಿ ಮಾಹಿತಿ ನೀಡಿದರು.
ಕೇಂದ್ರದ ಆಡಳಿತ ಅಧಿಕಾರಿಗಳಾದ ಮಲ್ಲಗೌಡ ತಂಗಡಿ ಉಪಸ್ಥಿತರಿದ್ದರು. ಸುಜಾತಾ ಸ್ವಾಗತಿಸಿದರು. ವೀರೇಶ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಅಜಿತ, ದೇವಪ್ಪ ಹಾಗೂ ಎಲ್ಲ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಮಾಜಿ ಜಿಲ್ಲಾ ಸದಸ್ಯ ರಮೇಶ್ ಸಜ್ಜಗಾರ ಮಾತನಾಡಿ, ಭಾರತ ದೇಶದ ಸರ್ವತೋಮುಖ ಅಭಿವೃದ್ಧಿಯಲ್ಲಿ ಮಾನವ ಸಂಪನ್ಮೂಲ ಮುಖ್ಯವಾಗಿದೆ. ನಾವೆಲ್ಲರೂ ದೇಹ ಮತ್ತು ಮನಸ್ಸನ್ನು ಶುದ್ಧೀಕರಿಸಲು ದುಶ್ಚಟಗಳಿಂದ ದೂರವಿದ್ದು, ಧ್ಯಾನ, ಯೋಗ ಮುಂತಾದ ಆರೋಗ್ಯಕರವಾದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು ಎಂದರು.