ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ರಾಮಗಿರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸಾಪುರ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಾಣವಾಗಿರುವ ಸಿ.ಸಿ ಚರಂಡಿ, ಸಿ.ಸಿ ರಸ್ತೆಗಳನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್ ಪರಿಶೀಲಿಸಿದರು.
ನಂತರ ಸಮೀಪದ ರಾಮಗಿರಿ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ, ಮಕ್ಕಳ ದಾಖಲಾತಿ, ಬೋಧನಾ ಗುಣಮಟ್ಟ, ಸಿಬ್ಬಂದಿ ಹಾಜರಾತಿ, ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯ ಶೈಕ್ಷಣಿಕ ಪ್ರಗತಿ, ಶಾಲಾ ಶೌಚಾಲಯಗಳ ಪರಿಶೀಲನೆ ನಡೆಸಿದರು. ಅಡಿಗೆ ಕೋಣೆಗಳಿಗೆ ಭೇಟಿ ನೀಡಿ ಅಡಿಗೆ ಸಿಬ್ಬಂದಿಗಳೊಂದಿಗೆ ಮಾತನಾಡಿ, ಬಿಸಿ ಊಟಕ್ಕೆ ಬಳಸುವ ಮೆನು ಚಾರ್ಟ್, ಆಹಾರ ಧಾನ್ಯಗಳ ಗುಣಮಟ್ಟಗಳನ್ನು ಪರೀಕ್ಷಿಸಿ ಉತ್ತಮವಾಗಿ, ಸ್ವಚ್ಛವಾಗಿ ಅಡುಗೆ ಮಾಡಿ ಮಕ್ಕಳಿಗೆ ನೀಡಬೇಕೆಂದು ಸಲಹೆ ನೀಡಿದರು.
ಅಕ್ಷರ ದಾಸೋಹಕ್ಕೆ ಬಳಕೆ ಮಾಡುವ ತರಕಾರಿ, ಸೊಪ್ಪು, ಮಕ್ಕಳಿಗೆ ವಿತರಿಸುವ ಮೊಟ್ಟೆ, ಬಾಳೆಹಣ್ಣಿನ ಬಗ್ಗೆ ಮಾಹಿತಿ ಪಡೆದು ಸ್ವಚ್ಛತೆಯನ್ನು ವೀಕ್ಷಿಸಿದರು. ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳೊಂದಿಗೆ ಸಸಿ ನೆಡುವುದರ ಮೂಲಕ ಪರಿಸರ ದಿನಾಚರಣೆಯ ಜಾಗೃತಿಯನ್ನು ಮೂಡಿಸಿದರು.
ವರ್ಗ ಕೋಣೆಗಳಿಗೆ ತೆರಳಿ ವಿಜ್ಞಾನದ ವಿಷಯವಾಗಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ನಂತರ ಪಟ್ಟಣಕ್ಕೆ ಆಗಮಿಸಿದ ಅವರು, ಡಿ.ದೇವರಾಜ್ ಅರಸು ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಆಹಾರದ ಗುಣಮಟ್ಟ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಸ್ನಾನ ಗೃಹ, ಶೌಚಾಲಯಗಳ ಸ್ವಚ್ಛತೆಯನ್ನು ವೀಕ್ಷಿಸಿದರು. ಪಟ್ಟಣದ ಶ್ರೀ ವೀರಗಂಗಾಧರ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ಮಕ್ಕಳ ದಾಖಲಾತಿ, ಶಿಕ್ಷಕರ ಬೋಧನಾ ಗುಣಮಟ್ಟ, ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶದ ಮಾಹಿತಿ ಪಡೆದರು.
ಈ ವೇಳೆ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಜಗದೀಶ್ ಕುರುಬರ, ತಾಂತ್ರಿಕ ಸಂಯೋಜಕ ಹರೀಶ್ ಸೊಬರದ, ತಾಲೂಕು ಐಇಸಿ ಸಂಯೋಜಕ ಮಂಜುನಾಥ ಸ್ವಾಮಿ ಹೆಚ್.ಎಂ, ತಾಂತ್ರಿಕ ಸಹಾಯಕ ಶ್ರೀನಿವಾಸ್, ಗ್ರಾ.ಪಂ ಸಿಬ್ಬಂದಿ, ಶಿಕ್ಷಕರು, ವಿದ್ಯಾರ್ಥಿ ನಿಲಯದ ಮೇಲ್ವಿಚಾರಕರು ಉಪಸ್ಥಿತರಿದ್ದರು.
ಈ ವೇಳೆ 10ನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ಆಂಗ್ಲ ಭಾಷೆಯಲ್ಲಿ ಶೇ.100 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದನ್ನು ತಿಳಿದು, ಉತ್ತಮ ಸಾಧನೆ ಮಾಡಿದ ಆಂಗ್ಲಭಾಷಾ ಶಿಕ್ಷಕಿ, ವಿಕಲಚೇತನರಾಗಿರುವ ಎ.ಎಂ.ಕುಂಬಾರ ಅವರಿಗೆ ಜಿ.ಪಂ ಸಿಇಓ ಭರತ್ ಎಸ್ ಅಭಿನಂದನೆಗಳನ್ನು ಸಲ್ಲಿಸಿದರು.