ವಿಜಯಸಾಕ್ಷಿ ಸುದ್ದಿ, ಗದಗ: ಪಾಲಕರು ಮಕ್ಕಳಿಗೆ ಧೈರ್ಯ ಮತ್ತು ಆತ್ಮವಿಶ್ವಾಸವನ್ನು ತುಂಬಿ ಮುನ್ನಡೆಯಲು ಪ್ರೇರಣೆ ನೀಡಬೇಕು. ಇನ್ನೊಂದು ಮಗುವಿನೊಂದಿಗೆ ನಿಮ್ಮ ಮಗುವನ್ನು ಹೊಲಿಕೆ ಮಾಡಬೇಡಿ, ಪ್ರೋತ್ಸಾಹಿಸಿ ಎಂದು ವಿ.ಪ ಸದಸ್ಯ ಎಸ್.ವ್ಹಿ. ಸಂಕನೂರ ಹೇಳಿದರು.
ಅವರು ಶುಕ್ರವಾರ ನಗರದ ಕೆ.ಸಿ.ರಾಣಿ ರಸ್ತೆಯಲ್ಲಿರುವ ಜ್ಞಾನಶ್ರೀ ಎಜ್ಯುಕೇಶನಲ್ ಟ್ರಸ್ಟ್ನ ಯುರೋ ಕಿಡ್ಸ್ ಶಾಲೆಯ ಪ್ರಥಮ ವಾಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕೆಲವು ಮಕ್ಕಳಿಗೆ ಜ್ಞಾಪಕಶಕ್ತಿ, ವಿಷಯ ಗ್ರಹಿಸುವಿಕೆಯಲ್ಲಿ ಒಂದಿಷ್ಟು ವ್ಯತ್ಯಾಸ ಇರಬಹುದು. ಆದರೆ ಅದನ್ನು ಆ ಮಗುವಿಗೆ ಗೊತ್ತಾಗದ ರೀತಿಯಲ್ಲಿ ಪ್ರೋತ್ಸಾಹಿಸಿ ಅಭ್ಯಾಸಕ್ಕೆ ಅಣಿಗೊಳಿಸಿ. ಮಕ್ಕಳಲ್ಲಿ ಅನುಕರಣೆಯ ಸ್ವಭಾವವು ಪಾಲಕ/ಪೋಷಕರ ಚಲನವಲನ ಗ್ರಹಿಸುತ್ತವೆ. ಆದ್ದರಿಂದ ಪಾಲಕರು ಆದರ್ಶ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು ಎಂದರು.
ಮಕ್ಕಳಿಗೆ ಉತ್ತಮ ಶಿಕ್ಷಣ, ಆದರ್ಶ ಮೌಲ್ಯ, ಸಂಸ್ಕಾರ, ಸಂಸ್ಕೃತಿಯನ್ನು ನೀಡಿ ಅವರನ್ನು ಆದರ್ಶ ವ್ಯಕ್ತಿಗಳನ್ನಾಗಿ ಮಾಡಬೇಕು. ಒಳ್ಳೆ ನೈತಿಕ ಶಿಕ್ಷಣ, ಸದ್ಗುಣಗಳಿಂದ ಮಕ್ಕಳನ್ನು ಬೆಳೆಸಬೇಕು. ಅದಕ್ಕೆ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಹಂತದ ಶಿಕ್ಷಣ ಪೂರಕವಾಗಿದೆ. ಗದಗ ಪರಿಸರದಲ್ಲಿ ಯುರೋ ಕಿಡ್ಸ್ ಒಳ್ಳೆಯ ಹೆಸರು ಮಾಡಿದೆ ಎಂದರು.
ಅತಿಥಿಯಾಗಿ ಆಗಮಿಸಿದ್ದ ಪ್ರೊ. ಶಿವಾನಂದ ಕಲ್ಲೂರ ಮಾತನಾಡಿ, ಯುರೋ ಕಿಡ್ಸ್ ಒಂದೇ ವರ್ಷದಲ್ಲಿ ಪಾಲಕ/ಪೋಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಶಾಲೆಯಿಂದ ಮಕ್ಕಳ ಭವಿಷ್ಯ ಉಜ್ವಲವಾಗಲು ಅಡಿಪಾಯದ ಶಿಕ್ಷಣ ಸಿಗುವಂತಾಗಲಿ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜ್ಞಾನಶ್ರೀ ಎಜ್ಯುಕೇಶನಲ್ ಟ್ರಸ್ಟ್ನ ಅಧ್ಯಕ್ಷ ಡಾ. ಎಚ್.ಐ. ಮಾಳಿ ಸರ್ವರನ್ನು ಸ್ವಾಗತಿಸಿ ಪರಿಚಯಿಸಿದರು. ನಯನಾ ಮಲ್ಲಾಡದ ಪ್ರಾರ್ಥಿಸಿದರು. ಮಕ್ಕಳು ನೃತ್ಯರೂಪಕದೊಂದಿಗೆ ಸ್ವಾಗತಿಸಿದರು. ವಿನ್ಸಂಟ್ ಪಾಟೀಲ ನಿರೂಪಿಸಿದರು. ಟ್ರಸ್ಟ್ನ ಕಾರ್ಯದರ್ಶಿ ಡಾ. ಅರುಣಾ ಮಾಳಿ ವಾರ್ಷಿಕ ವರದಿ ಪ್ರಸ್ತುತಪಡಿಸಿ ವಂದಿಸಿದರು.
ಸಮಾರಂಭದಲ್ಲಿ ಮಾರುತಿ ಮಾಳಿ, ಪಿ.ಬಿ. ಭಾವನೂರ, ಡಾ. ಜಗದೀಶ ಶಿರೋಳ, ಸ್ನೇಹಾ ಗೋಡಖಿಂಡಿ, ಊರ್ಮಿಳಾ ಗುರುಪ್ರಸಾದ ಸೇರಿದಂತೆ ಮಕ್ಕಳು ಪಾಲಕ-ಪೋಷಕರು ಉಪಸ್ಥಿತರಿದ್ದರು.