ವಿಜಯಸಾಕ್ಷಿ ಸುದ್ದಿ, ಗದಗ: ಮಕ್ಕಳಿಗೆ ಉತ್ತಮ ಸಂಸ್ಕಾರ, ಸಂಸ್ಕೃತಿಯೊಂದಿಗೆ ಉತ್ತಮ ಶಿಕ್ಷಣ ನೀಡಿ ಅವರನ್ನು ಆದರ್ಶ ವ್ಯಕ್ತಿಗಳನ್ನಾಗಿ ಮಾಡಲು ಪಾಲಕ, ಪೋಷಕರು ಮುಂದಾಗಬೇಕೆಂದು ಗದುಗಿನ ವೀರೇಶ್ವರ ಪುಣ್ಯಾಶ್ರಮದ ಪೂಜ್ಯ ಕಲ್ಲಯ್ಯಜ್ಜನವರು ಹೇಳಿದರು.
ಅವರು ಗದುಗಿನ ವಿಠ್ಠಲ ಮಂದಿರದಲ್ಲಿ ಗದಗ ಭಾವಸಾರ ಕ್ಷತ್ರಿಯ ಸಮಾಜದಿಂದ ಸಂತ ಜ್ಞಾನೇಶ್ವರ ಮಹಾರಾಜರ 728ನೇ ಸಂಜೀವಿನಿ ಸಮಾಧಿ, ಸೋಹಳಾ ಉತ್ಸವದ ಅಂಗವಾಗಿ ಏರ್ಪಡಿಸಿದ್ದ ತುಲಾಭಾರ ಸ್ವೀಕರಿಸಿ ಆಶೀರ್ವಚನ ದಯಪಾಲಿಸಿದರು.
ಮಕ್ಕಳು ಕಲಿಯುವ ವಯಸ್ಸಿನಲ್ಲಿ ಕಲಿಯಬೇಕು. ಟಿ.ವಿ, ಮೊಬೈಲ್ನಿಂದ ಕಾಲಹರಣ ಮಾಡದೇ, ದುಶ್ಚಟಗಳಿಂದ ದೂರವಿದ್ದು ಪರಿಶ್ರಮದೊಂದಿಗೆ ಓದಿ ಉನ್ನತ ಸ್ಥಾನಮಾನ ಹೊಂದಬೇಕು. ಸನ್ಮಾರ್ಗದೊಂದಿಗೆ ಧರ್ಮದ ಹಾದಿಯಲ್ಲಿ ಮುನ್ನಡೆಯಬೇಕು ಎಂದರು.
ತುಲಾಭಾರ ಸ್ವೀಕರಿಸಿ ಆಶೀರ್ವಚನ ದಯಪಾಲಿಸಿದ ಫಂಡರಾಪೂರದ ಪೂಜ್ಯ ಹ.ಭ.ಪ ಪ್ರಭಾಕರ (ದಾದಾ) ಬೋಧಲೆ ಮಹಾರಾಜ ಅವರು ಧರ್ಮ, ಸಂಸ್ಕಾರ, ಸಮಾಜ ಸಂಘಟನೆ ಕುರಿತು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಧಾನ ಪರಿಷತ್ ಸದಸ್ಯ ಡಾ. ಎಂ.ಜಿ. ಮುಳೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಮಾಜ ಬಾಂಧವರು ಆರ್ಥಿಕವಾಗಿ, ಸಾಮಾಜಿಕವಾಗಿ ಮುನ್ನಡೆ ಸಾಧಿಸಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ಸರ್ಕಾರದಿಂದ ಲಭ್ಯವಿರುವ ಸೌಲಭ್ಯಗಳನ್ನು ಪಡೆದುಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ಗದಗ ಭಾವಸಾರ ಕ್ಷತ್ರಿಯ ಸಮಾಜ ಉತ್ಸವ ಸಮಿತಿ, ಮಹಿಳಾ ಸಮಿತಿ, ಯುವಕ ಮಂಡಳ ಸೇರಿದಂತೆ ಸಮಾಜಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಸಂಜೆ ದಿಂಡಿಯ ನಗರ ಪ್ರದಕ್ಷಿಣೆ ಜರುಗಿತು.