ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ರಾಜ್ಯ ಸರಕಾರ ಶಿಕ್ಷಣಕ್ಕೆ ಸಾಕಷ್ಟು ಅನುಕೂಲತೆಗಳನ್ನು ಒದಗಿಸುತ್ತಿದೆ. ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯಗೊಳಿಸಿರುವ ಸರಕಾರ ಅದಕ್ಕೆ ಪೂರಕವಾಗಿ ಕಟ್ಟಡ, ಇನ್ನಿತರ ಭೌತಿಕ ಸೌಲಭ್ಯಗಳನ್ನು ಒದಗಿಸುವಲ್ಲಿ ಮುಂದಿದೆ. ಈ ಸೌಲಭ್ಯಗಳನ್ನು ಬಳಸಿಕೊಂಡು ನೀವು ಉತ್ತಮ ಶಿಕ್ಷಣವನ್ನು ನಿಮ್ಮ ಮಕ್ಕಳಿಗೆ ಒದಗಿಸಬೇಕೆಂದು ಕುರುಡಗಿ ಗ್ರಾಮ ಪಂಚಾಯತಿ ಅಧ್ಯಕ್ಷ ಶಿವನಗೌಡ ಸಿದ್ದನಗೌಡ ಹೇಳಿದರು.
ನರೇಗಲ್ಲ ಹೋಬಳಿಯ ಕುರುಡಗಿ ಗ್ರಾ.ಪಂ ವ್ಯಾಪ್ತಿಯ ಯರೆಬೇಲೇರಿ ಗ್ರಾಮದಲ್ಲಿ ರಾಜ್ಯ ಸರಕಾರದ ಅನುದಾನದಲ್ಲಿ ನಿರ್ಮಾಣವಾದ ಪ್ರಾಥಮಿಕ ಶಾಲೆಯ ನೂತನ 3 ಕೊಠಡಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಾಲೆಗೆ ವಿದ್ಯಾರ್ಥಿಗಳ ದಾಖಲಾತಿಯ ಜೊತೆಗೆ ಹಾಜರಾತಿಯೂ ಬಹು ಮುಖ್ಯ ಎಂಬುದನ್ನು ಮನಗಂಡಿರುವ ಸರಕಾರ ಅದಕ್ಕಾಗಿ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ, ಉಚಿತ ಪಠ್ಯಪುಸ್ತಕ ಮತ್ತು ಬಿಸಿಯೂಟದ ವ್ಯವಸ್ಥೆಯನ್ನು ಮಾಡಿದೆ. ಈ ಎಲ್ಲ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ನಿಮ್ಮ ಮಕ್ಕಳನ್ನು ಜಾಣರನ್ನಾಗಿ ಮಾಡಿರಿ ಎಂದು ಸಿದ್ದನಗೌಡ ಹೇಳಿದರು.
ಬಿಇಒ ಫಣಿಬಂದ ಮಾತನಾಡಿ, ಪ್ರತಿಭೆ ಎನ್ನುವುದು ಕೆಲವರಿಗಷ್ಟೇ ಸೀಮಿತವಾಗಿಲ್ಲ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪಟ್ಟಣದ ವಿದ್ಯಾರ್ಥಿಗಳಿಗಿಂತ ಪ್ರತಿಭೆಯಲ್ಲಿ ಎಂದಿಗೂ ಹಿಂದೆ ಬಿದ್ದಿಲ್ಲ. ಇಲ್ಲಿಗೆ ಸಮೀಪದ ಕುರುಡಗಿ ಗ್ರಾಮದ ಡಾ. ಆರ್.ಸಿ. ಹಿರೇಮಠರು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದುದೇ ಇದಕ್ಕೆ ಸಾಕ್ಷಿ. ನಿಮ್ಮ ಮಕ್ಕಳು ಮುಂದೆ ಈ ದೇಶದ ಯಾವುದಾದರೂ ಉನ್ನತ ಹುದ್ದೆಯನ್ನು ಹೊಂದಬಹುದು. ಅದಕ್ಕೆ ಪಾಲಕರು ಈಗಿನಿಂದಲೇ ನೀರೆರೆದು ಪೋಷಿಸಬೇಕು. ಕೇವಲ ಭೌತಿಕ ಸೌಲಭ್ಯಗಳ ಹಿಂದೆ ಬೀಳದೆ, ನಿಮ್ಮ ಮಕ್ಕಳ ಬೌದ್ಧಿಕ ಪ್ರಗತಿಯತ್ತಲೂ ಗಮನ ಹರಿಸಿ ಎಂದರು.
ಸಮಾರಂಭದಲ್ಲಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು-ಸಿಬ್ಬಂದಿ, ಎಸ್ಡಿಎಂಸಿ ಅಧ್ಯಕ್ಷರು-ಸದಸ್ಯರು, ಗ್ರಾ.ಪಂ ಸದಸ್ಯರು, ಶಾಲೆಯ ಮುಖ್ಯ ಶಿಕ್ಷಕರು-ಸಿಬ್ಬಂದಿ ಉಪಸ್ಥಿತರಿದ್ದರು.