ವಿಜಯಸಾಕ್ಷಿ ಸುದ್ದಿ, ಗದಗ : ಕೃಷಿ ಮತ್ತು ಉದ್ಯಮದಲ್ಲಿ ಅನುಭವ ಹೊಂದಿರುವ ನನಗೆ ತಮ್ಮ ಪ್ರಗತಿಯ ಜೊತೆಯಲ್ಲಿ ಹೆಜ್ಜೆ ಹಾಕುವ ಸಂಕಲ್ಪ ಮಾಡಿದ್ದೇನೆ. ಈ ಹಿನ್ನೆಲೆಯಲ್ಲಿ ನನಗೂ ಒಂದು ಬಾರಿ ಅವಕಾಶ ನೀಡಿ ಗೆಲುವಿಗೆ ಆಶೀರ್ವದಿಸಬೇಕೆಂದು ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಮನವಿ ಮಾಡಿದರು.
ನಗರದ ಕೈಗಾರಿಕಾ ಪ್ರದೇಶದಲ್ಲಿ ವಿದ್ಯುತ್ ಗುತ್ತಿಗೆದಾರರ ಸಂಘದ ಸಭೆಯಲ್ಲಿ ಮತಯಾಚಿಸಿ ಮಾತನಾಡಿದ ಅವರು, ನಮ್ಮ ಮಾರ್ಗದರ್ಶಿಗಳಾದ ಎಚ್.ಕೆ. ಪಾಟೀಲರು ಶಾಸಕರಾಗಿ, ಸಚಿವರಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಅವರ ಸಲಹೆ, ಸೂಚನೆಗಳನ್ನು ಪಾಲಿಸುವೆ. ವಿದ್ಯುತ್ ಗುತ್ತಿಗೆದಾರರ ಸಂಕಷ್ಟಗಳಿಗೂ ಸ್ಪಂದಿಸುವೆ ಎಂದರು.
ವಿದ್ಯುತ್ ಗುತ್ತಿಗೆದಾರರ ಸಂಘದ ನಾಗರಾಜ ಶೆಟ್ರು ಮಾತನಾಡಿದರು. ಮುಖಂಡರಾದ ರಾಜಶೇಖರ ಮೆಣಸಿನಕಾಯಿ, ಬಂಗಾರೇಶ ಹಿರೇಮಠ, ವಿದ್ಯುತ್ ಗುತ್ತಿಗೆದಾರರ ಸಂಘದ ಮಲ್ಲಣ್ಣ ಕಿಂದ್ರಿ, ಶಿವಾನಂದ ಬಾಲಪ್ಪನವರ, ಪ್ರಕಾಶ ಅಂಗಡಿ, ಪ್ರಭು ದಂಡಾವತಿ, ಎಂ.ಎಚ್. ಕುದಾವಂದ, ಐ.ಎಸ್. ನರಗುಂದ, ಶಫಿ ಹನುಮಸಾಗರ ಉಪಸ್ಥಿತರಿದ್ದರು.