ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ್ದ ಕಾಂತಾರ ಸಿನಿಮಾ ಸೂಪರ್ ಹಿಟ್ ಆಗಿದ್ದು ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ದೇಶ, ವಿದೇಶದಲ್ಲೂ ಸಖತ್ ಸದ್ದು ಮಾಡಿದ್ದ ಕಾಂತಾರ ಸಿನಿಮಾ ಪ್ರೀಕ್ವೆಲ್ ರೆಡಿಯಾಗುತ್ತಿದ್ದು ಸದ್ಯದಲ್ಲೇ ತೆರೆಗೆ ಬರಲು ಸಜ್ಜಾಗಿದೆ. ಈ ಮಧ್ಯೆ ಚಿತ್ರತಂಡಕ್ಕೆ ಸಾಕಷ್ಟು ವಿಘ್ನಗಳು ಎದುರಾಗಿದ್ದು ಈ ಬಗ್ಗೆ ದೈವ ಮೊದಲೇ ಎಚ್ಚರಿಕೆ ನೀಡಿತ್ತೆಂದು ನಿರ್ಮಾಪಕರು ತಿಳಿಸಿದ್ದಾರೆ.
ಕಾಂತಾರ ಚಿತ್ರ ನಿರ್ಮಾಣ ಹಂತದಲ್ಲಿರುವಾಗಲೇ ಸಾಕಷ್ಟು ಮಂದಿ ನಿಧನರಾದರು. ಕೆಲವರು ಅಕಾಲಿಕ ಮರಣಕ್ಕೆ ಈಡಾದರೆ ಇನ್ನೂ ಕೆಲವು ಘಟನೆಗಳು ಸೆಟ್ನಲ್ಲಿ ನಡೆದವು. ಇದಕ್ಕೆಲ್ಲ ದೈವದ ಶಾಪವೇ ಕಾರಣ ಎಂಬ ಸುದ್ದಿಗಳು ಹರಿದಾಡುತ್ತಿವೆ. ಇದೀಗ ಸಿನಿಮಾದ ಸಹ ನಿರ್ಮಾಪಕರಾಗಿರುವ ಚೆಲುವೇ ಗೌಡ ಅವರು ಸಿನಿಮಾ ಚಿತ್ರೀಕರಣಕ್ಕೆ ಮುಂಚೆಯೇ ದೈವ ಕೊಟ್ಟಿದ್ದ ಎಚ್ಚರಿಕೆ ಬಗ್ಗೆ ಮಾತನಾಡಿದ್ದಾರೆ.
‘ಈ ವರೆಗೆ ನಡೆದ ಅನಾಹುತಕಾರಿ ಘಟನೆಗಳು ಯಾವುವೂ ಸಹ ಸಿನಿಮಾದ ಸೆಟ್ನಲ್ಲಿ ನಡೆದಿಲ್ಲ. ಕೇವಲ ಒಂದು ಘಟನೆ ಮಾತ್ರ ಸಿನಿಮಾ ಸೆಟ್ನಲ್ಲಿ ನಡೆದಿದೆ. ಸಿನಿಮಾ ಸೆಟ್ನಲ್ಲಿಯೇ ಎಲ್ಲವೂ ನಡೆದಿದೆ ಎಂಬುದು ಸುಳ್ಳು. ಅಲ್ಲದೆ ಸಿನಿಮಾ ಭಾರಿ ಬೃಹತ್ ಆಗಿದ್ದು, ಇಂಥಹಾ ಬೃಹತ್ ಸಿನಿಮಾಗಳನ್ನು ನಿರ್ಮಾಣ ಮಾಡುವಾಗ ಸೆಟ್ನಲ್ಲಿ ಅವಘಡಗಳು ನಡೆಯುವುದು ಸಾಮಾನ್ಯ. ಆದರೂ ನಾವು ಸಕಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದೇವೆ’ ಎಂದಿದ್ದಾರೆ.
‘ನಾವು ಸಿನಿಮಾ ಚಿತ್ರೀಕರಣ ಪ್ರಾರಂಭ ಮಾಡುವ ಮುಂಚೆಯೇ ದೈವದ ಬಳಿ ಹೋಗಿದ್ದೆವು, ಪಂಜುರ್ಲಿ ಆಗಲೇ ನಮಗೆ ಎಚ್ಚರಿಕೆ ಕೊಟ್ಟಿತ್ತು. ಚಿತ್ರೀಕರಣದ ಸಂದರ್ಭದಲ್ಲಿ ಸಾಕಷ್ಟು ಅಡೆ-ತಡೆಗಳು ಬರುತ್ತವೆ ಆದರೆ ನೀವು ನಿಲ್ಲಬೇಡಿ, ಇದು ಯಶಸ್ವಿ ಆಗುತ್ತದೆ’ ಎಂದಿತ್ತು. ಅದರಂತೆ ನಾವು ನಡೆದುಕೊಳ್ಳುತ್ತಿದ್ದೇವೆ. ನಾವು ದೇವರಲ್ಲಿ, ದೈವದಲ್ಲಿ ನಂಬಿಕೆ ಇಡುವ ಜನ, ಪ್ರತಿದಿನವೂ ಪೂಜೆ ಮಾಡಿಯೇ ಚಿತ್ರೀಕರಣ ಪ್ರಾರಂಭಿಸುತ್ತೇವೆ, ದೈವದ ಆಶೀರ್ವಾದಗಳನ್ನು ಪಡೆಯುತ್ತೇವೆ’ ಎಂದು ಚೆಲುವೇ ಗೌಡ ಹೇಳಿದ್ದಾರೆ.