ವಿಜಯಸಾಕ್ಷಿ ಸುದ್ದಿ, ಲಕ್ಷೇಶ್ವರ : ಈ ಬಾರಿ ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ಕಳೆದ ಸೋಮವಾರ ಭಾರೀ ಮಳೆ ಸುರಿದು ಅನೇಕ ಕಡೆಗಳಲ್ಲಿ ಸೇತುವೆ, ರಸ್ತೆ, ಹೊಲಗಳ ಬದುವುಗಳು ಒಡೆದು ಹೋಗಿದ್ದು, ಗೊಜನೂರು-ಯಳವತ್ತಿ ರಸ್ತೆಯಲ್ಲಿನ ನೀರು ಸರಿಯಾಗಿ ಹರಿದುಹೋಗದೆ ರೈತರ ಹೊಲಕ್ಕೆ ನುಗ್ಗಿ ಹತ್ತಾರು ಎಕರೆ ಜಮೀನಿನ ಮಣ್ಣು ಕೊಚ್ಚಿಹೋಗಿತ್ತು. ಅಲ್ಲದೆ, ರಸ್ತೆಯೂ ಸಂಪೂರ್ಣ ಹದಗೆಟ್ಟಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಶಾಸಕ ಡಾ.ಚಂದ್ರು ಲಮಾಣಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಅಲ್ಲಿ ಸೇರಿದ್ದ ರೈತರು ರಸ್ತೆಯ ಪರಿಸ್ಥಿತಿಯನ್ನು ವಿವರಿಸಿ, ಪ್ರತಿವರ್ಷ ಮಳೆಗಾಲದಲ್ಲಿ ಈ ಸಮಸ್ಯೆ ಎದುರಿಸಬೇಕಾಗಿದ್ದು, ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಮನವಿ ಮಾಡಿದರು. ಇದೀಗ ಎಲ್ಲೆಡೆ ಬಿತ್ತನೆ ಕಾರ್ಯ ಪ್ರಾರಂಭವಾಗಿದ್ದು, ಇದೇ ರಸ್ತೆಯ ಮೂಲಕ ನೂರಾರು ಎಕರೆ ಪ್ರದೇಶಗಳ ರೈತರು ತೆರಳಬೇಕಿದೆ. ರಸ್ತೆ ಹದಗೆಟ್ಟಿರುವದರಿಂದ ಪರದಾಡುವಂತಾಗಿದ್ದು, ಕೂಡಲೇ ಕ್ರಮ ಕೈಗೊಳ್ಳುವಂತೆ ವಿನಂತಿಸಿದರು.
ರೈತರ ಸಮಸ್ಯೆಗಳನ್ನು ಆಲಿಸಿದ ಶಾಸಕ ಡಾ.ಚಂದ್ರು ಲಮಾಣಿ, ಮಳೆಯ ನೀರು ಹೊಲಕ್ಕೆ ನುಗ್ಗಿದಾಗ ಫಲವತ್ತಾದ ಭೂಮಿಯ ಮಣ್ಣು ಹರಿದು ಹೋಗುವಂತಾಗುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಮಳೆಯ ನೀರು ಹೊಲಕ್ಕೆ ಹರಿದು ಹೋಗದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು. ಅಲ್ಲದೆ ರಸ್ತೆಗಳು ಸರಿಯಾಗಿದ್ದರೆ ಸುತ್ತಮುತ್ತಲಿನ ಭೂಮಿಗಳಿಗೆ ರೈತರು ಹೋಗಿ ಬರಲು ಅನೂಕೂಲವಾಗುತ್ತದೆ. ಈ ನಿಟ್ಟಿನಲ್ಲಿ ರಸ್ತೆ ನಿರ್ಮಿಸುವಾಗ ಎಲ್ಲರೂ ಸಹಕಾರ ನೀಡುವದು ಅವಶ್ಯ ಎಂದು ಹೇಳಿದರು. ಆದಷ್ಟು ಶೀಘ್ರ ಈ ರಸ್ತೆಯ ದುರಸ್ಥಿಗೆ ಕ್ರಮ ತೆಗೆದುಕೊಂಡು ರೈತರಿಗೆ ಅನೂಕಲ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ ವಾಸುದೇವ ಸ್ವಾಮಿ, ಕಂದಾಯ ಅಧಿಕಾರಿ ಬಿ.ಎಂ. ಕಾತ್ರಾಳ, ಗ್ರಾಮಸ್ಥರು ಇದ್ದರು.