ಗದಗ: ಲಕ್ಕುಂಡಿ ಗ್ರಾಮದಲ್ಲಿ ಈ ವರ್ಷದ ಜನವರಿ 10ರಂದು ಪತ್ತೆಯಾದ ಚಿನ್ನದ ನಿಧಿ ಇದೀಗ ಐತಿಹಾಸಿಕ ಸಂಶೋಧಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಗದಗ ಜಿಲ್ಲೆಯ ರಿತ್ತಿ ಕುಟುಂಬದ ಮನೆಯ ಪಾಯ ತೋಡುವ ವೇಳೆ ಸಿಕ್ಕಿದ್ದ ಈ ಆಭರಣಗಳು ಕೇವಲ ಚಿನ್ನದ ಸಂಗ್ರಹವಲ್ಲದೆ, ದಕ್ಷಿಣ ಭಾರತದ ಮಧ್ಯಯುಗದ ಸಂಸ್ಕೃತಿ ಮತ್ತು ಕಲೆಯ ಅಮೂಲ್ಯ ಸಾಕ್ಷಿಗಳಾಗಿವೆ ಎಂದು ಪುರಾತತ್ವ ತಜ್ಞರು ತಿಳಿಸಿದ್ದಾರೆ.
ಜಿಲ್ಲಾಡಳಿತ ಭವನದಲ್ಲಿ ನಡೆದ ಪರಿಶೀಲನೆಯಲ್ಲಿ ತಜ್ಞರ ಸಮಿತಿ ಈ ಆಭರಣಗಳ ಮೂಲ ಹಾಗೂ ಮಹತ್ವವನ್ನು ವಿವರಿಸಿದೆ. ಸುಮಾರು 500ರಿಂದ 600 ವರ್ಷಗಳಷ್ಟು ಹಳೆಯದಾದ ಈ ಒಡವೆಗಳು ಕಲ್ಯಾಣ ಚಾಲುಕ್ಯರು ಮತ್ತು ವಿಜಯನಗರ ಸಾಮ್ರಾಜ್ಯ ಕಾಲಘಟ್ಟದ ಕಲಾತ್ಮಕ ಪರಂಪರೆಯನ್ನು ಪ್ರತಿಬಿಂಬಿಸುತ್ತವೆ.
ಈ ಆಭರಣಗಳು ಸಾಮಾನ್ಯ ಬಳಕೆಗೆ ಸಂಬಂಧಿಸಿದವುಗಳಲ್ಲದೆ ದೇವಾಲಯಗಳಲ್ಲಿ ದೇವತೆಗಳಿಗೆ ಅಲಂಕರಿಸುವ ವಿಶೇಷ ಒಡವೆಗಳಾಗಿವೆ ಎಂದು ತಜ್ಞರು ತಿಳಿಸಿದ್ದಾರೆ. ಈ ಸಂಗ್ರಹದಲ್ಲಿ ಹೆಣ್ಣು ದೇವರ ಮೂರ್ತಿಯೂ ಪತ್ತೆಯಾಗಿದ್ದು, ಅವುಗಳ ಧಾರ್ಮಿಕ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ.
ಒಟ್ಟು 465 ಗ್ರಾಂ ತೂಕದ ಈ ಆಭರಣಗಳಲ್ಲಿ ಚಿನ್ನದ ಜೊತೆಗೆ ನೀಲಮಣಿ, ಸ್ಪಟಿಕ ಹಾಗೂ ಹವಳದಂತಹ ಅಮೂಲ್ಯ ರತ್ನಗಳನ್ನು ಬಳಸಲಾಗಿದೆ. ಇಂದಿನ ಮಾರುಕಟ್ಟೆ ದರದ ಪ್ರಕಾರ ಚಿನ್ನದ ಮೌಲ್ಯ ಸುಮಾರು 35–40 ಲಕ್ಷ ರೂಪಾಯಿ ಇದ್ದರೂ, ಇದರ ಪ್ರಾಚೀನ ಹಾಗೂ ಕಲಾತ್ಮಕ ಮೌಲ್ಯ ಸುಮಾರು 8 ಕೋಟಿ ರೂಪಾಯಿವರೆಗೆ ಇರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.
ಸಮಿತಿ ಅಧ್ಯಕ್ಷ ಎಂ.ಎಸ್. ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ಕಲಾ ಇತಿಹಾಸಗಾರ ರಾಘವೇಂದ್ರ ಕುಲಕರ್ಣಿ, ಪ್ರೊ. ಚೂಡಾಮಣಿ ನಂದಗೋಪಾಲ, ಶಾಸನ ತಜ್ಞ ಹನುಮಾಪಕ್ಷಿ ಗೋಗಿ, ರತ್ನಶಾಸ್ತ್ರಜ್ಞ ಪ್ರಭು ಕಮ್ಮಾರ ಹಾಗೂ ಡಾ. ಶೇಜೇಶ್ವರ ಸೇರಿದ್ದ ತಜ್ಞರ ತಂಡ ಹಲವು ಗಂಟೆಗಳ ಕಾಲ ಸೂಕ್ಷ್ಮ ಪರಿಶೀಲನೆ ನಡೆಸಿದೆ. ಈ ಪತ್ತೆ ಲಕ್ಕುಂಡಿಯ ಪುರಾತನ ಪರಂಪರೆಯನ್ನು ಮತ್ತೊಮ್ಮೆ ಬೆಳಕಿಗೆ ತಂದಿರುವ ಮಹತ್ವದ ಘಟನೆ ಎಂದು ವಿಶ್ಲೇಷಿಸಲಾಗಿದೆ.



