ಬೆಂಗಳೂರು:- ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಶೀಘ್ರವೇ ರಾಜಧಾನಿ ಬೆಂಗಳೂರಿಗೆ ಹಳದಿ ಮಾರ್ಗದ ಮೊದಲ ರೈಲು ಬರಲಿದೆ ಎಂದು BMRCL ಮೂಲಗಳು ಹೇಳಿವೆ.
ನಮ್ಮ ಮೆಟ್ರೋದ ಆರ್ವಿ ರೋಡ್-ಬೊಮ್ಮಸಂದ್ರ ಹಳದಿ ಮಾರ್ಗ ಕಾರ್ಯಾಚರಣೆ ವಿಳಂಬವಾಗುತ್ತಿರುವುದಕ್ಕೆ ಜನರು ನಿರಾಶೆಗೊಂಡಿದ್ದಾರೆ. ಇದೀಗ ಸಂಸದ ತೇಜಸ್ವಿ ಸೂರ್ಯ ಹಳದಿ ಮಾರ್ಗ ಉದ್ಘಾಟನೆ ವಿಳಂಬಕ್ಕೆ ಕಾರಣ ನೀಡಿದ್ದಾರೆ.
ಈ ಸಂಬಂಧ X ಮಾಡಿರುವ ತೇಜಸ್ವಿ ಸೂರ್ಯ, ರೈಲು ತಯಾರಿಕೆಯನ್ನು ತ್ವರಿತಗೊಳಿಸಲು ನಾನು ರೈಲು ತಯಾರಕರಾದ ತೀತಗಢ್ ರೈಲ್ ಸಿಸ್ಟಮ್ಸ್ನೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ. ಈಗ, ಜನವರಿ 6 ರಂದು ಬೆಂಗಳೂರಿಗೆ ಮೊದಲ ರೈಲು ಬರಲಿದೆ. ಜನವರಿ ಅಂತ್ಯ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಎರಡನೇ ರೈಲು ಮತ್ತು ಏಪ್ರಿಲ್ನಲ್ಲಿ ಮೂರನೇ ರೈಲು ಬೆಂಗಳೂರಿಗೆ ತಲುಪಲಿದೆ ಎಂದು ಹೇಳಿದರು.
ಬಳಿಕ ತಿಂಗಳಿಗೆ 1 ರೈಲು, ಸೆಪ್ಟೆಂಬರ್ ವೇಳೆಗೆ ತಿಂಗಳಿಗೆ 2 ರೈಲುಗಳು ಆಗಮಿಸಲಿವೆ. ಜನವರಿ 6 ರಂದು ತೀತಗಢ್ ರೈಲ್ ಸಿಸ್ಟಮ್ಸ್ ಘಟಕಕ್ಕೆ ತೆರಳಿ ಪರಿಶೀಲನೆ ನಡೆಸುವಂತೆ ಕೇಂದ್ರ ನಗರಾಭಿವೃದ್ಧಿ ಇಲಾಖೆ ಸಚಿವರು ಮನವಿ ಮಾಡಿದ್ದೇನೆ. ಇದೇ ವೇಳೆ ಬೆಂಗಳೂರಿಗೆ ಬರಲಿರುವ ಮೆಟ್ರೋ ರೈಲುಗಳಿಗೆ ಸಚಿವರು ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ಹಳದಿ ಮಾರ್ಗ ಕಾರ್ಯಾಚರಣೆ ವಿಳಂಬವಾಗುತ್ತಿರುವುದಕ್ಕೆ ನಾನೂ ನಿರಾಶೆಗೊಂಡಿದ್ದೇನೆ. ಈ ಮಾರ್ಗ ಸಾಧ್ಯವಾದಷ್ಟು ಬೇಗ ಪ್ರಾರಂಭಿಸಲು ನಾನು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದೇನೆ ಎಂದು ಭರವಸೆ ನೀಡಿದರು.