ಮುರುಡೇಶ್ವರ:- ಪ್ರವಾಸಿಗರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಹೊಸವರ್ಷಕ್ಕೆ ಮುರುಡೇಶ್ವರ ಕಡಲ ತೀರ ಓಪನ್ ಮಾಡಲಾಗಿದೆ.
ಈ ಸಂಬಂಧ ಕಾರವಾರದಲ್ಲಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ಮಾತನಾಡಿ, ನಾಳೆ ರಾತ್ರಿ ಹೊಸ ವರ್ಷಾಚರಣೆಯ ಸಂಭ್ರಮಕ್ಕೆ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ಬೀಚ್ನ ಕಡಲ ತೀರ ಓಪನ್ ಇರುತ್ತದೆ. ಮುರುಡೇಶ್ವರ ಸಮುದ್ರತೀರದಲ್ಲಿ ಹೊಸ ವರ್ಷದ ಸಂಭ್ರಮವನ್ನು ಆಚರಿಸಲು ಅನುವು ಮಾಡಿಕೊಡಲಾಗಿದೆ ಎಂದರು.
ಕಡಿಮೆ ಸ್ಥಳದಲ್ಲಿ ನಾವು ಸ್ವಿಮ್ಮಿಂಗ್ ಜೋನ್ ಮಾಡಿದ್ದೇವೆ. ನಾಳೆಯಿಂದ ಎಷ್ಟು ಜನ ಬರುತ್ತಾರೆಂದು ನೋಡಿ ಸ್ವಿಮ್ಮಿಂಗ್ ಜೋನ್ ವಿಸ್ತರಣೆ ಮಾಡುತ್ತೇವೆ ಎಂದಿದ್ದಾರೆ. ಮಂಗಳವಾರದಿಂದ ಮುರುಡೇಶ್ವರದಲ್ಲಿ ಸ್ವಿಮ್ಮಿಂಗ್ ಜೋನ್ ಮತ್ತಷ್ಟು ವಿಸ್ತರಣೆ ಮಾಡಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆಗೆ ಬರುವಂಥ ಪ್ರವಾಸಿಗರ ರಕ್ಷಣೆಯೇ ನಮ್ಮ ಆದ್ಯತೆ. ಸದ್ಯಕ್ಕೆ ಕಡಲ ತೀರದಲ್ಲಿ ಸುರಕ್ಷತೆ ಕ್ರಮ ಕೈಗೊಂಡಿದ್ದೇವೆ. ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸುವಂತೆ ತಿಳಿಸಲಾಗಿದೆ ಎಂದು ಉತ್ತರ ಕನ್ನಡ ಡಿಸಿ ಲಕ್ಷ್ಮೀ ಪ್ರಿಯಾ ಹೇಳಿಕೆ ನೀಡಿದ್ದಾರೆ.
ಮುರುಡೇಶ್ವರದ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧವಿತ್ತು. ಕಳೆದ 20 ದಿನಗಳಿಂದ ಜಿಲ್ಲಾಡಳಿತ ನಿರ್ಬಂಧ ವಿಧಿಸಿತ್ತು. ಈ ಹಿಂದೆ ನಾಲ್ವರು ವಿದ್ಯಾರ್ಥಿನಿಯರ ಸಾವು ಉಂಟಾದ ಹಿನ್ನೆಲೆಯಲ್ಲಿ ಪ್ರವೇಶ ನಿರ್ಬಂಧಿಸಲಾಗಿತ್ತು. ಆದರೆ, ಇದೀಗ ಹೊಸ ವರ್ಷದ ಸಂಭ್ರಮಾಚರಣೆಗೆ ಆ ನಿರ್ಬಂಧವನ್ನು ತೆರವುಗೊಳಿಸಲಾಗಿದೆ.