ಬೆಳಗಾವಿ: ಸರ್ಕಾರಿ ಆಸ್ಪತ್ರೆಗಳಲ್ಲಿ ಅವಧಿ ಮೀರಿ 6 ತಿಂಗಳು ಮುಗಿದಿರೋ ಔಷಧಗಳ ಬಳಕೆ ಆಗಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ. ವಿಧಾನಸಭೆ ಸದನದಲ್ಲಿ ಬಾಣಂತಿಯರ ಸಾವಿನ ಚರ್ಚೆಯಲ್ಲಿ ಮಾತನಾಡಿದ ಅವರು, ಅವಧಿ ಮೀರಿ 6 ತಿಂಗಳು ಮುಗಿದಿರೋ ಔಷಧಗಳ ಬಳಕೆ ಆಗಿದೆ.
ಇದರ ಬಗ್ಗೆ ಡ್ರಗ್ ಕಂಟ್ರೋಲ್ ಬೋರ್ಡ್ ಹೇಳಿದೆ. ಇಂತ ಔಷಧ ಬಳಸದಂತೆ ಸೂಚಿಸಿದೆ, ಒಂದು ವೇಳೆ ಪೂರೈಸಿದ್ದರೆ ಯೂಸ್ ಮಾಡಬೇಡಿ ಎಂದಿದೆ. ಹಾಗಿದ್ದರೂ ಯೂಸ್ ಮಾಡಿದ್ದು ಸರಿಯೇ? ಎಂದು ಪ್ರಶ್ನೆ ಮಾಡಿದರು. ಮೃತಪಟ್ಟ ಮಹಿಳೆಯರನ್ನು (ಬಾಣಂತಿಯರು) ನೋಡಿದರೆ ನೋವಾಗುತ್ತೆ. ಸರ್ಕಾರಿ ಆಸ್ಪತ್ರೆಗೆ ಹೋಗಬಾರದವ್ವ ಅಂತ ಮಹಿಳೆಯರು ಮಾತಾಡ್ಕೊಳ್ತಿದ್ದಾರೆ. 50% ಮಹಿಳೆಯರು ಸರ್ಕಾರಿ ಆಸ್ಪತ್ರೆಗೆ ಹೋಗ್ತಿಲ್ಲ, ಖಾಸಗಿ ಆಸ್ಪತ್ರೆಗೆ ಹೋಗ್ತಿದ್ದಾರೆ ಎಂದರು.
ಈ ವೇಳೆ ಅಶೋಕ್ ಮಾತಿಗೆ ಶಾಸಕ ಕೋನರೆಡ್ಡಿ ಆಕ್ಷೇಪ ವ್ಯಕ್ತಪಡಿಸಿದರು. ವಿಪಕ್ಷ ನಾಯಕರಾಗಿ ಸರ್ಕಾರಿ ಆಸ್ಪತ್ರೆಗೆ ಹೋಗಬೇಡಿ ಅಂತ ಸಂದೇಶ ಕೊಡ್ತಿದ್ದೀರಾ? ಜನರಿಗೆ ಏನು ಸಂದೇಶ ಹೋಗುತ್ತೆ? ಒಳ್ಳೆಯ ಸಲಹೆ ಕೊಡಿ. ಸರ್ಕಾರ ಆಸ್ಪತ್ರೆಗಳ ಪರಿಸ್ಥಿತಿ ಉತ್ತಮಗೊಳಿಸಿದೆ, ಸರಿಯಾಗಿ ಮಾತಾಡಿ. ಸರ್ಕಾರಿ ಆಸ್ಪತ್ರೆ, ವೈದ್ಯರ ಮೇಲೆ ಕೆಟ್ಟ ಭಾವನೆ ಬರುವಂತೆ ಮಾತನಾಡಬೇಡಿ ಎಂದರು.