ಎಲ್ಲ ರೈತರ ಹಿತಕಾಯಲು ಸರ್ಕಾರ ಬದ್ಧವಾಗಿದೆ- ಕಂದಾಯ ಸಚಿವ ಕೃಷ್ಣ ಭೈರೇಗೌಡ

0
Spread the love

ಬೆಳಗಾವಿ ಸುವರ್ಣ ವಿಧಾನಸೌಧ: ರಾಜ್ಯದಲ್ಲಿ ವಕ್ಫ್ ಆಸ್ತಿ ವಿಚಾರಗಳಲ್ಲಿ ಸುಳ್ಳು ಕಥೆಗಳನ್ನು ಸೃಷ್ಟಿಸಿ, ಸಾರ್ವಜನಿಕರು ಹಾಗೂ ರೈತರಲ್ಲಿ ಗೊಂದಲ ಮೂಡಿಸುವ ಪ್ರಯತ್ನ ನಡೆದಿದ್ದು, ಆದರೆ ಎಲ್ಲ ರೈತರ ಹಿತ ಕಾಯಲು ನಮ್ಮ ಸರ್ಕಾರ ಬದ್ಧವಾಗಿದ್ದು, ಯಾವುದೇ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಸ್ಪಷ್ಟಪಡಿಸಿದರು.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ವಿಧಾನಸಭೆಯಲಿ ಬುಧವಾರ ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದ ಗೊಂದಲಗಳಿಗೆ ಸರ್ಕಾರದ ಪರವಾಗಿ ಉತ್ತರ ನೀಡಿದರು.
ವಕ್ಫ್ ಆಸ್ತಿಗಳ ವಿಚಾರದಲ್ಲಿ ಜನರ ಮನಸ್ಸಿನಲ್ಲಿ ಗೊಂದಲ ಸೃಷ್ಟಿಸಿರುವುದರಿಂದ, ಸಾಮರಸ್ಯದಿಂದ ಬಾಳಲು ಸತ್ಯ ಯಾವುದು ಸುಳ್ಳು ಯಾವುದು ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕಿದೆ. ವಕ್ಫ್ ಕಾಯ್ದೆ 1913 ರಲ್ಲಿ ಬ್ರಿಟೀಷರು ಮಾಡಿದ್ದು, ನಂತರದಲ್ಲಿ ಮೈಸೂರು ಮಹಾರಾಜರ ಕಾಲದಲ್ಲಿಯೂ ಮಾಡಲಾಗಿತ್ತು. ಸ್ವಾತಂತ್ರ್ಯಯ ಪೂರ್ವದಲ್ಲಿಯೇ ವಕ್ಫ್ ಕಾಯ್ದೆಯನ್ನು ಮಾಡಲಾಗಿದೆ. ಸರ್ಕಾರದಲ್ಲಿ ಲಭ್ಯವಿರುವ ದಾಖಲೆಗಳಂತೆ ರಾಜ್ಯದಲ್ಲಿ 1.12 ಲಕ್ಷ ಎಕರೆ ವಕ್ಫ್ ಗೆ ಸೇರಿದ್ದು, ಆದರೆ 20,524 ಎಕರೆ ಮಾತ್ರ ವಕ್ಫ್ ಗೆ ಸಿಕ್ಕಿದೆ. ಇನ್ನೂ ಸುಮಾರು 90 ಸಾವಿರ ಎಕರೆಯಷ್ಟು ಪ್ರದೇಶ ವಕ್ಫ್ಗೆ ದೊರೆತಿಲ್ಲ. ಕಾರಣ ಆಗ ಪಹಣಿಯಲ್ಲಿ ವಕ್ಫ್ ಹೆಸರಿನಲ್ಲಿ ನಮೂದಾಗದೇ ಇದ್ದುದರಿಂದ ದಾನ ಕೊಟ್ಟವರ ಹೆಸರಿನವರಲ್ಲಿ ಅಥವಾ ಅವರ ಕುಟುಂಬದವರ ಹೆಸರಿನಲ್ಲಿಯೇ ಮುಂದುವರೆದಿದೆ. ಇನಾಮ್ ರಿಗ್ರಾಂಟ್‌ನಲ್ಲಿ, ಇನಾಮ್ ರಿಫಾರ್ಮ್ಸ್ ನಂತರವು ಸುಮಾರು 73 ಸಾವಿರ ಎಕರೆ ಬಹುತೇಕ ರೈತರ ವಶದಲ್ಲಿಯೇ ಇದೆ. ಆದಾಗ್ಯೂ ಈ ಎಲ್ಲ ರೈತರ ಹಿತಕಾಯಲು ಸರ್ಕಾರ ಬದ್ಧವಾಗಿದೆ. ಯಾವುದೇ ರೈತರಿಗೆ ಅನ್ಯಾಯವಾಗಲು ಸರ್ಕಾರ ಅವಕಾಶ ನೀಡುವುದಿಲ್ಲ. ರೈತರಿಗೆ ನೀಡಿರುವ ಎಲ್ಲ ನೋಟಿಸ್‌ಗಳನ್ನು ಈಗಾಗಲೆ ಸರ್ಕಾರ ಹಿಂಪಡೆದಿದ್ದು, ಇನ್ನೂ ಉಳಿದಿದ್ದರೆ, ಅವುಗಳನ್ನು ಕೂಡ ಹಿಂಪಡೆಯಲಾಗುವುದು ಎಂದು ಸ್ಪಷ್ಟನೆ ನೀಡಿದ ಸಚಿವ ಕೃಷ್ಣ ಭೈರೇಗೌಡ ಅವರು, ಒತ್ತುವಾರಿಯಾಗಿರುವ 19987 ಎಕರೆ ವಕ್ಫ್ ಭೂಮಿಯನ್ನು, ಅದೂ ಕೂಡ ಸರ್ಕಾರ ಈಗಾಗಲೆ ನೀಡಿರುವ ಖಬರಸ್ತಾನ್, ದರ್ಗಾ ಮಸೀದಿಗಳಿಗೆ ನೀಡಿರುವ ಭೂಮಿಯನ್ನು ಕೆಲವು ಖಾಸಗಿಯವರು ಒತ್ತುವರಿ ಮಾಡಿದ್ದಾರೆ, ಈ ಭೂಮಿಯನ್ನು ಮಾತ್ರ ವಕ್ಫ್ಗೆ ಹಸ್ತಾಂತರಿಸಲು ವಕ್ಫ್ ಮಂಡಳಿ ಕೇಳಿಕೊಂಡಿದೆ ಎಂದರು.
ರೈತರಿಗೆ ನೋಟಿಸ್ ನೀಡುವ ಪ್ರಕ್ರಿಯೆ ಈ ಹಿಂದಿನಿಂದಲೂ ನಡೆದುಬಂದಿರುವ ಪ್ರಕ್ರಿಯೆಯಾಗಿದ್ದು, ಈ ಹಿಂದಿನ ಸರ್ಕಾರದ ಕಾಲದಲ್ಲಿ 4500 ಆಸ್ತಿಗಳನ್ನು ವಕ್ಫ್ಗೆ ಖಾತೆ ಬದಲಾವಣೆ ಮಾಡಲಾಗಿದೆ. ಆದರೆ ನಮ್ಮ ಸರ್ಕಾರ ಬಂದ ಬಳಿಕ ಕೇವಲ 600 ಆಸ್ತಿಗಳನ್ನು ಮಾತ್ರ ವಕ್ಫ್ಗೆ ಖಾತೆ ಬದಲಾವಣೆ ಮಾಡಲಾಗಿದೆ. ವಕ್ಫ್ ಕಾಯ್ದೆ ಕೇಂದ್ರ ಸರ್ಕಾರ ಮಾಡಿದ್ದು, ರಾಜ್ಯ ಸರ್ಕಾರ ಮಾಡಿಲ್ಲ, ಆದಾಗ್ಯೂ ರೈತರಲ್ಲಿ ಸುಳ್ಳು ಸುದ್ದಿ ಹರಡಿ ರೈತರನ್ನು ಎತ್ತಿಕಟ್ಟುವ ಕಾರ್ಯ ಆಗುತ್ತಿದೆ ಎಂದು ಆರೋಪಿಸಿದರು.
2016 ರಲ್ಲಿ ಕೇಂದ್ರ ಸರ್ಕಾರ ಮಾಡೆಲ್ ವಕ್ಫ್ ರೂಲ್ಸ್ ಮಾಡಿ, ವಕ್ಫ್ ಆಸ್ತಿಗಳ ಒತ್ತುವರಿ ತೆರವುಗೊಳಿಸಿ ಸಂರಕ್ಷಿಸಲು ನಿರ್ದೇಶನ ಕೊಟ್ಟಿದೆ ಎಂದು ಸಚಿವರು ಹೇಳಿದರು.
ವಿರೋಧಪಕ್ಷ ವಕ್ಫ್ ಆಸ್ತಿ ವಿಚಾರಗಳಿಗೆ ಮಾಡಿರುವ ಪ್ರತಿಯೊಂದು ಪ್ರಕರಣಗಳಿಗೂ ಸ್ಪಷ್ಟನೆ ನೀಡಿದ ಕೃಷ್ಣ ಭೈರೇಗೌಡ ಅವರು, ಬಿಜಾಪುರ ಜಿಲ್ಲೆ ವನವಾಡದಲ್ಲಿ 1200 ಎಕರೆ ವಕ್ಫ್ ಆಸ್ತಿಯಾಗಿದೆ ಎಂದು ಸುಳ್ಳು ಸುದ್ದಿ ಹರಡಿ, ರೈತರ ನೆಮ್ಮದಿ ಕೆಡಿಸಿದರು, ಆದರೆ ವಾಸ್ತವವಾಗಿ ಕೇವಲ 11 ಎಕರೆಗೆ ಸಂಬಂಧಿಸಿದಂತೆ ಮಾತ್ರ ರೈತರಿಗೆ ನೋಟಿಸ್ ನೀಡಲಾಗಿತ್ತು. ಆಳಂದದಲ್ಲಿ 2020 ರಲ್ಲಿ ಇದ್ದ ಸರ್ಕಾರದ ಅವಧಿಯಲ್ಲಿ ವಕ್ಫ್ ಆಸ್ತಿ ಎಂದು ಆಗಿದ್ದ ಬೀರಲಿಂಗೇಶ್ವರ ದೇವಸ್ಥಾನವನ್ನು ನಮ್ಮ ಸರ್ಕಾರ ಬೀರಲಿಂಗೇಶ್ವರ ದೇವಸ್ಥಾನ ಎಂದು ಬದಲಿಸಿ, ಆಸ್ತಿ ಮಾಡಿಕೊಟ್ಟಿದ್ದೇವೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸರ್.ಎಂ. ವಿಶ್ವೇಶ್ವರಯ್ಯ ಅವರು ಓದಿದ ಶಾಲೆಯೂ ವಕ್ಫ್ ಆಸ್ತಿಯೆಂದು ಸುಳ್ಳು ಸುದ್ದಿ ಹರಡಿಸಿದ್ದು, 2019 ರಲ್ಲಿ ಇದ್ದ ಸರ್ಕಾರದ ಅವಧಿಯಲ್ಲಿ ಇಲ್ಲಿನ ಸಮೀಪದ ದರ್ಗಾ ವಕ್ಫ್ ಆಸ್ತಿಯಾಗಿತ್ತು. ಸಮೀಪದಲ್ಲಿಯೇ ಶಾಲೆ ಇದ್ದುದರಿಂದ ಒಂದೇ ಸವೇ ನಂ. ಬರುವುದರಿಂದ ಶಾಲೆಯನ್ನು ವಕ್ಫ್ ಆಸ್ತಿ ಎಂದು ಹೇಳಿದ್ದರು. ಆದರೆ ನಮ್ಮ ಸರ್ಕಾರ ಇದೇ ವರ್ಷದ ನವೆಂಬರ್ 08 ರಂದು ಉಪವಿಭಾಗಾಧಿಕಾರಿಗಳು ಆದೇಶ ಮಾಡಿ, ಶಾಲೆಗೆ ಸಂಬಂಧಿಸಿದ ಭೂಮಿಯನ್ನು ಶಾಲೆಯ ಖಾತೆಗೇ ಮಾಡಿಕೊಟ್ಟಿದೆ. ಶ್ರೀರಂಗಪಟ್ಟಣದಲ್ಲಿ ದೊಡ್ಡ ಹಾರೋಹಳ್ಳಿ ಗ್ರಾಮದಲ್ಲಿ 12 ಗುಂಟೆ ಜಮೀನಿನಲ್ಲಿ ಜಾಮಾ ಮಸೀದಿ ಇದೆ. ಆದರೆ ತಹಸಿಲ್ದಾರ್ ಅವರು ಮಾಡಿದ ಪ್ರಮಾದದಿಂದ ಅಂದರೆ ಕಣ್ತಪ್ಪಿನಿಂದ ಮಾಡಿದ ಲೋಪದಿಂದ ದೊಡ್ಡಹಾರೋಹಳ್ಳಿ ಬದಲಿಗೆ ಮಹದೇವಪುರ ಗ್ರಾಮದಲ್ಲಿ 06 ಗುಂಟೆ ಅಂತ ಮಾಡಿದ್ದಾರೆ. ಇಲ್ಲಿ ಚಿಕ್ಕಮ್ಮನಗುಡಿ ಇದೆ, ಆದರೆ ದೇವಸ್ಥಾನದ ಹೆಸರಿಗೆ ಯಾವುದೇ ಪಹಣಿ ದಾಖಲೆ ಇರಲಿಲ್ಲ. ಆದರೆ ನಮ್ಮ ಸರ್ಕಾರ ಪಹಣಿಯಲ್ಲಿ ಚಿಕ್ಕಮ್ಮನಗುಡಿ ಎಂದು ನಮೂದಿಸಿ, ದೇವಸ್ಥಾನದ ಹೆಸರಿಗೆ ಆಸ್ತಿ ಮಾಡಿಕೊಟ್ಟಿದ್ದೇವೆ. ಬಿಜಾಪುರ ಜಿಲ್ಲೆಯಲ್ಲಿ ಪಡಗಾನೂರು ಗ್ರಾಮದಲ್ಲಿ ಸೋಮೇಶ್ವರ ದೇವಸ್ಥಾನ ವಕ್ಫ್ ಆಸ್ತಿಯಾಗಿದೆ ಎಂದು ಸುಳ್ಳು ಸುದ್ದಿ ಹರಡಿಸಿದ್ದು, ಇಲ್ಲಿನ ಸರ್ವೆ ನಂ. 220 ರಲ್ಲಿ 57 ಎಕರೆ ಜಮೀನು ಇದೆ. ಆದರೆ ಇಲ್ಲಿ ವಕ್ಫ್ಗೆ ಇರುವುದು ಕೇವಲ 02 ಎಕರೆ ಮಾತ್ರ, ಉಳಿದ ಜಮೀನಿನಲ್ಲಿ 18 ರೈತರಿದ್ದಾರೆ. ಸೋಮೇಶ್ವರ ದೇವಸ್ಥಾನಕ್ಕೂ ವಕ್ಫ್ ಆಸ್ತಿಗೂ ಅಥವಾ ರೈತರ ಆಸ್ತಿಗೂ ಯಾವುದೇ ಒಂದಕ್ಕೊಂದು ಸಂಬಂಧವಿಲ್ಲ. ವಿಜಯಪುರದಲ್ಲಿ ಪೊಲೀಸ್ ಕ್ವಾಟ್ರಸ್ ಜಾಗ ವಕ್ಫ್ ಎಂದು ಪೊಲೀಸರನ್ನು ಎತ್ತಿಕಟ್ಟಿದರು, ಆದರೆ ಆ ಜಾಗದ ಮೇಲೆ ಯಾವುದೇ ದಾವೆಯೂ ಇಲ್ಲ, ಯಾರೂ ಕೂಡ ಈ ಜಾಗ ನಮ್ಮದು ಎಂದು ಕ್ಲೇಮ್ ಮಾಡಿಲ್ಲ. ಆದರೆ ಆ ಸ್ಥಳದಲ್ಲಿ ಸುಮಾರು 300 ವರ್ಷಗಳಷ್ಟು ಹಳೆಯದಾದ ಪಾರಂಪರಿಕ ಮಸೀದಿ ಇದೆ, ಅದನ್ನು ಸುಸ್ಥಿತಿಯಲ್ಲಿಡುವಂತೆ ಮಾತ್ರ ಕೋರಿಕೆ ಸಲ್ಲಿಸಲಾಗಿದೆ. ಬಿಜಾಪುರದಲ್ಲಿ ಜಿಲ್ಲಾಧಿಕಾರಿಗಳ ಮನೆ ವಕ್ಫ್ ಆಸ್ತಿ ಎಂದು ಸುದ್ದಿ ಹರಡಿಸಿದರು, ಆದರೆ ಬಿಜಾಪುರದಲ್ಲಿನ ಜಿಲ್ಲಾಧಿಕಾರಿಗಳ ವಸತಿ ಗೃಹ 400 ವರ್ಷ ಹಳೆಯ ಕಟ್ಟಡವಾಗಿದ್ದು, ಆದಿಲ್‌ಶಾಹಿ ವಂಶಸ್ಥರು ನಿರ್ಮಿಸಿದ್ದು, ಎಲ್ಲೂ ಕೂಡ ಇದು ವಕ್ಫ್ ಆಸ್ತಿ ಎಂದು ನಮೂದಾಗಿಲ್ಲ ಎಂದು ಕಂದಾಯ ಸಚಿವರು ಸ್ಪಷ್ಟನೆ ನೀಡಿದರು.
ನಮ್ಮ ಸರ್ಕಾರ ಕೇವಲ ವಕ್ಫ್ ಆಸ್ತಿ ಸಂರಕ್ಷಣೆಗೆ ಮಾತ್ರ ಕ್ರಮ ಕೈಗೊಂಡಿಲ್ಲ, ಮುಜರಾಯಿ ಇಲಾಖೆಗೆ ಸಂಬಂಧಿಸಿದ ಆಶ್ತಿಗಳನ್ನು ಕೂಡ ಸಂರಕ್ಷಣೆಗೆ ಕ್ರಮ ಕೈಗೊಂಡಿದೆ. 2023 ರಲ್ಲಿ ನಮ್ಮ ಸರ್ಕಾರ 5402 ಎಕರೆ ಭೂಮಿಯನ್ನು ಮುಜರಾಯಿ ದೇವಸ್ಥಾನಗಳಿಗೆ ಖಾತೆ ಮಾಡಿಕೊಟ್ಟಿದ್ದರೆ, ವಕ್ಫ್ಗೆ ಸಂಬಂಧಿಸಿದಂತೆ 600 ಎಕರೆ ಮಾತ್ರ ಖಾತೆ ಮಾಡಿಕೊಡಲಾಗಿದೆ. ಈ ವರ್ಷ 5287 ಎಕರೆ ಹಿಂದೂ ದೇವಸ್ಥಾನಗಳಿಗೆ ಖಾತೆ ಮಾಡಿ, ದೇವಸ್ಥಾನಗಳ ಜಾಗವನ್ನು ಸಂರಕ್ಷಣೆ ಮಾಡಿದ್ದೇವೆ ಎಂದು ಕಂದಾಯ ಸಚಿವರು ಹೇಳಿದರು.

Advertisement

Spread the love

LEAVE A REPLY

Please enter your comment!
Please enter your name here