ವಿಜಯಸಾಕ್ಷಿ ಸುದ್ದಿ, ಹೊಸಪೇಟೆ : 2014ರಲ್ಲಿ ದೇಶದಲ್ಲಿಯ ಬಡವರ ಕಲ್ಯಾಣ, 2022ರ ವೇಳೆಗೆ ಪ್ರತಿ ಕುಟುಂಬಕ್ಕೆ ಪಕ್ಕಾ ಮನೆ ಮತ್ತು ಕಡಿಮೆ ವೆಚ್ಚದಲ್ಲಿ ವಸತಿ ಕಾರ್ಯಕ್ರಮ ಇತ್ಯಾದಿ ನೂರಾರು ಭರವಸೆಗಳನ್ನು ನೀಡುವ ಮೂಲಕ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಎನ್.ಡಿ.ಎ ನೇತೃತ್ವದ ಸರ್ಕಾರ ಕಳೆದ ೧೦ ವರ್ಷಗಳಿಂದ ಜನಪರವಾದ ಯೋಜನೆಗಳನ್ನು ಜಾರಿಗೆ ತರದೇ ಕೇವಲ ಕಾರ್ಪೋರೇಟ್ ಕಂಪನಿಗಳ ಕೈಗೊಂಬೆಯಾಗಿ ಜನವಿರೋಧಿ ಆಡಳಿತವನ್ನು ನಡೆಸುತ್ತಿದೆ ಎಂದು ಸ್ಲಂ ಜನಾಂದೋಲನ-ಕರ್ನಾಟಕ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಆಕ್ರೋಶ ವ್ಯಕ್ತ ಪಡಿಸಿದರು.
ಅವರು ಸ್ಲಂ ಜನಾಂದೋಲನ-ಕರ್ನಾಟಕ ಸಂಘಟನೆಯಿಂದ ವಿಜಯನಗರದ (ಹೊಸಪೇಟೆ)ಯ ಹುಲಗಿಯಲ್ಲಿ ಹಮ್ಮಿಕೊಂಡಿದ್ದ ಪ್ರಸಕ್ತ ವಿದ್ಯಾಮಾನಗಳ ಕುರಿತ ವಿಭಾಗ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
2014 ಹಾಗೂ 2019ರಲ್ಲಿ ನಡೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ತಮ್ಮ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ ಕೇಂದ್ರ ಸರ್ಕಾರ ಈಗ ಜನರಿಗೆ ನೀಡಿರುವ ಭರವಸೆಗಳನ್ನು ಮರೆತು ಜನವಿರೋಧಿ ಯೋಜನೆಗಳು ಜಾರಿಗೆ ತರುತ್ತಿದೆ. ವಸತಿ, ಆರೋಗ್ಯ, ಆಹಾರ, ಶಿಕ್ಷಣವನ್ನು ಉಚಿತವಾಗಿ ನೀಡಬೇಕಾಗಿರುವ ಸರ್ಕಾರ ಈ ಸೇವೆಗಳನ್ನು ಖಾಸಗೀಕರಣಗೊಳಿಸಿ ಬಡವರನ್ನು ವಂಚಿಸುತ್ತಿದೆ ಎಂದು ಆರೋಪಿಸಿದರು.
ಡಾವಣಗೇರಿ ಜಿಲ್ಲಾ ಸಂಚಾಲಕಿ ರೇಣುಕಾ ಯಲ್ಲಮ್ಮ, ಹೊಸಪೇಟೆ ಸಂಚಾಲಕಿ ವೆಂಕಮ್ಮ, ಬಳ್ಳಾರಿ ಜಿಲ್ಲಾ ಸಂಚಾಲಕ ಶೇಖರಬಾಬು, ಗದಗ ಜಿಲ್ಲಾ ಸ್ಲಂ ಸಮಿತಿ ಉಪಾಧ್ಯಕ್ಷ ರವಿಕುಮಾರ ಬೆಳಮಕರ, ಕಾರ್ಯದರ್ಶಿ ಅಶೋಕ ಕುಸಬಿ, ಹುಬ್ಬಳ್ಳಿ ಜಿಲ್ಲಾ ಸಂಚಾಲಕಿ ಶೋಭಾ ಕಮತರ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಗದಗ ಜಿಲ್ಲಾ ಸ್ಲಂ ಸಮಿತಿ ಮುಖಂಡರಾದ ಪರವೀನಬಾನು ಹವಾಲ್ದಾರ, ಇಬ್ರಾಹಿಂ ಮುಲ್ಲಾ, ಮೆಹರುನಿಸಾ ಢಾಲಾಯತ, ಖಾಜಾಸಾಬ ಇಸ್ಮಾಯಿಲನವರ, ಬಾಷಾಸಾಬ ಡಂಬಳ, ಮಕ್ತುಮಸಾಬ ಮುಲ್ಲಾನವರ, ನಜಮುನಿಸಾ ಮುರಗೋಡ ಸೇರಿದಂತೆ ನೂರಾರು ಸ್ಲಂ ನಿವಾಸಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ವೆಂಕಮ್ಮ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.