ಗದಗ:- ಕರ್ನಾಟಕದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಹಾವಳಿಯನ್ನು ತಡೆಗಟ್ಟುವ ರಾಜ್ಯ ಸರ್ಕಾರದ ಸುಗ್ರೀವಾಜ್ಞೆಗೆ ಅಂಕಿತ ಹಾಕದೆ ಹಲವು ಸ್ಪಷ್ಟನೆ ಕೇಳಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಾಪಸ್ ಕಳುಹಿಸಿದ್ದಾರೆ.
ಇದೇ ವಿಚಾರವಾಗಿ ಕಾನೂನು ಸಚಿವ ಹೆಚ್ ಕೆ ಪಾಟೀಲ್ ಅವರು, ಗದಗದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ನಾವು ಕಳುಹಿಸಿದ ಸುಗ್ರೀವಾಜ್ಞೆ ಪ್ರಸ್ತಾವನೆಯನ್ನು ತಮ್ಮ ಕೆಲವು ಅವಲೋಕನಗಳಿಂದ ರಾಜ್ಯಪಾಲರು ವಾಪಾಸ್ ಕಳುಹಿಸಿದ್ದಾರೆ. ಇದಕ್ಕೆ ಅವರಿಗೆ ತಪ್ಪು ಗ್ರಹಿಕೆ ಹಾಗೂ ಮಾಹಿತಿ ಕೊರತೆ ಇರಬಹುದು ಎಂದಿದ್ದಾರೆ.
ಫೈನಾನ್ಸ್ ನವರು 3 ಲಕ್ಷ ರೂ ಕೊಡಲು ಇರುತ್ತದೆ. 5 ಲಕ್ಷ ರೂ ವರೆಗೆ ದಂಡ ಹೇಗೆ ಹಾಕುತ್ತೀರಿ ಅಂತ ರಾಜ್ಯಪಾಲರು ಕೇಳಿದ್ದಾರೆ. ಸಾಲ ಎಷ್ಟು ಕೊಟ್ಟಿದ್ದೀರಿ ಎಂಬುದು ಮುಖ್ಯವಲ್ಲ. ಸಾಲಗಾರರ ಮೇಲೆ ಹಿಂಸೆ ಎಷ್ಟು ಆಗಿದೆ, ಎಷ್ಟು ಒತ್ತಡ ಆಗಿದೆ ಎಂಬುದು ದಂಡವೆ ಹೊರತು, ಸಾಲದ ಪ್ರಮಾಣದ ಮೇಲೆ ದಂಡ ಹಾಕುವುದು ಇರುವುದಿಲ್ಲ. ಶಿಕ್ಷೆ ಪ್ರಮಾಣ ಹೆಚ್ಚು ಇದೆ. ಆತ್ಮಹತ್ಯೆ ನಡೆಯುವುದು, ಸಾಯುವಂತೆ ಹೊಡೆಯುವುದು, ಕುಟುಂಬವೇ ನಾಶ ಆಗುವಂತಹದ್ದನ್ನು ನಾವೆಲ್ಲಾ ಗಮನಿಸಿದ್ದೇವೆ. ಯಾರು ನೊಂದಣಿ ಇಲ್ಲದೆ ಮನಬಂದಂತೆ ಸಾಲ ಕೊಟ್ಟು, ಹಿಂಸಾತ್ಮಕ ವಸೂಲಿ ಮಾಡುವುದುನ್ನು ಮೂಲಭೂತ ಹಕ್ಕು ಅನ್ನಲು ಸಾಧ್ಯನಾ..?, 6 ಅಂಶಗಳ ಬಗ್ಗೆ ನಾನು ರಾಜ್ಯ ಪಾಲರಿಗೆ ತಕ್ಷಣ ಕಡತಗಳನ್ನು ನಮ್ಮ ವಿವರಣೆಯೊಂದಿಗೆ ಕಳುಹಿಸುತ್ತೇನೆ ಎಂದರು.
ರಾಜ್ಯಪಾಲರು ರಾಜ್ಯ ಸರ್ಕಾರದ ವಿರುದ್ಧ ದ್ವೇಷ ರಾಜಕಾರಣ ಮಾಡುತ್ತಿದ್ದಾರಾ ಎಂಬ ಆರೋಪ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ದ್ವೇಷದ ಟಿಪ್ಪಣಿ ಮಾಡಲ್ಲ. ಸಮಾಜದ ಹಿತವಾಗಿರುವ ಸುಗ್ರೀವಾಜ್ಞೆ, ಸದನ ಕೂಡಿದಾಗ ಮಾತನಾಡಿ ಅಂದಿದ್ದಾರೆ. ದಿನವೂ ಎರಡು, ಮೂರು ಆತ್ಮಹತ್ಯೆ ನೋಡಿಕೊಂಡು ಕೂರಲು ಆಗಲ್ಲ. ಆ ಕಾರಣಕ್ಕಾಗಿ ಸುಗ್ರೀವಾಜ್ಞೆ ತರಲು ಸಾಕಷ್ಟು ಚಿಂತನೆ ಮಾಡಿ ಈ ಹೆಜ್ಜೆ ಇಟ್ಟಿದ್ದೇವೆ ಎಂದರು.
ಇನ್ನೂ ಸರ್ಕಾರ v/s ರಾಜ್ಯಪಾಲರು ವಿಚಾರವಾಗಿ ಮಾತನಾಡಿ, ಸಹಜವಾಗಿ ನಮ್ಮ ಸುಗ್ರಿವಾಜ್ಞೆ ಬಗ್ಗೆ ಅವ್ರು ತಮ್ಮ ಆಕ್ಷೇಪ ಎತ್ತಿದ್ದಾರೆ. ರಾಜ್ಯಪಾಲರ ಆಕ್ಷೇಪಣೆಗೆ ಸಮಂಜಸ ಉತ್ತರ ಕೊಡ್ತೀವಿ ಸಂವಿಧಾನಾತ್ಮಕವಾಗಿ ಏನ್ ಮಾಡಬೇಕು ಅದರ ವ್ಯಾಪ್ತಿಯಲ್ಲಿ ಸುಗ್ರಿವಾಜ್ಞೆ ಮಾಡ್ತೀವಿ ಎಂದರು.
ಇದೇ ವೇಳೆ ದೆಹಲಿ ಚುನಾವಣೆ ಫಲಿತಾಂಶ ವಿಚಾರವಾಗಿ ಮಾತನಾಡಿ, ಈ ಬಗ್ಗೆ ‘ಆಪ್’ ಆತ್ಮಾವಲೋಕನ ಮಾಡಿಕೊಳ್ಳಬೇಕು. ಜನರ ನಿರೀಕ್ಷೆಯಿಂದಾಗಿ ಆಮ್ ಆದ್ಮಿ ಪಾರ್ಟಿ ಮೇಲೆ ಬಂದಿತ್ತು. ಅವರ ನೀತಿ, ಭರವಸೆಗಳಿಗೆ ಬಹಳಷ್ಟು ಜನರ ಆಕರ್ಷಣೆ ಇತ್ತು. ಜನಾದೇಶ ನೋಡಿದರೆ ಮತ್ತೆ ನಾವು ಮರುಪರಿಶೀಲನೆ ಮಾಡ್ಬೇಕು. ಒಟ್ಟು ಪೂರ್ಣ ಫಲಿತಾಂಶ ಬಂದ ಮೇಲೆ ವಿಶ್ಲೇಷಣೆ ಮಾಡಬಹುದು ಎಂದರು.
ಮಹಾರಾಷ್ಟ್ರ ಚುನಾವಣೆಯಲ್ಲಿ ಅಕ್ರಮ ನಡೆದಿದೆ. ವಯಸ್ಕರಿಗಿಂತ ಮತದಾರರು ಹೆಚ್ಚಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪ ಕುರಿತು ಮಾತನಾಡಿ, ರಾಹುಲ್ ಗಾಂಧಿ ಅವರು ಎತ್ತಿರುವ ವಿಷಯ ಪ್ರಮುಖವಾದದ್ದು. ರಾಷ್ಟ್ರೀಯ ವಿಷಯವಾಗಿ ಈ ವಿಷಯ ತೆಗೆದುಕೊಳ್ಳಬೇಕಿದೆ. ಎಲ್ಲಾ ಪಕ್ಷಗಳು ಚುನಾವಣೆ ಸಂದರ್ಭದಲ್ಲಿ ಆದ ಲೋಪಗಳು ಮಾತ್ರವಲ್ಲ, ಮ್ಯಾನುಪ್ಲೇಷನ್ ಬಗ್ಗೆ ಗಂಭೀರವಾಗಿ ಹೋರಾಟ ಮಾಡುವ ಸನ್ನಿವೇಶ ಇದಾಗಿದೆ ಎಂದರು.
ಅಕ್ರಮ ವಲಸಿಗರನ್ನ ಅಮೇರಿಕಾ ಗಡಿಪಾರು ಮಾಡುತ್ತಿರುವ ವಿಷಯ ಕುರಿತು ಮಾತನಾಡಿ. ಟ್ರಂಪ್ ಅವರು ಸುಸಂಸ್ಕೃತರಾಗಿ ನಡೆದುಕೊಳ್ಳಬೇಕು. ಸುಸಂಸ್ಕೃತ ಸಮುದಾಯ ಅಂತಾ ಕರೆಸಿಕೊಳ್ಳುವ ಅಮೇರಿಕಾ ಭಾರತೀಯರನ್ನ ಈ ರೀತಿ ನಡೆಸಿಕೊಂಡಿದ್ದು ದುರ್ದೈವ. ಅಮೇರಿಕಾ ಇಷ್ಟೊಂದು ಬೆಳೆಯಲು ಭಾರತೀಯರ ಕೊಡುಗೆ ಅಮೂಲ್ಯ. ಇದನ್ನ ಅರ್ಥಮಾಡಿಕೊಂಡು ಟ್ರಂಪ್ ಸುಸಂಸ್ಕೃತರಾಗಿ ನಡೆದುಕೊಳ್ಳಲಿ ಎಂದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ್ ಬಬರ್ಚಿ, ಮುಖಂಡ ಸಿದ್ದು ಪಾಟೀಲ ಸೇರಿದಂತೆ ಅನೇಕರಿದ್ದರು.