ಬೆಂಗಳೂರು:- ರೈತರಿಗೆ ದೇಶಿ ತಳಿ ಕುರಿಗಳನ್ನ ಉಚಿತವಾಗಿ ಸರ್ಕಾರ ನೀಡ್ಬೇಕು ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಮಾತನಾಡಿದ ಅವರು, ದೇಶಿಯ ಕುರಿ ತಳಿ ಸಂರಕ್ಷಣೆ ಮಾಡಲು ರೈತರಿಗೆ ಉಚಿತವಾಗಿ ದೇಶಿ ತಳಿ ಕುರಿಗಳನ್ನ ಸರ್ಕಾರ ನೀಡಬೇಕು ಎಂದು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಸರ್ಕಾರಕ್ಕೆ ಆಗ್ರಹಿಸಿದರು.
ಕರ್ನಾಟಕದಲ್ಲಿ ಹಲವಾರು ದೇಶಿಯ ಕುರಿ ತಳಿಗಳು ವಿನಾಶದ ಅಂಚಿನಲ್ಲಿವೆ. ದೇಶಿ ಕುರಿ ತಳಿಗಳ ಸಂರಕ್ಷಣೆಗೆ ಸಾಕಷ್ಟು ಮೂಲಭೂತ ಸೌಕರ್ಯಗಳು ಮತ್ತು ಕುರಿಗಾಹಿಗಳಿಗೆ ಸಹಾಯ ಧನದ ಅವಶ್ಯಕತೆ ಇದೆ. ಇದಕ್ಕಾಗಿ 5 ಕೋಟಿ ರೂ. ವಿಶೇಷ ಅನುದಾನ ಕೊಡಬೇಕು. ಅಲ್ಲದೆ ಉಚಿತವಾಗಿ ರೈತರಿಗೆ ದೇಶಿ ತಳಿ ಕೊಡಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಸಚಿವ ವೆಂಕಟೇಶ ಉತ್ತರ ನೀಡಿ, ರಾಜ್ಯದಲ್ಲಿ ವಿನಾಶದ ಅಂಚಿನಲ್ಲಿ ಇರುವ ದೇಶಿಯ ಕುರಿ ತಳಿ ಸಂರಕ್ಷಣೆಗಾಗಿ 5 ಕಡೆ ಕುರಿ/ಮೇಕೆ ತಳಿ ಸಂವರ್ಧನಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈಗಾಗಲೇ ರೈತರಿಗೆ ರಿಯಾಯಿತಿ ದರದಲ್ಲಿ ಮೇಕೆ, ಕುರಿ ತಳಿಗಳನ್ನು ಕೊಡಲಾಗುತ್ತಿದೆ. ವಿಶೇಷ ಅನುದಾನ ನೀಡುವ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿ ಕ್ರಮ ತೆಗೆದುಕೊಳ್ಳುವ ಭರವಸೆ ಕೊಟ್ಟಿದ್ದಾರೆ.