ಚಿಕ್ಕಮಗಳೂರು:- ಪ್ರವಾಸಿ ತಾಣಗಳಲ್ಲಿ ನಕಲಿ ಆನ್ಲೈನ್ ಟಿಕೆಟ್ ಮುದ್ರಿಸಿ ಸರ್ಕಾರಕ್ಕೇ ಟೋಪಿ ಹಾಕುತ್ತಿರುವ ಆರೋಪದ ಮೇಲೆ ಕಳಸ ಡಿಆರ್ಎಫ್ಒ ಅಮಾನತು ಮಾಡಲಾಗಿದೆ.
ಈ ಬಗ್ಗೆ ಕೊಪ್ಪ ಡಿಎಫ್ಒ ಉಪೇಂದ್ರ ಪ್ರತಾಪ್ ಸಿಂಗ್ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯ ಕಳಸ ತಾಲೂಕು ಡಿಆರ್ಎಫ್ಒ ಆಗಿ ಕರ್ತವ್ಯದಲ್ಲಿದ್ದ ಚಂದನ್ ಗೌಡ. ಇದೇ ವ್ಯಾಪ್ತಿಯಲ್ಲಿ ರಾಣಿಝರಿ ಜಲಪಾತ, ಬಂಡಾಜೆ ಫಾಲ್ಸ್ ಗೆ ದಿನನಿತ್ಯ ಸಾವಿರಾರು ಜನ ಪ್ರವಾಸಿಗರು ಬರುತ್ತಾರೆ.
ಪ್ರವಾಸಿಗರಿಗಾಗಿ ಸರ್ಕಾರ ಆನ್ಲೈನ್ ಟಿಕೆಟ್ ವ್ಯವಸ್ಥೆಯೂ ಮಾಡಿದೆ. ಆದರೆ ಇದನ್ನೇ ಬಂಡಾವಳ ಮಾಡಿಕೊಂಡು ಟಿಕೆಟ್ ನಲ್ಲಿ ಗೋಲ್ ಮಾಲ್ ಮಾಡಿ ಸರ್ಕಾರಕ್ಕೆ ಸೇರಬೇಕಿದ್ದ ಸಾವಿರಾರು ಹಣ ಪ್ರಿಯತಮೆಯ ಖಾತೆಗೆ ಜಮೆ ಮಾಡಿದ ಆರೋಪ ಕೇಳಿಬಂದಿದೆ.
ಈತ ಆನ್ಲೈನ್ ಟಿಕೆಟ್ ಫೋರ್ಜರಿ ಮಾಡಿ ಸರ್ಕಾರಕ್ಕೆ ಮೋಸ ಮಾಡಿದ್ದಾರೆ ಎನ್ನಲಾಗುತ್ತಿದೆ. ಸದ್ಯಕ್ಕೆ 9000 ಹಣವನ್ನ ಮೋಸ ಮಾಡಿರುವುದು ಸಾಬೀತಾಗಿದೆ. ಇನ್ನೂ ಇಲಾಖೆಯ ಲಕ್ಷಗಟ್ಟಲೇ ಹಣ ಮೋನಿಕಾ ಎಂಬ ಯುವತಿ ಖಾತೆಗೆ ಜಮಾವಾಗಿರೋ ಅನುಮಾನ ವ್ಯಕ್ತವಾಗಿದೆ.
ಬಂಡಾಜೆ ಫಾಲ್ಸ್ ಬಳಿ 200ಕ್ಕೂ ಅಧಿಕ ಜನರಿಗೆ ಟಿಕೆಟ್ ಇಲ್ಲದೆ ಪಾಲ್ಸ್ಗೆ ಅವಕಾಶ ನೀಡಿ ಹಣ ಲಪಟಾಯಿಸಿರುವುದು ಬೆಳಕಿಗೆ ಬಂದಿದೆ. ಚೆಕ್ ಮಾಡಲು ಹೋಗಿದ್ದ ಪೊಲೀಸರು ಪ್ರವಾಸಿಗರ ಬಳಿ ಇದ್ದ ನಕಲಿ ಟಿಕೆಟ್ ಸೀಜ್ ಮಾಡಿದ್ದಾರೆ.
ಜೊತೆಗೆ ಜೂನ್ ತಿಂಗಳ ಆನ್ಲೈನ್ ಟಿಕೆಟ್ ಬುಕ್ಕಿಂಗ್ಗೂ, ಪ್ರವಾಸಿಗರ ನೋಂದಣಿ ಪುಸ್ತಕಕ್ಕೂ ಸಂಬಂಧವೇ ಇಲ್ಲ. ಒಂದಕ್ಕೊಂದು ಹೊಂದಾಣಿಕೆ ಆಗದ ಬೆನ್ನಲ್ಲೆ ಅನುಮಾನ ಬಂದು ಪೊಲೀಸರು ಪ್ರವಾಸಿಗರ ತಾಣಕ್ಕೆ ಪರಿಶೀಲನೆಗೆಂದು ಭೇಟಿ ನೀಡಿದ್ದರು.
ಆ ವೇಳೆ ಪ್ರವಾಸಿಗರ ಬಳಿ ಇದ್ದ ಟಿಕೆಟ್ ಹಾಗೂ ಆನ್ಲೈನ್ ಟಿಕೆಟ್ಗೂ ಹೊಂದಾಣಿಕೆಯಾಗಿಲ್ಲ. ಜೊತೆಗೆ ಆನ್ಲೈನ್ ಟಿಕೆಟ್ ಬುಕ್ಕಿಂಗ್ ಆಗದೇ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಂಡಾಜೆ ಫಾಲ್ಸ್ ಗೆ ಭೇಟಿ ನೀಡಿರುವುದು ಕಂಡು ಬಂದಿದೆ. ಪ್ರವಾಸಿಗರ ನೋಂದಣಿ ಪುಸ್ತಕದಲ್ಲಿ ಮಾತ್ರ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿರುವುದು ಗೊತ್ತಾಗಿದೆ.
ಚಂದನ್ ಗೌಡ ನಕಲಿ ಆನ್ಲೈನ್ ಟಿಕೆಟ್ ಮುದ್ರಿಸಿ ಪ್ರವಾಸಿಗರಿಗೆ ಪ್ರವಾಸಿ ತಾಣಕ್ಕೆ ಆಗಮಿಸಲು ಅವಕಾಶ ನೀಡಿದ್ದಾನೆ ಎಂದು ತಿಳಿದು ಬಂದಿದೆ. ಇದರಿಂದ ಬಂದ ಹಣವನ್ನು ಚಂದನ್ ಗೌಡ ತನ್ನ ಪ್ರೇಯಸಿ ಖಾತೆಗೆ ಜಮಾ ಮಾಡಿಸಿದ್ದಾನೆಂದು ತಿಳಿದು ಬಂದಿದೆ. ಹೀಗೆ ಸರ್ಕಾರಕ್ಕೆ ಚಂದನ್ ಗೌಡ ಹೆಚ್ಚಿನ ಹಣವನ್ನು ಮೋಸ ಮಾಡಿರೋ ಬಗ್ಗೆ ಇಲಾಖೆಗೆ ಅನುಮಾನ ಬಂದಿದೆ.
ಪ್ರವಾಸಿಗರ ಬಳಿ ವಿಚಾರಿಸಿದಾಗ ನಕಲಿ ಟಿಕೆಟ್ ಮಾರಾಟ ದಂಧೆ ವಿಚಾರ ಬಯಲಾಗಿದೆ. ಇದರಿಂದ ಕಳಸ ಡಿ.ಆರ್.ಎಫ್.ಓ. ಚಂದನ್ ಗೌಡ ಅಮಾನತು ಮಾಡಲಾಗಿದೆ.