ವೃಕ್ಷಮಾತೆ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ಅವರ ಜೀವನವನ್ನು ತೆರೆಮೇಲೆ ತರಲು ತಯಾರಿ ನಡೆಯುತ್ತಿದೆ. ಇದಕ್ಕೆ ಸಾಲು ಮರದ ತಿಮ್ಮಕ್ಕ ಅವರು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಆದರೆ ಈ ಸಿನಿಮಾ ಮಾಡಲು ಸ್ವತಃ ಅವರ ಮೊಮ್ಮಗನೇ ಅಡ್ಡಿ ಮಾಡ್ತಿದ್ದಾರೆ ಎಂದು ಚಿತ್ರತಂಡ ಆರೋಪಿಸಿದೆ.
‘ಒರಟ ಐ ಲವ್ ಯು” ಸಿನಿಮಾ ನಿರ್ದೇಶಿಸಿದ್ದ ಒರಟ ಶ್ರೀ ಅವರು ಸಾಲು ಮರದ ತಿಮ್ಮಕ್ಕ ಹೆಸರಿನಲ್ಲಿ ಸಾಲು ಮರದ ತಿಮ್ಮಕ್ಕ ಅವರ ಜೀವನವನ್ನು ತೆರೆಮೇಲೆ ತರಲು ಮುಂದಾಗಿದ್ದಾರೆ, ಈ ಸಿನಿಮಾದ ಶೂಟಿಂಗ್ ಇತ್ತೀಚೆಗಷ್ಟೆ ಮಾಗಡಿ ಸಮೀಪದ ಕುದೂರಿನ ಬಳಿ ನಡೆಯುತ್ತಿತ್ತು. ಆದರೆ ಚಿತ್ರೀಕರಣದ ಸ್ಥಳಕ್ಕೆ ಬಂದ ಪೊಲೀಸರು ಸಿನಿಮಾದ ಚಿತ್ರೀಕರಣ ನಿಲ್ಲಿಸುವಂತೆ ಸೂಚಿಸಿದ್ದಾರೆ. ಜೊತೆಗೆ ಚಿತ್ರತಂಡದ ಕೆಲವೊಂದಷ್ಟು ಜನರನ್ನು ಪೊಲೀಸರು ಸ್ಟೇಷನ್ ಗೆ ಕರೆದುಕೊಂಡು ಹೋಗಿ ಕೂರಿಸಿಕೊಂಡರು ಎಂದು ಚಿತ್ರತಂಡ ಆರೋಪಿಸಿದೆ.
ತಿಮ್ಮಕ್ಕ ಅವರ ಜೀವನವನ್ನು ತೆರೆ ಮೇಲೆ ತರಲು ಸಾಲು ಮರದ ತಿಮ್ಮಕ್ಕ ಅವರ ಸಾಕು ಮೊಮ್ಮಗ ಉಮೇಶ್ ಅವರಿಂದ ಅನುಮತಿ ಪಡೆದಿಲ್ಲ ಎಂಬ ಕಾರಣಕ್ಕೆ ಪೊಲೀಸರು ಸಿನಿಮಾ ಚಿತ್ರೀಕರಣಕ್ಕೆ ತಡೆ ಒಡ್ಡಿದ್ದಾರೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಸಿನಿಮಾದ ಘೋಷಣೆ ಆದಾಗಿನಿಂದಲೂ ಸಾಲು ಮರದ ತಿಮ್ಮಕ್ಮ ಅವರ ಸಾಕು ಮೊಮ್ಮಗ ಉಮೇಶ್ ಹಾಗೂ ಚಿತ್ರತಂಡದ ನಡುವೆ ಘರ್ಷಣೆ ಇದೆ ಎನ್ನಲಾಗುತ್ತಿದೆ.