ವಿಜಯಸಾಕ್ಷಿ ಸುದ್ದಿ, ಡಂಬಳ: ಮುಂಡರಗಿ ಮತ್ತು ಡಂಬಳ ಹೋಬಳಿಯ ಗ್ರಾಮಗಳಲ್ಲಿ ಎಸ್ಬಿಐ ಫೌಂಡೇಶನ್ ಸಂಕಲ್ಪ ಸಂಸ್ಥೆಯ ಸಹಕಾರದಿಂದ ರೈತ ಬದು ಯೋಜನೆಯಡಿ ಕೃಷಿ ಹೊಂಡಗಳು ಮತ್ತು ಬದುಗಳನ್ನು ನಿರ್ಮಿಸಲಾಗುತ್ತಿದೆ. ಈ ಯೋಜನೆಗೆ ಎಸ್ಬಿಐ ಫೌಂಡೇಶನ್ ಒಂದು ಎಕ್ಸಾವೇಟರ್ ಒದಗಿಸಿದ್ದು, ರೈತರ ಭೂಮಿಯಲ್ಲಿ ನೀರು ಸಂರಕ್ಷಣೆ ಮತ್ತು ಕೃಷಿ ಅಭಿವೃದ್ಧಿಗೆ ಕೈಜೋಡಿಸಿದೆ.
2022ರ ಮಾರ್ಚ್ 13ರಂದು ಜಾರಿಗೆ ಬಂದು, 22 ಮಾರ್ಚ್ 2023 ವಿಶ್ವ ಜಲ ದಿನದಂದು ಉದ್ಘಾಟನೆಯಾಗಿದೆ. ಈ ಅವಧಿಯಲ್ಲಿ ಒಟ್ಟು 36 ಕೃಷಿ ಹೊಂಡಗಳು ಮತ್ತು 148 ಬದುಗಳ ನಿರ್ಮಾಣ ಮಾಡಲಾಗಿದ್ದು, 132 ರೈತರು ಇದರ ಲಾಭ ಪಡೆಯುತ್ತಿದ್ದಾರೆ. ಇದರಿಂದ 713 ಎಕರೆ ಕೃಷಿ ಭೂಮಿಯಲ್ಲಿ 11.40 ಲಕ್ಷ ಲೀಟರ್ ನೀರಿನ ಅಂತರ್ಜಲ ಮಟ್ಟ ಹೆಚ್ಚಳ ಕಂಡು ಬಂದಿದೆ. ಇದರ ಜೊತೆಗೆ 2 ಇಂಚು ಮಣ್ಣಿನ ಸವಕಳಿ ತಡೆಗಟ್ಟಿ ಫಲವತ್ತಾದ ಬೆಳೆಯನ್ನು ಬೆಳೆಸಲು ನೆರವಾಗಿದೆ. ಈ ವರ್ಷದಲ್ಲಿ ಮುಂಡರಗಿ ತಾಲೂಕಿನಲ್ಲಿ 200 ಕೆರೆಗಳ ನಿರ್ಮಾಣದ ಸಂಕಲ್ಪವನ್ನು ಮಾಡಲಾಗಿದೆ.
ರೈತ ಬಂಧು ಯೋಜನೆಯಲ್ಲಿನ ಎಲ್ಲ ಕಾರ್ಯಗಳು ಇತರರಿಗೆ ಸ್ಪೂರ್ತಿ ನೀಡುವಂತಿದ್ದು, ಇದು ಯಾರೊಂದಿಗೂ ಸ್ಪರ್ಧೆಯಲ್ಲ. ಇದು ಜಲ ಸಂರಕ್ಷಣೆ ಕಾರ್ಯದಲ್ಲಿ ಒಂದು ಮಹತ್ವದ ಹಂತವಾಗಿದೆ. ಎಸ್ಬಿಐ ಫೌಂಡೇಶನ್ ತನ್ನ ಸಿಎಸ್ಆರ್ ಯೋಜನೆಯಡಿ ಮುಂಬರುವ ವರ್ಷದಲ್ಲಿ, ಗದಗ ಜಿಲ್ಲೆಯ ಶಿರಹಟ್ಟಿ, ಲಕ್ಷ್ಮೇಶ್ವರ ಮತ್ತು ಗದಗ ತಾಲೂಕುಗಳ 25ಕ್ಕಿಂತ ಹೆಚ್ಚು ಹಳ್ಳಿಗಳಲ್ಲಿ ಈ ಕಾರ್ಯವನ್ನು ವಿಸ್ತರಿಸುವ ಯೋಜನೆ ಹೊಂದಿದ್ದು, ಸದಾ ರೈತ ಬಂಧುವಾಗಿ ಸೇವೆ ಸಲ್ಲಿಸುತ್ತಿರುವ ಸಂಕಲ್ಪ ಸಂಸ್ಥೆ ಮತ್ತು ಎಸ್ಬಿಐ ಫೌಂಡೇಶನ್ ಈ ಕಾರ್ಯಕ್ಕೆ ನಿರಂತರ ಬೆಂಬಲ ನೀಡುತ್ತಿದೆ. ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಲು ಮುಂದಾಗಬೇಕು ಎನ್ನುತ್ತಾರೆ ಸಂಕಲ್ಪ ಸಂಸ್ಥೆಯ ಸಿಇಒ ಸಿಕಂದರ ಮೀರಾನಾಯಕ.
ಗ್ರಾಮದ ಜನರು ನಮ್ಮ ರೈತ ಬಂಧು ಯೋಜನೆಗೆ ಕೈಜೋಡಿಸಿದರೆ ಹೆಚ್ಚು ಹೆಚ್ಚು ಕೆಲಸ ಮಾಡಲು ಸಾಧ್ಯವಾಗುತ್ತದೆ. ಸಂಕಲ್ಪ ಸಂಸ್ಥೆ ಅದ್ಭುತ ಕೆಲಸ ಮಾಡುತ್ತಿದೆ. ರೈತರು ಇದರ ಸದುಪಯೋಗ ಪಡೆದುಕೊಂಡು, ಅಂತರ್ಜಲ ಮಟ್ಟ ಹೆಚ್ಚಿಸಿ ಉತ್ತಮ ಬೆಳೆಗಳನ್ನು ಬೆಳೆಸಿ ದೇಶಕ್ಕೆ ಉತ್ತಮ ಆಹಾರ ಒದಗಿಸುವಂತಾಬೇಕು.
– ಸಂಜಯ್ ಪ್ರಕಾಶ್.
ಎಸ್ಬಿಐ ಫೌಂಡೇಶನ್ನ ಎಂ.ಡಿ.
ನಮ್ಮನ್ನು ಗುರುತಿಸಿ ನಮ್ಮ ಜಿಲ್ಲೆಯಲ್ಲಿಯೇ ಕೆಲಸ ಮಾಡಲು ನಮಗೆ ಅವಕಾಶ ಮಾಡಿಕೊಟ್ಟ ಎಸ್ಬಿಐ ಫೌಂಡೇಶನ್ಗೆ ಕೃತಜ್ಞತೆಗಳು. ಈ ಯೋಜನೆಯ ಯಶಸ್ಸು ಭವಿಷ್ಯದ ಪೀಳಿಗೆಗೆ ಕೃಷಿ ಅಭಿವೃದ್ಧಿಯ ಮಹತ್ವವನ್ನು ಸಾರಲಿದೆ.
– ಸಿಕಂದರ ಮೀರಾನಾಯಕ.
ಸಂಕಲ್ಪ ಸಂಸ್ಥೆಯ ಸಿಇಒ.