ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಸಂಕದಾಳ ಗ್ರಾಮದ ಹಳ್ಳದಲ್ಲಿನ ಬಾಂದಾರದ ಹಿನ್ನೀರಿಗೆ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಶಾಸಕ ಡಾ. ಚಂದ್ರು ಲಮಾಣಿ ಭೂಮಿಪೂಜೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಅವರು, ಶಿರಹಟ್ಟಿ ತಾಲೂಕು ವ್ಯಾಪ್ತಿಯಲ್ಲಿನ ಹಳ್ಳಕ್ಕೆ ಅಡ್ಡಲಾಗಿ 8/10 ವರ್ಷಗಳ ಹಿಂದೆ ನಿರ್ಮಿಸಿದ ಬಾಂದಾರಗಳಿಗೆ ಎರಡೂ ಬದಿ ತಡೆಗೋಡೆ ನಿರ್ಮಿಸದೇ ಇರುವುದರಿಂದ ಮಳೆಗಾಲದಲ್ಲಿ ನೀರಿನ ರಭಸಕ್ಕೆ ಬಾಂದಾರಕ್ಕೆ ಹೊಂದಿಕೊಂಡಿರುವ ರೈತರ ಜಮೀನುಗಳು ಕೊಚ್ಚಿಹೋಗಿವೆ. ರೈತರ ಪಾಲಿಗೆ ಅನೂಕೂಲವಾಗಬೇಕಿದ್ದ ಬಾಂದಾರಗಳಿಂದ ರೈತರು ಜಮೀನು ಕಳೆದುಕೊಳ್ಳುವಂತಾಗಿದೆ ಮತ್ತು ಜಲಮೂಲ ಸಂಗ್ರಹದ ಉದ್ದೇಶವೂ ಈಡೇರಿಲ್ಲ. ಸರ್ಕಾರದ ಹಣವೂ ಪೋಲಾದಂತಾಗಿದೆ. ಅವೈಜ್ಞಾನಿಕ ಕಾಮಗಾರಿಯಿಂದ ಜಮೀನು ಕೊಚ್ಚಿಹೋಗಿ ರೈತರು ಸಂಬಂಧಪಟ್ಟ ಸಣ್ಣ ನೀರಾವರಿ ಇಲಾಖೆಗೆ ಅಲೆದು ಸುಸ್ತಾಗಿದ್ದಾರೆ. ಸಣ್ಣ ನೀರಾವರಿ ಇಲಾಖೆ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಆದ್ಯತೆಯನುಸಾರ ತಡೆಗೋಡೆ ನಿರ್ಮಾಣ ಕಾರ್ಯ ಮಾಡಲಾಗುತ್ತಿದೆ ಎಂದರು.
ಈ ವೇಳೆ ರೈತರಾದ ನಾಗಪ್ಪ ಹರಿಜನ, ಹಾಲಪ್ಪ ಸೂರಣಗಿ, ನಾಗನಗೌಡ ಪಾಟೀಲ, ದುರ್ಗಪ್ಪ ಹರಿಜನ, ಸೋಮಣ್ಣ ನೀಲಗುಂದ, ಕೆಂಚಪ್ಪ ಸೂರಣಗಿ, ವಿರೂಪಾಕ್ಷಪ್ಪ ಬಾಲೆಹೊಸೂರ, ನಿಂಗಪ್ಪ ಗೌರಿ, ಬಸನಗೌಡ ಪಾಟೀಲ, ಗಣೇಶ ಲಮಾಣಿ, ಕಿರಣ ಲಮಾಣಿ, ಮುತ್ತು ಬಳ್ಳೊಳ್ಳಿ, ಗಂಗಾಧರ ಮೆಣಸಿನಕಾಯಿ, ಟಾಕಪ್ಪ ಪವಾರ, ಗುತ್ತಿಗೆದಾರ ವಿ.ಎಸ್. ಪೂಜಾರ ಇದ್ದರು.



