ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ತಮ್ಮದೆನ್ನುವ ಎಲ್ಲವನ್ನೂ ಸಮಾಜದ ಉದ್ಧಾರಕ್ಕೆ ಧಾರೆಯೆರೆದ ಶಿರಸಂಗಿಯ ಲಿಂಗರಾಜ ದೇಸಾಯಿಯವರ ಬದುಕು ಆದರ್ಶಮಯ ಹಾಗೂ ಮಾನವ ಕುಲಕ್ಕೆ ಮಾದರಿಯಾಗಿದೆ ಎಂದು ರೋಣ ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಸಮೀಪದ ನಿಡಗುಂದಿ ಗ್ರಾಮದ ಕೆ.ಪಿ. ಅಣಗೌಡ್ರ ಅವರ ಜಾಗದಲ್ಲಿ ಇತ್ತೀಚೆಗೆ ನಡೆದ ತ್ಯಾಗವೀರ ಶಿರಸಂಗಿ ಲಿಂಗರಾಜರ ಸಮುದಾಯ ಭವನದ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಉತ್ತರ ಕರ್ನಾಟಕದ ಅನೇಕ ಶಿಕ್ಷಣ ಸಂಸ್ಥೆಗಳು ಬೆಳೆದು ಬರುವಲ್ಲಿ ಲಿಂಗರಾಜರ ಕಾಣಿಕೆ ಬಹಳಷ್ಟು ದೊಡ್ಡದಿದೆ. ಅವರ ದಾನ ಗುಣವನ್ನು ನಾವೆಲ್ಲರೂ ಅಳವಡಿಸಿಕೊಳ್ಳುವುದು ಅವಶ್ಯವಿದೆ. ದಾನಕ್ಕೆ ಹೆಸರಾಗಿದ್ದ ಶಿರಸಂಗಿಯ ಸಂಸ್ಥಾನದಲ್ಲಿ ಲಿಂಗರಾಜರು ನೀಡುತ್ತಿದ್ದ ನ್ಯಾಯ ಸರ್ವಸಮ್ಮತವಾಗಿರುತ್ತಿತ್ತು. ಹೀಗಾಗಿ ಅವರನ್ನು ಎಲ್ಲರೂ ಗೌರವದಿಂದ ಕಾಣುತ್ತಿದ್ದರು. ಬೆಳೆಯುವ ಮಕ್ಕಳಿಗೆ ಲಿಂಗರಾಜರ ಜೀವನ ಚರಿತ್ರೆಯ ಬಗ್ಗೆ ತಿಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಯುಸೂಫ್ ಇಟಗಿ, ಬಸವರಾಜ ನವಲಗುಂದ, ಶಶಿಧರ ಹೊಟ್ಟಿನ, ಅಂದಪ್ಪ ಅಣಗೌಡ್ರ, ವೀರೇಶ ಹೊಟ್ಟಿನ, ಕಳಕಪ್ಪ ಹೊಟ್ಟಿನ, ಪರಪ್ಪ ಅಣಗೌಡ್ರ, ವಿನೋದ ಇಟಗಿ, ಮಂಜುನಾಥ ಕಳಕಣ್ಣವರ, ಚಂದ್ರು ಗಂಗರಗೊಂಡ, ಪ್ರಸಾದ ಅಣಗೌಡ್ರ, ರಮೇಶ ಸೇಬಗೊಂಡ ಇದ್ದರು.