ಪ್ರತಿ ಗ್ರಾ.ಪಂಗಳಲ್ಲಿಯೂ ಗ್ಯಾರಂಟಿ ಸಭೆ ಆಯೋಜನೆ

0
Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ: ಧಾರವಾಡ ತಾಲೂಕಾ ಗ್ಯಾರಂಟಿ ಸಮಿತಿ ಸಭೆಯು ಶುಕ್ರವಾರ ಬೆಳಿಗ್ಗೆ ತಾಲೂಕು ಪಂಚಾಯತ ಸಭಾಂಗಣದಲ್ಲಿ ಸಮಿತಿ ಅಧ್ಯಕ್ಷ ಅರವಿಂದ ಏಗನಗೌಡರ ಅವರ ಅಧ್ಯಕ್ಷತೆಯಲ್ಲಿ ಜರುಗಿತು.

Advertisement

ಸಭೆಯಲ್ಲಿ ಮಾಹಿತಿ ಪಡೆದ ನಂತರ ಅಧ್ಯಕ್ಷ ಅರವಿಂದ ಏಗನಗೌಡರ ಮಾತನಾಡಿ, ಗ್ಯಾರಂಟಿ ಯೋಜನೆಯ ಅನುಕೂಲತೆಗಳನ್ನು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಸಾರ್ವಜನಿಕರಿಗೆ ತಲುಪಿಸಲು ಗ್ಯಾರಂಟಿ ಯೋಜನೆಯ ಸಭೆಯನ್ನು ಪ್ರತಿ ಗ್ರಾಮ ಪಂಚಾಯಿತಿವಾರು ಆಯಾ ಗ್ರಾಮಗಳಲ್ಲಿ ಆಯೋಜಿಸಲಾಗುವುದು ಎಂದು ತಿಳಿಸಿದರು.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಧಾರವಾಡ ಘಟಕ ವ್ಯವಸ್ಥಾಪಕರು ಮಾತನಾಡಿ, ಶಕ್ತಿ ಯೋಜನೆಯಡಿಯಲ್ಲಿ ಮಾರ್ಚ್ ತಿಂಗಳಲ್ಲಿ ಒಟ್ಟು 32,99,309 ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಈ ವಧಿಯಲ್ಲಿ ಮಹಿಳಾ ಪ್ರಯಾಣಿಕರಿಂದ ರೂ, 4,77,62,102ಗಳಷ್ಟು ಆದಾಯ ಜಮೆ ಆಗಿದೆ ಎಂದು ತಿಳಿಸಿದರು.

ಧಾರವಾಡ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮಾತನಾಡಿ, ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ ಫಲಾನುಭವಿ ಪಡಿತರದಾರರ ಸಂಖ್ಯೆ-53543, ಯೋಜನೆಗೆ ನೋಂದಣಿಯಾದ ಫಲಾನುಭವಿಗಳ ಸಂಖ್ಯೆ-53364 ಇದ್ದು, ಈ ಎಲ್ಲ ಅರ್ಹ ಫಲಾನುಭವಿಗಳು ಗೃಹಲಕ್ಷ್ಮೀ ಯೋಜನೆಯ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ. ಅದರಂತೆ ಸದರಿ ಫಲಾನುಭವಿಗಳಿಗೆ ಹಣ ಸಂದಾಯವಾಗಿದೆ ಎಂದು ಸಭೆಗೆ ತಿಳಿಸಿದರು.

ಹೆಸ್ಕಾಂ ಧಾರವಾಡ (ಶಹರ) ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಮಾತನಾಡಿ, ಗೃಹಜ್ಯೋತಿ ಯೋಜನೆಯಡಿಯಲ್ಲಿ ಧಾರವಾಡ ಶಹರದ ವ್ಯಾಪ್ತಿಯಲ್ಲಿ ಒಟ್ಟು 32066 ಜನ ಗೃಹಜ್ಯೋತಿ ಬಳಕೆದಾರ ಅರ್ಹ ಫಲಾನುಭವಿಗಳಿದ್ದಾರೆ. ಈ ಯೋಜನೆಯಡಿ ಮಾರ್ಚ್-2025ರ ಅಂತ್ಯಕ್ಕೆ ರೂ 2288.8 ಲಕ್ಷಗಳಷ್ಟು ಖರ್ಚಾಗಿದೆ ಎಂದು ತಿಳಿಸಿದರು.

ಹೆಸ್ಕಾಂ ಧಾರವಾಡ (ಗ್ರಾಮೀಣ) ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಮಾತನಾಡಿ, ಗೃಹಜ್ಯೋತಿ ಯೋಜನೆಯಡಿಯಲ್ಲಿ ಧಾರವಾಡ ಗ್ರಾಮೀಣ ವ್ಯಾಪ್ತಿಯಲ್ಲಿ ಒಟ್ಟು 55177 ಗೃಹಜ್ಯೋತಿ ಬಳಕೆದಾರ ಅರ್ಹ ಫಲಾನುಭವಿಗಳಿದ್ದಾರೆ. ಜುಲೈ 01, 2023ರಿಂದ ಇಲ್ಲಿಯವರೆಗೆ ಈ ಯೋಜನೆಯಡಿ 3090.41 ಲಕ್ಷ ರೂ.ಗಳಷ್ಟು ಖರ್ಚಾಗಿರುತ್ತದೆ ಎಂದು ತಿಳಿಸಿದರು.

ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಅಧಿಕಾರಿ ಮಾತನಾಡಿ, ಯುವ ನಿಧಿ ಯೋಜನೆಯಡಿ ಒಟ್ಟು 2503 ಜನ ಅಭ್ಯರ್ಥಿಗಳು ಆಯ್ಕೆ ಆಗಿದ್ದಾರೆ. ಧಾರವಾಡ ತಾಲೂಕಿನ ಒಟ್ಟು1704 ಫಲಾನುಭವಿಗಳ ಭಾಕಿ 799 ಪದವಿ ವಿದ್ಯಾರ್ಥಿಗಳಿಗೆ ಸಂದಾಯವಾದ ವೆಚ್ಚ ರೂ, 2,40,06,000 ಮತ್ತು ಡಿಪ್ಲೋಮಾ ವಿದ್ಯಾರ್ಥಿಗಳಿಗೆ 1,48,500, ಒಟ್ಟಾರೆ ಸದರಿ ವಿದ್ಯಾರ್ಥಿಗಳಿಗೆ ರೂ. 2,41,54,500 ನೀಡಲಾಗಿದೆ ಎಂದರು.

ಸಭೆಯಲ್ಲಿ ತಾಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಯ ಸರ್ವ ಸದಸ್ಯರು, ತಹಸೀಲ್ದಾರ್ ಡಿ.ಎಚ್. ಹೂಗಾರ, ಸಮಿತಿಯ ಸದಸ್ಯ ಕಾರ್ಯದರ್ಶಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರ ಕಂದಕೂರ ಹಾಗೂ ಧಾರವಾಡ ಗ್ಯಾರಂಟಿ ಯೋಜನೆ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ಅನ್ನಭಾಗ್ಯ ಯೋಜನೆಯ ಪ್ರಗತಿ ಕುರಿತು, ಧಾರವಾಡ ತಾಲೂಕು ಆಹಾರ ವಿಭಾಗದ ತಹಸೀಲ್ದಾರರು ಮಾತನಾಡಿ, ಧಾರವಾಡ ತಾಲೂಕಿನ ಗ್ರಾಮೀಣ ಭಾಗದಲ್ಲಿ ಅನ್ನಭಾಗ್ಯ ಯೋಜನೆಯಡಿಯಲ್ಲಿ ಒಟ್ಟು 53036 ಪಡಿತರ ಚೀಟಿಗಳಿದ್ದು, ಒಟ್ಟು 70 ನ್ಯಾಯಬೆಲೆ ಅಂಗಡಿಗಳು ಕಾರ್ಯನಿರ್ವಹಿಸುತ್ತಿವೆ. ಪೆಬ್ರುವರಿ-2025ರಿಂದ ಸರ್ಕಾರದ ಆದೇಶದ ಪ್ರಕಾರ 5 ಕೆ.ಜಿ ಅಕ್ಕಿಯನ್ನು ನೀಡಲಾಗುತ್ತಿದೆ ಎಂದರು.


Spread the love

LEAVE A REPLY

Please enter your comment!
Please enter your name here