ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕೃಷಿ ಕೆಲಸಗಳು ಮುಗಿದು ಬೇಸಿಗೆ ಕಾಲದಲ್ಲಿ ಗ್ರಾಮೀಣ ಭಾಗದ ಜನರು, ಕೃಷಿ ಕೂಲಿಕಾರರು ಉದ್ಯೋಗ ಅರಸಿ ಪಟ್ಟಣದ ಪ್ರದೇಶಗಳಿಗೆ ಹೋಗುವುದನ್ನು ತಪ್ಪಿಸಲು ಗ್ರಾಮಗಳಲ್ಲಿಯೇ ಜನರಿಗೆ ಉದ್ಯೋಗ ಕಲ್ಪಿಸುವ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳು ಎಪ್ರಿಲ್ 1ರಿಂದ ಪ್ರಾರಂಭವಾಗಲಿವೆ.
ಗ್ರಾಮೀಣ ಪ್ರದೇಶದ ಜನರಿಗೆ ತಮ್ಮ ಗ್ರಾಮದಲ್ಲಿಯೇ ಕುಟುಂಬ ನಿರ್ವಹಣೆಗೆ ಅನುಕೂಲ ಮಾಡಿಕೊಡುವುದು ಉದ್ಯೋಗ ಖಾತ್ರಿ ಯೋಜನೆ ಆದ್ಯ ಗುರಿಯಾಗಿದೆ. ಕೂಲಿ ಆಧಾರಿತ ಖಾತ್ರಿ ಕಾಮಗಾರಿಗೆ ಮತ್ತೆ ಚಾಲನೆ ದೊರೆಯಲಿದ್ದು, ಸ್ಥಳೀಯವಾಗಿಯೇ ಉದ್ಯೋಗ ಒದಗಿಸುವ ದೃಷ್ಟಿಯಿಂದ ಉದ್ಯೋಗ ಖಾತ್ರಿ ಪ್ರಾರಂಭಿಸಲಾಗುತ್ತಿದೆ. ಒಂದು ವರ್ಷದಲ್ಲಿ ಪ್ರತಿಯೊಬ್ಬ ಕೂಲಿ ಕಾರ್ಮಿಕನಿಗೆ 100 ದಿನಗಳ ಉದ್ಯೋಗ ಖಾತ್ರಿ ಕಾಮಗಾರಿ ದೊರೆಯಲಿದೆ. ಗ್ರಾಮೀಣ ಜನರ ವರದಾನವಾದ ಉದ್ಯೋಗ ಖಾತ್ರಿ ಕಾಮಗಾರಿಗಳನ್ನು ಬೇಸಿಗೆ ಕಾಲದಲ್ಲಿ ಪ್ರಾರಂಭಿಸುವುದರಿಂದ ಜನರ ಸ್ವಾವಲಂಬಿ ಬದುಕಿಗೆ ಆಸರೆಯಾಗಲಿದೆ.
ನರೇಗಾ ಕಾಮಗಾರಿಯನ್ನು ಪಾರದರ್ಶಕವಾಗಿಸಲು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಪ್ರಸಕ್ತ ಸಾಲಿನಲ್ಲಿ ನರೇಗಾ ಕೆಲಸದ ಸಂದರ್ಭದಲ್ಲಿ ಪ್ರತಿ ದಿನ 2 ಬಾರಿ ಹಾಜರಾತಿ ಕಡ್ಡಾಯಗೊಳಿಸಿದೆ. ಉದ್ಯೋಗ ಖಾತ್ರಿ ಯೋಜನೆಯು ಗ್ರಾಮೀಣ ಜನರಿಗೆ ಉದ್ಯೋಗ ಒದಗಿಸುವುದರೊಂದಿಗೆ ನೀರು, ಮಣ್ಣು ಸಂರಕ್ಷಣೆಯ ಉದ್ದೇಶ ಹೊಂದಿದೆ. ರೈತರ ಜಮೀನಿನಲ್ಲಿ ಫಲವತ್ತತೆ ಹಾಗೂ ಅಂತರ್ಜಲ ವೃದ್ಧಿಗೆ ಅನುಕೂಲ ಕಲ್ಪಸಿದೆ. ಅಲ್ಲದೇ ಗ್ರಾಮೀಣ ಜನರ ಅಗತ್ಯತೆ ಮತ್ತು ಅಭಿವೃದ್ಧಿಗೂ ಆದ್ಯತೆ ನೀಡಲಾಗುತ್ತದೆ.
ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಪ್ರತಿ ದಿನಕ್ಕೆ 349 ರೂ. ಕೂಲಿ ನೀಡಲಾಗುತ್ತಿದೆ. ಮಹಿಳೆಯರು, ಪುರುಷರು ಎಂಬ ತಾರತಮ್ಯವಿಲ್ಲದೆ ಸಮಾನ ಕೆಲಸಕ್ಕೆ ಸಮಾನ ಕೂಲಿ ನೀಡಲಾಗುತ್ತಿದ್ದು, ಗ್ರಾಮೀಣ ಪ್ರದೇಶದ ಜನರು ಯೋಜನೆಯ ಲಾಭ ಪಡೆದುಕೊಳ್ಳಬೇಕು ಎನ್ನುವದು ಇಲಾಖೆಯ ಉದ್ದೇಶವಾಗಿದೆ.
ಬೇಸಿಗೆ ಆರಂಭವಾಗಿರುವ ಹಿನ್ನೆಲೆಯಲ್ಲಿ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮೀಣ ಜನರಿಂದ ಉದ್ಯೋಗ ಬೇಡಿಕೆ ಸಂಗ್ರಹಿಸಿ ತಕ್ಷಣ ಉದ್ಯೋಗ ಒದಗಿಸಲು ಹಾಗೂ ಸಕಾಲದಲ್ಲಿಯೇ ಕೂಲಿ ಪಾವತಿ ಮಾಡಲು ಎಲ್ಲ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮತ್ತು ಅನುಷ್ಠಾನ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ. ಕೂಲಿಕಾರರು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡಿಕೊಂಡಿರಬೇಕು. ಇದರಿಂದ
ತಾಲೂಕಿನ ಪ್ರತಿ ಗ್ರಾಮದಲ್ಲಿ ಎಪ್ರಿಲ್ 1ರಿಂದ ಕೆಲಸ ಆರಂಭಿಸಲು ಸೂಚಿಸಲಾಗಿದೆ. ಆದ್ದರಿಂದ ತಾಲೂಕಿನ ಗ್ರಾಮೀಣ ಜನರು ತಮ್ಮ ಗ್ರಾ.ಪಂ ಕಚೇರಿಗೆ ನಮೂನೆ-6ರನ್ನು ಸಲ್ಲಿಸಲು ಕಳೆದು ಎರಡು ಮೂರು ದಿನಗಳಿಂದ ಕಾಯಕ ಬಂಧುಗಳ ಸಭೆ ಮಾಡಿ ಕೂಲಿ ಮೊತ್ತ 349 ರೂ., ಆಧಾರ್ ಆಧಾರಿತ ವೇತನ ಪಾವತಿ, ಎನ್ಎಂಎಂಎಸ್ ಆ್ಯಪ್ ಆಧಾರಿತ ಹಾಜರಾತಿ ಮುಂತಾದ ಅಂಶಗಳ ಕುರಿತು ಮನವರಿಕೆ ಮಾಡಿಕೊಡಲಾಗುತ್ತಿದೆ.
– ಕೃಷ್ಣಪ್ಪ ಧರ್ಮರ.
ಕಾರ್ಯನಿರ್ವಾಹ ಅಧಿಕಾರಿಗಳು ಲಕ್ಷೆö್ಮÃಶ್ವರ.