ವಿಜಯಸಾಕ್ಷಿ ಸುದ್ದಿ, ಗದಗ: ಸಾಮಾನ್ಯವಾಗಿ ನಿವೃತ್ತಿಯ ನಂತರ ಸರ್ಕಾರಿ ಅಧಿಕಾರಿಗಳು ಖಾಸಗಿಯಾಗಿ ವಿಶ್ರಾಂತ ಜೀವನ ಕಳೆಯಲು ಹಾತೊರೆಯುತ್ತಿರುತ್ತಾರೆ. ಆದರೆ, ರವಿ ಎಲ್.ಗುಂಜೀಕರ ಅವರು ತಮ್ಮ ನಿವೃತ್ತಿಯ ಅಂಗವಾಗಿ ರಕ್ತದಾನ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡಿದ್ದು, ಶ್ರೀಯುತರ ಸಾಮಾಜಿಕ ಪ್ರಜ್ಞೆ ಅನುಕರಣೀಯ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್.ಎಸ್. ನೀಲಗುಂದ ಮೆಚ್ಚುಗೆ ವ್ಯಕ್ತಪಡಿಸಿದರು.
ಅವರು ಶುಕ್ರವಾರ ನಗರದ ಸರ್ಕಾರಿ ನೌಕರರ ಭವನದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿಗಳು ಹಾಗೂ ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ರವಿ ಗುಂಜೀಕರ ಅವರ ನಿವೃತ್ತಿ ಅಂಗವಾಗಿ ಅಂಬಿಕಾ ಲ್ಯಾಬ್ ಸೆಂಟರ್ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.
ರಕ್ತದಾನ ಶ್ರೇಷ್ಠ ದಾನವಾಗಿದ್ದು, ತುರ್ತು ಪರಿಸ್ಥಿತಿಯಲ್ಲಿ ಜೀವರಕ್ಷಕ ಸಂಪತ್ತಾಗಿದೆ. ರಕ್ತದಾನ ಶಿಬಿರದ ಜೊತೆಗೆ ರೋಗಿಗಳಿಗೆ ಆಹಾರ ವಿತರಿಸುವ ಕಾರ್ಯವನ್ನೂ ರವಿ ಗುಂಜೀಕರ ಅವರ ಅಭಿಮಾನಿ ಬಳಗ ಹಮ್ಮಿಕೊಂಡಿದ್ದು, ಭವಿಷ್ಯದಲ್ಲಿ ಇಂಥ ಅನೇಕ ಸಾಮಾಜಿಕ ಕಳಕಳಿಯ ಕಾರ್ಯಗಳನ್ನು ಮಾಡಲು ರವಿ ಗುಂಜೀಕರ ಅವರಿಗೆ ದೇವರು ಶಕ್ತಿ ನೀಡಲಿ ಎಂದು ಹಾರೈಸಿದರು.
ವೈದ್ಯಾಧಿಕಾರಿಗಳಾದ ಡಾ. ವೀರೇಶ ಹಂಚಿನಾಳ ಮಾತನಾಡಿ, ಈ ದಿನಗಳಲ್ಲಿ ಒಂದು ಸಾರ್ವಜನಿಕ ಕಾರ್ಯಕ್ರಮ ಹಮ್ಮಿಕೊಳ್ಳುವುದು ಸವಾಲಿನ ಸಂಗತಿ. ಹಾಗಿರುವಾಗ, ರವಿ ಗುಂಜೀಕರ ಅವರು ಸಾರ್ವಜನಿಕ ಕಾರ್ಯಕ್ರಮಗಳ ಸರಣಿಯನ್ನೇ ಆಯೋಜಿಸಿರುವುದು ಅಭಿನಂದನೀಯ. ರಕ್ತದಾನದ ಕುರಿತು ಜನರಲ್ಲಿ ಪೂರ್ವಾಗ್ರಹಗಳಿದ್ದು, ಅವುಗಳಿಂದ ಮುಕ್ತರಾಗಿ ರಕ್ತದಾನ ಮಾಡುವ ಮೂಲಕ ಪ್ರಾಣರಕ್ಷಣೆ ಮಾಡಬೇಕಿದೆ ಎಂದರು.
ಡಾ. ಜಯಕುಮಾರ ಬ್ಯಾಳಿ ಹಾಗೂ ಅಂಬಿಕಾ ಲ್ಯಾಬ್ ಸೆಂಟರ್ ನಿರ್ದೇಶಕರಾದ ಡಾ.ಅನಂತ ಶಿವಪೂರ ಮಾತನಾಡಿ, ರಕ್ತದಾನದ ಮಹತ್ವ ಹಾಗೂ ಗುಂಜೀಕರ ಅವರ ಪರೋಪಕಾರಿ ಮನೋಭಾವವನ್ನು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರವಿ ಗುಂಜೀಕರ ಮಾತನಾಡಿ, ನನ್ನ ನಿವೃತ್ತಿ ಅಂಗವಾಗಿ ಕಛೇರಿಯಿಂದ ಸಾರೋಟಿನಲ್ಲಿ ಮೆರವಣಿಗೆ ಮಾಡುತ್ತೇವೆ ಎಂದು ನನ್ನ ಆತ್ಮೀಯರು ಹಾಗೂ ಸಿಬ್ಬಂದಿಗಳು ಹೇಳಿದಾಗ ನಾನು ಅದನ್ನೆಲ್ಲ ನಿರಾಕರಿಸಿ ಇಂಥ ಸಾಮಾಜಿಕ ಸೇವಾಕಾರ್ಯಗಳನ್ನು ಹಮ್ಮಿಕೊಳ್ಳುವಂತೆ ಪ್ರೋತ್ಸಾಹಿಸಿದೆ. ರಕ್ತದಾನ ಮಹಾನ್ ಪುಣ್ಯದ ಕಾರ್ಯವಾಗಿದ್ದು, ಜೀವ ರಕ್ಷಕರಾದ ರಕ್ತದಾನಿಗಳನ್ನು ಎಷ್ಟು ಕೊಂಡಾಡಿದರೂ ಸಾಲದು ಎಂದರು.
ಸುಮಾರು 50ಕ್ಕೂ ಹೆಚ್ಚು ಜನರಿಂದ ರಕ್ತದಾನ ಜರುಗಿತು. ಈ ಸಂದರ್ಭದಲ್ಲಿ ಆರ್.ಡಿ. ಕಡ್ಲಿಕೊಪ್ಪ ಹಾಗೂ ಶಶಿಧರ ರೊಳ್ಳಿಯವರು ರವಿ ಗುಂಜೀಕರ ನಿವೃತ್ತಿ ಅಂಗವಾಗಿ ಅವರನ್ನು ಹಾಗೂ ನೂತನ ಸರ್ಕಾರಿ ನೌಕರರ ಜಿಲ್ಲಾಧ್ಯಕ್ಷ ಬಸವರಾಜ ಬಳ್ಳಾರಿಯವರನ್ನು ಸನ್ಮಾನಿಸಿದರು.
ಭಾರತಿ ತಂಬ್ರಳ್ಳಿ ಪ್ರಾರ್ಥಿಸಿದರು. ಸರ್ಕಾರಿ ನೌಕರರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಪ್ರೇಮನಾಥ ಗರಗ, ರವಿ ಗುಂಜೀಕರ ಅಭಿಮಾನಿ ಸಂಘದ ಅಧ್ಯಕ್ಷ ಅರುಣಕುಮಾರ ಚವ್ಹಾಣ, ಎಸ್.ಆರ್. ಹಿರೇಮಠ, ಕೆ.ಎಫ್. ಹಳ್ಯಾಳ, ಆರ್.ಎಂ. ನಿಂಬನಾಯ್ಕರ್, ಮಂಜು ಮಾನೆ, ಶಿವಾಜಿ ಪಾವನ ಸೇರಿದಂತೆ ರವಿ ಗುಂಜೀಕರ ಅಭಿಮಾನಿಗಳು ಹಾಗೂ ವೈದ್ಯಾಧಿಕಾರಿಗಳು ಹಾಜರಿದ್ದರು.
“ತಾನು-ತನ್ನದು ಎಂಬ ಸ್ವಾರ್ಥವನ್ನು ತೊರೆದು ಇತರರ ಹಿತಕ್ಕಾಗಿ ಮಿಡಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ನಾನು ವೃತ್ತಿಯಲ್ಲಿ ಇದ್ದಾಗಲೂ ಸಮಾಜಸೇವೆ ಮಾಡಿದ್ದೇನೆ, ನಿವೃತ್ತಿ ನಂತರವೂ ಅದು ಮುಂದುವರೆದಿದೆ. ಹಾಗಾಗಿ ಈ ಕಾರ್ಯಕ್ರಮಗಳಿಗೆ ಬೇರೆ ಅರ್ಥಕಲ್ಪಿಸುವ ಅವಶ್ಯಕತೆ ಇಲ್ಲ”
– ರವಿ ಗುಂಜೀಕರ.
ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ಜಿಲ್ಲಾಧ್ಯಕ್ಷ.