ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಗುರು-ವಿರಕ್ತರು ಬೇರೆ ಬೇರೆಯಲ್ಲ. ಅವರು ಎಂದಿಗೂ ಒಂದಾಗಿರಬೇಕು. ಇಬ್ಬರೂ ಮಾಡುತ್ತಿರುವುದು ಒಂದೇ ಕಾರ್ಯ. ಇದರಲ್ಲಿ ಯಾವುದೇ ಭೇದ-ಭಾವ ಬೇಡ. ಇದು ಶ್ರೀ ಹಾನಗಲ್ಲ ಗುರು ಕುಮಾರೇಶ್ವರರ ಆಶಯವೂ ಆಗಿತ್ತು ಎಂದು ಹಾಲಕೆರೆ ಸಂಸ್ಥಾನದ ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳವರು ಹೇಳಿದರು.
ನರೇಗಲ್ಲ ಹಿರೇಮಠದ ಜಾತ್ರಾಮಹೋತ್ಸವದ ಅಂಗವಾಗಿ ನಡೆದಿರುವ ಶ್ರೀ ಗುರು ಹಾನಗಲ್ಲ ಗುರು ಕುಮಾರೇಶ್ವರರ ಪುರಾಣ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ನಮ್ಮ ಗುರುಗಳಾಗಿದ್ದ ಲಿಂ. ಡಾ. ಅಭಿನವ ಅನ್ನದಾನ ಮಹಾಸ್ವಾಮಿಗಳವರ ಕನಸೂ ಸಹ ಅದೇ ಆಗಿತ್ತು. ಅದಕ್ಕಾಗಿಯೆ ನಮ್ಮ ಪಟ್ಟಾಧಿಕಾರದ ಸಮಯದಲ್ಲಿ ಧರ್ಮ ಧ್ವಜಾರೋಹಣವನ್ನು ಅವರು ನರೇಗಲ್ಲ ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶ್ರೀಗಳವರಿಂದಲೆ ಮಾಡಿಸಿದ್ದರು. ಹಾನಗಲ್ಲ ಶ್ರೀಗಳವರ ಪುರಾಣವು ಎಲ್ಲ ಸ್ವಾಮಿಗಳು ತಮ್ಮ ಆತ್ಮಾವಲೋಕನ ಮಾಡಿಕೊಳ್ಳುವಂತಿದೆ. ಅವರು ತಮಗಾಗಿ ಎಂದಿಗೂ ಬದುಕದೆ ಸಮಾಜಕ್ಕಾಗಿ, ಸಮಾಜೋದ್ಧಾರಕ್ಕಾಗಿ ಬದುಕಿದರು. ಇವರು ಜನಿಸಿ ಬರುತ್ತಾರೆ ಎಂಬ ಭವಿಷ್ಯವನ್ನು ಗಟ್ಟಿವಾಳಯ್ಯ ಎಂಬ ಶರಣರು ಒಂಬೈನೂರು ವರ್ಷಗಳ ಹಿಂದೆಯೆ ಹೇಳಿದ್ದರು. ಅದು ನಿಜವಾಯಿತಲ್ಲದೆ ಒಡೆದು ಛಿದ್ರವಾಗಿ ಹೋದ ವೀರಶೈವ ಸಮಾಜವನ್ನು ಮತ್ತೆ ಒಂದುಗೂಡಿಸುವಲ್ಲಿ ಅವರ ಪಾತ್ರ ದೊಡ್ಡದು ಎಂದು ಶ್ರೀಗಳು ಹೇಳಿದರು.
ಶ್ರೀ ಅನ್ನದಾನ ಸಂಸ್ಥೆಯಿAದ ಶೈಕ್ಷಣಿಕ ಸಂಸ್ಥೆಗಳು ಪ್ರಾರಂಭವಾಗಲು ಹಾನಗಲ್ಲ ಕುಮಾರೇಶ್ವರರೆ ಮೂಲ ಕಾರಣ. ಅವರ ಪ್ರೇರಣೆಯಿಂದ ಬೆತ್ತದ ಅಜ್ಜನವರು ಅನುಷ್ಠಾನಕ್ಕೆ ಕುಳಿತದ್ದು ಮತ್ತು ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿದ್ದು. ಕನ್ನಡ ನಾಡಿನ ಮಠಗಳನ್ನು ಉಳಿಸಿ, ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ತಮ್ಮ ಜೀವನದ ಪ್ರತಿ ಕ್ಷಣವನ್ನು ಸಮಾಜದ ಉದ್ಧಾರಕ್ಕಾಗಿಯೆ ತೇಯ್ದವರು ಕುಮಾರೇಶ್ವರರು. ಭೌತಿಕ ವಸ್ತುಗಳಿಂದ ಯಾವ ಸುಖವೂ ಇಲ್ಲ. ಅಂತರಂಗದಲ್ಲಿ ಪರಿವರ್ತನೆಯಾದಾಗ ಮಾತ್ರ ಮನುಷ್ಯನಲ್ಲಿ ಏನಾದರೂ ಬದಲಾವಣೆಯಾಗಲು ಸಾಧ್ಯ. ಇಂತಹ ಬದಲಾವಣೆಯನ್ನು ನಿಮ್ಮಲ್ಲಿ ತರಲು ಶ್ರೀ ಮಲ್ಲಿಕಾರ್ಜುನ ಶ್ರೀಗಳವರು ಈ ಜಾತ್ರಾ ಮಹೋತ್ಸವವನ್ನು ಏರ್ಪಡಿಸಿ, ಪುರಾಣವನ್ನು ಹಚ್ಚಿ ನಿಮ್ಮೆಲ್ಲರಿಗೂ ಸಂಸ್ಕಾರದ ರಸದೌತಣವನ್ನೇ ಉಣಬಡಿಸುತ್ತಿದ್ದಾರೆ. ಇದು ಶ್ಲಾಘನೀಯ ಎಂದರು.
ಪA. ಅನ್ನದಾನ ಶಾಸ್ತಿçಗಳು ಮಾತನಾಡಿ, ಶಿವಯೋಗ ಮಂದಿರ ಸ್ಥಾಪನೆಯಲ್ಲಿ ಕುಮಾರೇಶ್ವರರ ಪಾತ್ರ ಬಹಳಷ್ಟು ದೊಡ್ಡದಿದೆ. ನೀವು ಶಿವಯೋಗ ಮಂದಿರದ ಸೇವೆಯನ್ನು ಎಂದಿಗೂ ಮಾಡಿ ಪುಣ್ಯ ಸಂಪಾದಿಸಿಕೊಳ್ಳಿ. ಹಾನಗಲ್ಲ ಕುಮಾರೇಶ್ವರರ ಕ್ರಿಯಾಶೀಲತೆಗೆ ಶಿವಯೋಗ ಮಂದಿರವೇ ಸಾಕ್ಷಿಯಾಗಿದೆ ಎಂದರು.