ವಿಜಯಸಾಕ್ಷಿ ಸುದ್ದಿ, ಗದಗ : ಇಲ್ಲಿನ ಶ್ರೀ ಶಿರಡಿ ಸಾಯಿಬಾಬಾ ಸತ್ಸಂಗ ಸಮಿತಿಯಿಂದ ಗುರುಪೂರ್ಣಿಮೆ ಅಂಗವಾಗಿ ಜು. 12ರಿಂದ 20ರವರೆಗೆ ಗದಗ ಹಾತಲಗೇರಿ ರಸ್ತೆಯ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಪ್ರವಚನ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಪ್ರತಿ ದಿನ ಸಂಜೆ 7ರಿಂದ 8 ಗಂಟೆಯವರೆಗೆ ಸಾಂಸ್ಕೃತಿಕ ಹಾಗೂ ಧಾರ್ಮಿಕ ಚಿಂತಕ ಗದುಗಿನ ಡಾ. ಎಸ್.ಬಿ.ಶೆಟ್ಟರ ಇವರಿಂದ ಶ್ರೀ ಸಾಯಿ ಸಚ್ಚರಿತ್ರೆ ಪ್ರವಚನ, ಜು. 14ರಿಂದ 20ರವರೆಗೆ ಪ್ರತಿದಿನ ಮುಂಜಾನೆ 10ರಿಂದ 12 ಗಂಟೆಯವರೆಗೆ ಧ್ಯಾನ ಮಂದಿರದಲ್ಲಿ ಸದ್ಭಕ್ತರಿಂದ ಶ್ರೀ ಸಾಯಿ ಸಚ್ಛರಿತ್ರೆ ಪಾರಾಯಣ ಜರುಗಲಿದೆ.
ಜು. 14ರಂದು ಮುಂಜಾನೆ 8.30ಕ್ಕೆ ಶ್ರೀ ಸಾಯಿಬಾಬಾ ಅವರ ಜೋಳಿಗೆ ಭಿಕ್ಷಾ ಕಾರ್ಯಕ್ರಮವು ಶ್ರೀ ಸಾಯಿ ಮಂದಿರದಿಂದ ಪ್ರಾರಂಭವಾಗಿ ವಿವೇಕಾನಂದ ಬಡಾವಣೆ, ಕರಿಯಮ್ಮಕಲ್ಲ ಬಡಾವಣೆ ಹಾಗೂ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀ ರಾಘವೇಂದ್ರ ಮಠದ ಮುಖಾಂತರ ಸಾಯಿ ಮಂದಿರವನ್ನು ತಲುಪುವದು.
ಜು. 21ರಂದು ಗುರುಪೂರ್ಣಿಮೆ ಕಾರ್ಯಕ್ರಮ ನಡೆಯಲಿದ್ದು, ಬೆಳಿಗ್ಗೆ 6 ಗಂಟೆಗೆ ಕಾಕಡಾರತಿ, ನಂತರ ಬಾಬಾ ಅವರಿಗೆ ಮಂಗಲ ಸ್ನಾನ, ರುದ್ರಾಭಿಷೇಕ, ಅಲಂಕಾರ ಪೂಜೆ, ಮಧ್ಯಾನ್ಹ 12 ಗಂಟೆಗೆ ಪಂಚಾರತಿ ಹಾಗೂ ಸದ್ಭಕ್ತರಿಂದ ಪುಷ್ಪಾರ್ಚನೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5 ಗಂಟೆಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಸೂರ್ಯಾಸ್ತಕ್ಕೆ ಧೂಪಾರತಿ ನಂತರ ಪಲ್ಲಕ್ಕಿ ಉತ್ಸವ, ರಾತ್ರಿ 10 ಗಂಟೆಗೆ ಶೇಜಾರತಿಯೊಂದಿಗೆ ಕಾರ್ಯಕ್ರಮ ಮಹಾಮಂಗಲಗೊಳ್ಳುವದು ಎಂದು ಗದಗ-ಬೆಟಗೇರಿಯ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.